ಯಾದಗಿರಿ/ಶಹಾಪುರ: ಕರ್ನಾಟಕ ಗ್ರಾಮೀಣ ಭಾಗದ ಸಮಗ್ರ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಶ್ರಮಿಸುವೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಮಂಜಮ್ಮ ಜೋಗತಿ ಹೇಳಿದರು.
ಸುರಪುರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿರುವ ಯಾದಗಿರಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ವತಿಯಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಗ್ರಾಮೀಣ ಭಾಗದ ಜಾನಪದ ಕಲಾವಿದರನ್ನು ಗುರುತಿಸಿ ಅವರಿಗೆ ಮಾಸಾಶನ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡುವೆ, ಅಲ್ಲದೆ ಈಗಾಗಲೇ ಕಲಾವಿದರ ಸಮಸ್ಯೆಗಳ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಗಮನಕ್ಕೆ ತರಲಾಗಿದ್ದು ಕಲಾವಿದರ ಸಮಸ್ಯೆಗಳಿಗೆ ಕೂಡ ಅವರು ಸ್ಪಂದಿಸಿ ಉತ್ತಮ ನಿರ್ಧಾರವನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ನೂತನ ಅಧ್ಯಕ್ಷರಾದ ಬಸವರಾಜ ಸಿನ್ನೂರ, ಜಾನಪದ ಕಲಾವಿದ ಮಹೇಶ್ ಪತ್ತಾರ್, ಸಮಾಜ ಸೇವಕ ದೇವಿಂದ್ರಪ್ಪ ಕನ್ಯಾಕೋಳೂರ, ಮುತ್ತಣ್ಣ, ಹರೀಶ್ ಹಾಗೂ ಇತರರು ಉಪಸ್ಥಿತರಿದ್ದರು.