ಕಲಬುರಗಿ: ರಂಗಭೂಮಿಯಲ್ಲಿ ತೊಡಗಿಕೊಂಡವರಿಗೆ ಕಾರ್ಯದಕ್ಷತೆ ಅಗತ್ಯ ಎಂದು ಮಾಜಿ ರಾಜ್ಯಸಭಾ ಸದಸ್ಯ ಡಾ.ಬಸವಾಜ ಪಾಟೀಲ ಸೇಡಂ ಹೇಳಿದರು.
ಇಲ್ಲಿನ ರಂಗಾಯಣದ ಆಡಳಿತ ಕಛೇರಿಯಲ್ಲಿ ಕಲ್ಯಾಣಕರ್ನಾಟಕದ ದಕ್ಷ ಆಡಳಿತಗಾರರು, ಶ್ರೇಷ್ಠ ಸಾಹಿತಿಯಾಗಿದ್ದ ಡಾ. ಸಿದ್ದಯ್ಯ ಪುರಾಣಿಕರ ಭಾವಚಿತ್ರವನ್ನು ಶುಕ್ರವಾರ ಅನಾವರಣಗೊಳಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ಸಮುಚ್ಛಯಕ್ಕೆ ಕೇವಲ ಹೆಸರಿಟ್ಟ ಮಾತ್ರಕ್ಕೆ ಪ್ರಯೋಜನವಾಗಲ್ಲ. ಪುರಾಣಿಕರಂತೆ ದಕ್ಷತೆ, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಶಸ್ವಿಯಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಸಾಂಸ್ಕೃತಿಕ ಸಮುಚ್ಛಯಕ್ಕೆ ಡಾ. ಸಿದ್ದಯ್ಯ ಪುರಾಣಿಕರ ಹೆಸರು ಇಟ್ಟಿದ್ದರೂ, ರಂಗಾಯಣದ ಆಡಳಿತ ಕಚೇರಿಯಲ್ಲಾಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿಯಲ್ಲಾಗಲಿ ಅವರ ಭಾವಚಿತ್ರ ಇಲ್ಲದಿರುವುದನ್ನು ಗಮನಿಸಿ ಸೇಡಂ ಪಾಟೀಲಜಿ ಗಮನಕ್ಕೆ ತಂದಿದ್ದೆ. ಅವರು ಸ್ವಂತ ಖರ್ಚಿನಲ್ಲಿ ಭಾವಚಿತ್ರ ಮುದ್ರಿಸಿಕೊಟ್ಟು ರಂಗಾಯಣಕ್ಕೆ ಕೊಡುಗೆಯಾಗಿ ನೀಡಿದ್ದು ಸಂತಸ ತಂದಿದೆ ಎಂದರು.
ರಂಗಾಯಣ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ, ಸಿಬ್ಬಂದಿ, ಕಲಾವಿದರು ಉಪಸ್ಥಿತರಿದ್ದರು.