ವಸತಿ ಹಾಗೂ ಸಾರಿಗೆ ಸೌಕರ್ಯದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ: ಪ್ರಿಯಾಂಕ್ ಖರ್ಗೆ

0
52

ಕಲಬುರಗಿ: ಮುಂದಿನ ತಿಂಗಳು ೫,೬ ಹಾಗೂ ೭ ರಂದು ನಡೆಯುವ ೮೫ ನೇ ಅಖಿಲ ಭಾರತ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವ ಆವ್ಹಾನಿತರಿಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಗುರುವಾರದ ಸಂಜೆಯೊಳಗೆ ವಸತಿ ಹಾಗೂ ಸಾರಿಗೆ ವ್ಯವಸ್ಥೆ ಯ ಕುರಿತಂತೆ ವರದಿ ನೀಡಿ ಎಂದು ಸಮ್ಮೇಳನದ ವಸತಿ ಹಾಗೂ ಸಾರಿಗೆ ವ್ಯವಸ್ಥೆಯ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಿಯಾಂಕ್ ಖರ್ಗೆ ಅವರು ಸೂಚಿಸಿದರು.

ನಗರದ ಹಳೆ ಜಿಪಂ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮೂರು ದಶಕಗಳ ನಂತರ ನುಡಿಹಬ್ಬ ಆಯೋಜಿಸುವ ಅವಕಾಶ ಜಿಲ್ಲೆಗೆ ದೊರಕಿದ್ದು ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಕೇಂದ್ರ ಸಮಿತಿಯೊಂದಿಗೆ ಮಾತನಾಡಿ ಈ ಸಲದ ಸಮ್ಮೇಳನ ನಮ್ಮ ಕಲಬುರಗಿ ಯಲ್ಲಿ ನಡೆಸುವಂತೆ ಒತ್ತಾಯಿಸಿದ್ದೆ. ಈಗ ಸಮ್ಮೇಳನ ನಡೆಸುವ ಅವಕಾಶ ಸಿಕ್ಕಿದೆ ನಾವೆಲ್ಲ ಸೇರಿ ಸಮ್ಮೇಳನ ಯಶಸ್ವಿಗೆ ಸಹಕರದೊಂದಿಗೆ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಸಮ್ಮೇಳನಕ್ಕೆ ಬರುವ ಅವ್ಹಾನಿತರ ವಸತಿ ಹಾಗೂ ಸಾರಿಗೆ ಪ್ರಮುಖ ಅಂಶವಾಗಿದ್ದು ಅಧಿಕಾರಿಗಳು ಈ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ‌ ನಿರ್ವಹಿಸಿಕೊಂಡು‌ ಹೋಗಬೇಕು. ನಗರದಲ್ಲಿ ಇರುವ ಹೊಟೇಲ್, ವಸತಿ ಶಾಲೆಗಳು, ಹೌಸಿಂಗ್ ಬೋರ್ಡ್ ವಸತಿ‌ ನಿಲಯಗಳು, ಕಲ್ಯಾಣ ಮಂಟಪಗಳನ್ನು ವಸತಿಗೆ ಹಾಗೂ ಖಾಸಗಿ ಶಾಲೆಗಳ, ಖಾಸಗಿ ವಾಹನಗಳ ಡೀಲರ್ ಗಳೊಂದಿಗೆ ಮಾತನಾಡಿ ವಾಹನ ಸೌಲಭ್ಯ ಕಲ್ಪಿಸಿ ಎಂದು ಸೂಚಿಸಿದರು.

ಒಟ್ಟು 1200 ರೂಮುಗಳನ್ನು ವ್ಯವಸ್ಥೆ ಮಾಡಬೇಕಾಗಿದ್ದು ಈಗ 850 ರೂಮುಗಳನ್ನು ಗುರುತಿಸಲಾಗಿದೆ.‌ ನಗರದ ಹೊಟೇಲ್ ಗಳು, ಕಲ್ಯಾಣ ಮಂಟಪಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಮ್ಮೇಳನಕ್ಕೆ ಬರುವ ಆವ್ಹಾನಿತರಿಗೆ ಹಾಗೂ ಸಮ್ಮೇಳನಕ್ಕೆ‌ ಬರುವ ಸಾರ್ವಜನಿಕರಿಗೆ ಅನುಕೂಲವಾಗಲು ಅಗತ್ಯ ಸಾರಿಗೆ ಮಾಡಲಾಗುತ್ತಿದೆ. 50 ಇನ್ನೋವಾ, 50 ಕ್ರೂಸರ್ ಗಳನ್ನು, 20 ಸರಕಾರಿ ಬಸ್ ಗಳು, ಪ್ರತಿ ತಾಲೂಕಿನಿಂದ ಕಲಬುರಗಿಗೆ ಬೆಳಿಗ್ಗೆ ಹಾಗೂ ರಾತ್ರಿ ವೇಳೆಗೆ ಮತ್ತೆ ವಾಪಸ್ ಹೋಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಇಓ ರಾಜಾ ತಿಳಿಸಿದರು.

ಸಮ್ಮೇಳನಕ್ಕೆ ಬರುವ ಆವ್ಹಾನಿತರನ್ನು ಎ, ಬಿ ಹಾಗೂ ಸಿ‌ ಕೆಟಗರಿ‌ ಎಂದು ವಿಭಾಗಿಸಲಾಗಿದ್ದು ಅವರಿಗೆ ಆದ್ಯತೆಯ ಮೇಲೆ ಹೊಟೇಲ್ ಹಾಗೂ ಕಲ್ಯಾಣ ಮಂಟಪಗಳನ್ನು ಗುರುತಿಸಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಇಓ‌ ವಿವರಿಸಿದರು.

ಸರಕಾರಿ ವಸತಿ ಶಾಲೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ವ್ಯವಸ್ಥೆ ಮಾಡಿ. ಕಲಾ ತಂಡಗಳಿಗೆ ಬೇರೆ ಕಡೆ ವ್ಯವಸ್ಥೆ ಮಾಡಿಸಿ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವಸತಿ‌ ನಿಲಯಗಳ ಸುತ್ತ ಮುತ್ತ ಫಾಗಿಂಗ್ ವ್ಯವಸ್ಥೆ,‌ ಮೇಣಬತ್ತಿ ವ್ಯವಸ್ಥೆ ಮಾಡಿ.‌ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸಬೇಕು. ಅಗತ್ಯವಿರುವ ಕಡೆಗಳೆಲ್ಲ ಒನ್‌ ವೇ ಮಾಡಿ. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ‌ ನೋಡಿಕೊಳ್ಳಿ ಎಂದು ಖರ್ಗೆ ಸೂಚಿಸಿದರು.

ಅವ್ಹಾನಿತರಿಗೆ ಬೇಕಾಗುವ ಹಾಸಿಗೆ, ಮಗ್, ಬಕೇಟ್ ಇತ್ಯಾದಿ ಗಳನ್ನು ಖರೀದಿಸಿ ಅದರಲ್ಲಿ ಪಾರದರ್ಶಕತೆ ಇರಲಿ ಎಂದು ಸೂಚಿಸಿದರು. ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಪೊಲೀಸರು ಯಾವುದೇ ಅಹಿತಕರ ಘಟನೆಯಾಗದಂತೆ ನೋಡಿಕೊಳ್ಳಬೇಕು. ಜಾಸ್ತಿ ಜನರು ( 200 ಕ್ಕೂ ಅಧಿಕ) ವಸತಿಯಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದು‌ ನಿರ್ದೇಶಿಸಿದರು.

ಈ ಸಂದರ್ಭದಲ್ಲಿ ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ್ ಪಾಟೀಲ್, ಜಿಪಂ‌ ಸಿಪಿಓ, ಪ್ರವೀಣಾ‌ ಪ್ರಿಯಾ ಡೇವಿಡ್, ಹೆಚ್ಚುವರಿ ಎಸ್ ಪಿ ಪ್ರಸನ್ನ ದೇಸಾಯಿ‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here