ಕಲ್ಯಾಣದಿಂದ ಕದಳಿಗೆ ಹೊರಟು ನಿಂತ ಅಕ್ಕ

0
60
ಹರನೆ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ
ತಪಸ್ಸಿದ್ದೆ ನೋಡಾ, ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ
ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು. ಭಸ್ಮವನೆ ಹೂಸಿ
ಕಂಕಣವನೆ ಕಟ್ಟಿದರು ಚೆನ್ನಮಲ್ಲಿಕಾರ್ಜುನ ತನಗೆ
ನಾನಾಗಬೇಕೆಂದ.
– ಅಕ್ಕ ಮಹಾದೇವಿ

ವಚನ ಮಳೆ ಸುರಿವ ಅನುಭವ ಮಂಟಪ ಪ್ರವೇಶ ಮಾಡಿದ ಅಕ್ಕ ತಾನು ನಡೆದು ಬಂದ ದಾರಿಯ ಸಿಂಹಾಲೋಕನ ಮಾಡಿಕೊಳ್ಳುತ್ತಾಳೆ. ಬಾಲ್ಯದ ತಂದೆ-ತಾಯಿಯ ಮನೆ, ಗುರುಮನೆ, ಅರಮನೆ, ಕೌಶಿಕ ಷರತ್ತುಗಳನ್ನು ಮುರಿದಾಗ ಸೀರೆ ಬಿಚ್ಚಿ ರಾಜನ ಮುಖಕ್ಕೆ ಎಸೆದು ಅಲ್ಲಿಂದ ಕಾಡು, ಕಾಡಿನಲ್ಲಿ ಮನುಷ್ಯ ವೇಷದ ಕಾಡು ಮೃಗಗಳ ಭೇಟಿ, ಹೆಣದ ಮೇಲಿನ ಸೀರೆ ತೊಟ್ಟುಕೊಂಡದ್ದು ಹೀಗೆ ಅವೆಲ್ಲ ಘಟನೆಗಳು ನೆನಪಿಗೆ ಬಂದವು.

Contact Your\'s Advertisement; 9902492681

ಕಲ್ಯಾಣ ಅವಿಮುಕ್ತ ಕ್ಷೇತ್ರವಾಗಿತ್ತು. ಅಲ್ಲಿ ನಿತ್ಯ ಮೂರು ಗೋಷ್ಠಿಗಳು ನಡೆಯುತ್ತಿದ್ದವು. ಅಲ್ಲಮ, ಚೆನ್ನಬಸವಣ್ಣ, ಸಿದ್ಧರಾಮ ಈ ಮೂವರಲ್ಲಿ ಒಬ್ಬರು ಅಲ್ಲಿರುತ್ತಿದ್ದರು. ಉಳಿದವರು ಕಾಯಕ ಮಾಡಿ ಅಲ್ಲಿಗೆ ಹೆಜ್ಜೆ ಹಾಕುತ್ತಿದ್ದರು. ಇಂತಹ ಅನುಭವ ಮಂಟಪ ಪ್ರವೇಶ ಮಾಡಿದ ಅಕ್ಕನಿಗೆ ಮಡಿವಾಳ ಮಾಚಿದೇವ ಮಡೆ ಹಾಸಿ ತುಳಿದು ಬಾ ತಾಯಿ ಎಂದು ಭಿನ್ನವಿಸಿಕೊಳ್ಳುತ್ತಾನೆ. ಆ ಬಟ್ಟೆಯನ್ನು ಎತ್ತಿಕೊಂಡು ಕಣ್ಣಿಗೆ, ಮೈಗೆ ಒತ್ತಿಕೊಂಡು ” ಮಾಯಾಂಬರದ ಮೈಲಿಗೆ ಕಳೆದ ಮಡಿವಾಳನಿಗೆ ಶರಣು. ಚನ್ನಮಲ್ಲಿಕಾರ್ಜುನನ ಹೆಸರಿಟ್ಟ ಗುರು ಸಂಗನ ಬಸವ” ಎಂದು ಅಣ್ಣನಿಗೆ ಶರಣಾರ್ಥಿ ಹೇಳುತ್ತಾಳೆ.

ಹುಬ್ಬು ಗಂಟಿಕ್ಕಿದ್ದ ಅನುಭವ ಮಂಟಪದ ಅಧ್ಯಕ್ಷ ಅಲ್ಲಮ ಪ್ರಭು ” ಉದ ಮದದ ಯೌವನವ ಒಳಕೊಂಡ ನೀನು ಇತ್ತಲೇಕೆ ಬಂದೆ?” ಎಂದು ಖಾರವಾಗಿ ಪ್ರಶ್ನಸುತ್ತಾರೆ. “ಅದನರಿಯಲೆಂದೇ ಹೊರಟಿದ್ದೇನೆ” ಎಂದು ಅಕ್ಕ ಉತ್ತರಿಸುತ್ತಾಳೆ. ಸರಿ ನಮ್ಮ ಗುಹೇಶ್ವರನ ಸಂಗ ಸುಖದಲ್ಲಿ ನೀನಿರಬೇಕಾದರೆ ನಿನ್ನ ಪತಿಯ ಹೆಸರು ಹೇಳಿ ಒಳಗೆ ಬಾ. ಏಕೆಂದರೆ ನಮ್ಮ ಶರಣರು ಸತಿಯೆಂದಡೆ ದೂರ ಸರಿವರು ಎಂದು ಮತ್ತೆ ಅಲ್ಲಮಪ್ರಭು ಪ್ರಶ್ನಿಸುತ್ತಾರೆ.

ಮೊಸರು ಹೊಸೆದು ಬೆಣ್ಣೆ ಕೊಂಬಂತೆ ಶರಣರ ಸಂಗದಲ್ಲಿ ಹಾಡುವುದು, ಕೂಡುವುದಕ್ಕಾಗಿ, ಸತ್ಸಂಗಕ್ಕಾಗಿ ನಿಮ್ಮನರಸಿ ಬಂದಿದ್ದೇನೆ ಎಂದು ಅಕ್ಕ ಉತ್ತರಿಸುತ್ತಾಳೆ. ಅದೆಲ್ಲ ಸರಿ, ನಿನ್ನ ಪತಿ ಯಾರು? ಆತನ ಕುರುಹು ಹೇಳು. ಇಲ್ಲದಿದ್ದಲ್ಲಿ ನಮ್ಮ ಶರಣರು ಮುನಿವರು ಎಂದು ಮತ್ತೆ ಕಾಡುತ್ತಾರೆ. ” ಹರನೇ ನೀನು ಗಂಡನಾಗಲೆಂದು ಅನಂತ ಕಾಲ ತಪಿಸಿದ್ದೆ ಚೆನ್ನಮಲ್ಲಿಕಾರ್ಜುನ” ಎಂದುತ್ತರಿಸಿದಾಗ ಇದಕ್ಕಾರು ಸಾಕ್ಷಿ ಎಂದು ಅಲ್ಲಮ ಅಕ್ಕನಿಗೆ ಮರು ಸವಾಲು ಎಸೆಯುತ್ತಾನೆ.

ಚನ್ನಮಲ್ಲಿಕಾರ್ಜುನನಿಗೆ ಒಲಿದ ಕಾಯವಿದು ಎಂದು ಅಕ್ಕ ಹೇಳುತ್ತಾಳೆ. ಕಾಯಭಾವ ಕಳೆದು ಜೀವಭಾವವಾದ ಈ ಕೇಶವನ್ನು ನೀನು ಯಾಕೆ ಮರೆಕೊಂಡಿರುವೆ? ಎಂದು ಕೇಳುತ್ತಾರೆ. ನಮ್ಮ ಶರಣರಿಗೆ ನೋವಾಗದಿರಲೆಂದು ಈ ವೇಷ ಎನ್ನುತ್ತಾಳೆ. ನಿನ್ನ ಈ ಕಾಯವೇಷವನ್ನು ನಾವು ಒಪ್ಪುವುದಿಲ್ಲ. ದೇವನೊಲಿದ ಭಾವಕ್ಕೆ ನಾಚಿಕೆಯೇ? ಎಂದು ಒಂದೇ ಸಮ ಪ್ರಶ್ನೆಗಳ ಸುರಿಮಳೆಗೈಯುತ್ತಾನೆ.

ಹಣ್ಣಾಗದೆ ಸಿಪ್ಪೆಯುದರುತ್ತದೆಯೇ? ಒಪ್ಪಗೆಟ್ಟು ಒಡೆದ ಹಾಲು ಸಿಹಿ ಬಾರದು ಎಂದು ಅಲ್ಲಮ ಕೇಳಿದಾಗ ನಾನು ಪೂರ್ಣ ಮಾಗಿದ ಹಣ್ಣು. ಚೆನ್ನಮಲ್ಲಿಕಾರ್ಜುನ ದೇವರ ದೇವನ ಒಳಗಾದವಳ ಕಾಡದಿರು. ಕಾಯ, ಕರ್ಣ, ಶೀಲವನ್ನು ಆ ಚೆನ್ನಮಲ್ಲಿಕಾರ್ಜುನನಿಗೆ ಮಾತ್ರ ಮೀಸಲಾಗಿಟ್ಟವಳು ನಾನು. ಈಗಾಗಲೇ ನಾನು ಕೆಂಡದ ಮೇಲಿನ ಶವ. ನೊಂದ ನುಲಿ ಎನ್ನುತ್ತಾಳೆ ಅಕ್ಕ

ಚೆನ್ನಮಲ್ಲಿಕಾರ್ಜುನನ್ನು ಕೂಡಿದೆ, ಬೆರಸಿದೆ ಎನ್ನುವುದು ತಪ್ಪು. ಕೂಡುವಿಕೆ ಆಧ್ಯಾತ್ಮದಲ್ಲಿ ತಪ್ಪುಎಂದು ಪರಿಪರಿಯಾಗಿ ಪ್ರಶ್ನಿಸುತ್ತಾನೆ. ಅಲ್ಲಮನ ಪ್ರಶ್ನೆಗಳಿಗೆ ಅಕ್ಕ ಅಷ್ಟೇ ದಿಟ್ಟವಾಗಿ ಉತ್ತರಿಸುವುದನ್ನು ಕಂಡ ಅಲ್ಲಮ ಕೊನೆಗೆ ಅವಳಿಗೆ ನಮೋ ನಮೋ ಎಂದೇಳುತ್ತಾನೆ. ಬಸವಣ್ಣಾದಿಯಾಗಿ ಎಲ್ಲ ಶರಣರು ಜಯಘೋಷಗಳನ್ನು ಕೂಗುತ್ತಾರೆ. ಅಕ್ಕ ನಾಗಮ್ಮ,ನೀಲಾಂಬಿಕೆ ಇತರ ಶರಣೆಯರು ಬಂದು ಅಕ್ಕನನ್ನು ಸಂತೈಸುತ್ತಾರೆ. ಉಪಚರಿಸುತ್ತಾರೆ. ಪ್ರಭುಗಳ ಮಾರ್ಗದರ್ಶನದಲ್ಲಿ ಅಧ್ಯಾತ್ಮದ ಎತ್ತರ ಪಡೆದುಕೊಳ್ಳುತ್ತಾಳೆ.

ನಾಲ್ಕಾರು ವರ್ಷಗಳ ನಂತರ ಕಲ್ಯಾಣ ದಿಂದ ಕದಳಿಯೆಡೆಗೆ ಪ್ರಯಾಣ ಬೆಳೆಸುತ್ತಾಳೆ. ಎಲ್ಲರೂ ಒಲ್ಲದ ಮನೆಯಿಂದ ಬೀಳ್ಕೊಟ್ಟರು.

ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ, ಖೂಬಾ ಕಲ್ಯಾಣ ಮಂಟಪ, ಕಲಬುರಗಿ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here