ಬ್ರಿಟಿಷ್‌ರ ಎದೆ ನಡುಗಿಸಿದ ಧೀರ! ಭಾರತ ಸ್ವಾತಂತ್ರ್ಯಸಂಗ್ರಾಮದ ಕೆಚ್ಚೆದೆಯ ವೀರ ಆಜಾದ್!!

0
148

ನಮ್ಮ ದೇಶದ ಸ್ವಾತಂತ್ರ್ಯಂದೋಲನವು ಕಂಡ ಓರ್ವ ಅಪ್ರತೀಮ ಕ್ರಾಂತಿಕಾರಿ ಚಂದ್ರಶೇಖರ ಆಜಾದ್ ಈಗಿನ ಉತ್ತರ ಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ ಜುಲೈ ೨೩, ೧೯೦೬ ರಂದು ಜನಿಸಿದರು. ಆ ಹಳ್ಳಿಯಲ್ಲಿ ಅಲ್ಪ ಸ್ವಲ್ಪ ಕಲಿತವರಂದರೆ ಆಜಾದ್‌ರ ತಂದೆ ಸೀತಾರಾಮ ತಿವಾರಿಯವರು ಮಾತ್ರ. ಅವರ ತಾಯಿ ಜಗರಾಣಿದೇವಿ ಓದು ಬರಹ ಬಲ್ಲವರಲ್ಲ ಬ್ರೀಟಿಷ್‌ರ ವಿರುದ್ದ ಅಸಹಕಾರ ಆಂದೋಲನ ಬಿರುಸಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಆಗ ಆಜಾದ್ ವಯಸ್ಸು ಕೇವಲ ೧೫ ರ ಹರೆಯ. ಅದೇ ಸಮಯದಲ್ಲಿ ದೇಶವೇ ಬ್ರೀಟೀಷ್ ವಿರೋಧಿ ಹೋರಾಟದಲ್ಲಿ ಕಾವೇರಿತ್ತು. ಬ್ರೀಟಿಷ್‌ರ ಕ್ರೂರ ಆಳ್ವಿಕೆಗೆ ಸಿಲುಕಿ ಇಡೀ ದೇಶ ನಲುಗಿ ಹೋಗಿತ್ತು. ಎಲ್ಲಾ ಕಡೆ ಮಿಂಚಿನಂತೆ ಸಂಚರಿಸುತ್ತಿದ್ದ ಆಜಾದ್ ವಿದ್ಯಾರ್ಥಿ ಆಂದೋಲನದ ನಾಯಕತ್ವ ವಹಿಸಿದರು.

Contact Your\'s Advertisement; 9902492681

ಒಮ್ಮೆ ಕಾಶಿಯಲ್ಲಿ ನೂರಾರು ಜನರು, ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ, ಅದನ್ನು ತಡೆದ ಪೋಲಿಸರು ಜನರನ್ನು ಥಳಿಸಲಾರಂಭಿಸಿದರು. ಈ ಕ್ರೌರ್ಯದಿಂದ ಆಜಾದ್ ರಕ್ತ ಕುದಿಯಿತು. ಕೂಡಲೇ ಆಜಾದ್ ಕಲ್ಲೊಂದನ್ನು ಪೋಲಿಸರತ್ತ ಬೀಸಿದರು. ಎಲ್ಲೆಡೆ ಹುಡುಕಿ ಆಜಾದ್‌ರನ್ನು ಬಂಧಿಸಲಾಯಿತು. ಮರುದಿನ ನ್ಯಾಯಲಯದಲ್ಲಿ ವಿಚಾರಣೆ ನಡೆಯಿತು. ನ್ಯಾಯಧೀಶ ’ನಿನ್ನ ಹೆಸರೇನು?’ ಎಂದು ಕೇಳಿದಾಗ ಆಜಾದ್ (ಸ್ವತಂತ್ರ) ಎಂದು, ’ನಿನ್ನ ತಂದೆಯ ಹೆಸರೇನು?’ ಎಂಬ ಪ್ರಶ್ನೆಗೆ ’ಸ್ವಾಧೀನತೆ’ ಎಂದು ’ನಿನ್ನ ವಾಸವೆಲ್ಲಿ?’ ಎಂದುದಕ್ಕೆ ’ಸೆರೆಮನೆ’ ಎಂದು ಆಜಾದ್ ದಿಟ್ಟವಾಗಿ ಉತ್ತರಿಸಿದರು. ಇದರಿಂದ ಕುಪಿತರಾದ ಕ್ರೂರ ನ್ಯಾಯಧೀಶರು ಬಾಲಕ ಆಜಾದ್‌ರಿಗೆ ೧೨ ಛಡಿ ಏಟಿನ ಶಿಕ್ಷೆ ವಿಧಿಸಿ, ಸೆಂಟ್ರಲ್ ಜೈಲಿಗೆ ನೂಕಿದರು. ಪ್ರತಿ ಛಡಿ ಏಟಿಗೂ ಚರ್ಮ ಕಿತ್ತು ಬರುತ್ತಿತ್ತು. ಆದರೂ ಅಂಜಲಿಲ್ಲ, ಕಣ್ಣೀರಿಡಲಿಲ್ಲ. ಜೈಲಿನಿಂದ ಹೊರ ಬಂದ ಆಜಾದ್‌ರನ್ನು ಸನ್ಮಾನಿಸಿ ಜನರು ಆನಂದದಿಂದ ಆಜಾದ್ ಎಂದು ಕರೆದರು. ಅಂದಿನಿಂದ ಆಜಾದ್ ಎಂದೇ ಖ್ಯಾತರಾದ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಸ್ವಾತಂತ್ರ್ಯಂದೋಲನಕ್ಕೆ ತೊಡಗಿಸಿಕೊಂಡರು.

ಕ್ರಾಂತಿಯ ಪಥದಲ್ಲಿ ಮುನ್ನಡೆದ ಆಜಾದ್: ದೇಶದಲ್ಲಿ ಅಲ್ಲಲ್ಲಿ ಹರಡಿದ ಕ್ರಾಂತಿಕಾರಿಗಳನೆಲ್ಲಾ ಒಂದು ಗೂಡಿಸಲು ಸಚೀಂದ್ರನಾಥ ಸನ್ಯಾಲರು ಹಿಂದೂಸ್ತಾನ ರಿಪಬ್ಲಿಕ್‌ನ್ ಅಸೋಸಿಯೇಷನ್ (ಹೆಚ್.ಆರ್.ಎ) ಅನ್ನು ೧೯೨೩ ಕೊನೆಯಲ್ಲಿ ಸ್ಥಾಪಿಸಿದರು. ಈ ಸಂಘಟನೆಗೆ ಸೇರಿಕೊಂಡರು. ೧೬ ನೇ ವಯಸ್ಸಿನಲ್ಲಿ ಆಜಾದ್‌ರು ಸೇರಿಕೊಂಡರು ಅಪಾರ ತ್ಯಾಗ, ಅಸೀಮ ಸಾಹಸ, ಬಲಿದಾನಗಳನ್ನು ಬಯಸುವ ಕ್ರಾಂತಿ ಹಾದಿಯಲ್ಲಿ ಹೆಜ್ಜೆಯಿಟ್ಟರು.
೧೯೨೫ ಅಗಸ್ಟ ೯ ರಂದು ಈ ಕ್ರಾಂತಿಕಾರಿಗಳು ಲಕ್ನೋ ಬಳಿ ಕಾಕೋರಿ ಎಂಬಲ್ಲಿ ರೈಲಿನಲ್ಲಿ ರವಾನೆ ಆಗುತ್ತಿದ್ದ ಸರ್ಕಾರಿ ಖಜಾನೆಯ ಹಣ ದರೋಡೆ ಮಾಡಿದರು. ಪೋಲಿಸರು ಎಲ್ಲೆಡೆ ಬಲೆ ಬೀಸಿ ಪ್ರಮುಖ ನಾಯಕರನ್ನು ಬಂಧಿಸಿದರು. ಅದರಲ್ಲಿ ರಾಮಪ್ರಸಾದ ಬಿಸ್ಮಿಲ್ಲಾ, ಅಶ್ವಾಕುಲ್ಲಾ, ರಾಜೇಂದ್ರಲಾಹಿರಿ, ರೋಷನ್‌ಸಿಂಗರನ್ನು ಗಲ್ಲಿಗೇರಿಸಲಾಯಿತು. ಆಜಾದ್ ಮಾತ್ರ ತಪ್ಪಿಸಿಕೊಂಡಿದರು.

ಸಂಘಟನೆ ಎಲ್ಲಾ ನಾಯಕರು ಇಲ್ಲವಾದರೂ ಕುಸಿದ ಬಿದ್ದ ಸಂಘಟನೆಯನ್ನ ಪುನಃ ಮೇಲೆತ್ತುವ ಹೊಣೆ ಹೊತ್ತ ಆಜಾದ್, ಕ್ರಾಂತಿಕಾರಿ ಹೋರಾಟಕ್ಕೆ ಮುನ್ನುಡಿ ಬರೆದರು. ಈ ಸಮಯದಲ್ಲಿ ಭಗತ್‌ಸಿಂಗ್‌ರ ಭೇಟಿಯಾಯಿತು. ಭಗತ್‌ಸಿಂಗ್‌ರ ಪ್ರಯತ್ನದಿಂದ ದೇಶದ ಎಲ್ಲಾ ಪ್ರಾಂತಗಳಲ್ಲಿನ ಕ್ರಾಂತಿಕಾರಿಗಳನ್ನು ಸೇರಿಸಿ ೧೯೨೮ ಸೆಪ್ಟೆಂಬರ್ ೮,೯ ರಂದು ದೆಹಲಿಯ ಫಿರೋಜ್ ಷಾ ಕೊಟ್ಲಾದ ಕೋಟೆಯಲ್ಲಿ ಸಭೆ ಸೇರಿ, ಹೆಚ್.ಆರ್.ಎ ಸಂಘಟನೆಗೆ ಭಗತ್‌ಸಿಂಗ್‌ರ ಸಲಹೆ ಮೆರೆಗೆ ’ಹಿಂದೂಸ್ತಾನ ಸೋಷೆಲಿಸ್ಟ್ ರಿಪಬ್ಲಿಕ್‌ನ್ ಅಸೋಸಿಯೇಷನ್’ ಎಂದೂ ಹೊಸ ಹೆಸರು ನೀಡಿದರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಸಮಾಜವಾದಿ ಹೋರಾಟವನ್ನಾಗಿ ಪರಿವರ್ತಿಸಿದರು.ಆಜಾದ್ ಅದರ ಪ್ರಧಾನ ಸೇನಾಪತಿಯಾಗಿ ಆಯ್ಕೆಯಾದರು. ಅಲ್ಲಿಂದ ಎಚ್.ಆರ್.ಎ ಇದ್ದ ಸಂಘಟನೆಯೂ ಎಚ್.ಎಸ್.ಆರ್.ಎ ಕ್ರಾಂತಿಕಾರಿ ಪಕ್ಷವಾಗಿ ಹೊರಹೊಮ್ಮಿತು.

ಆ ದಿನಗಳಲ್ಲಿ ಬ್ರಿಟಿಷ್ ಸರಕಾರವು ಸೈಮನ್, ನೇತೃತ್ವದಲ್ಲಿ ಆಯೋಗ ರಚಿಸಿತು. ಭಾರತೀಯರಿಗೆ ಎಷ್ಟು ಅಧಿಕಾರ ನೀಡಬಹುದೆಂದು ತೀರ್ಮಾನಿಸಲು ೧೯೨೮ ರಂದು ಫೆಬ್ರುವರಿಯಲ್ಲಿ ಆಯೋಗ ಭಾರತಕ್ಕೆ ಬಂದಿತು. ಈ ಆಯೋಗವು ಹೋದ ಕಡೆಗೆಲ್ಲಾ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಲಾಯಿತು. ದೇಶದಾದ್ಯಂತ ’ಸೈಮನ್ ಹಿಂತಿರುಗು’ ಎಂಬ ಘೋಷಣೆ ಮೊಳಗಿತ್ತು.


ಲಾಹೋರಿಗೆ ೧೯೨೮ ರ ಅಕ್ಟೋಬರ ೩೦ ರಂದು ಈ ಆಯೋಗ ಬಂದಾಗ ಪಂಜಾಬಿನ ಕೇಸರಿ ಲಾಲ ಲಜಪತರಾಯ ರವರ ನೇತೃತ್ವದಲ್ಲಿ ಸಾವಿರಾರು ಜನರೊಂದಿಗೆ ಹೆಚ್.ಎಸ್.ಆರ್.ಎ ನ ಕ್ರಾಂತಿಕಾರಿಗಳು ಸಹ ಈ ಹೋರಾಟದಲ್ಲಿ ಪಾಲ್ಗೊಂಡಿದರು. ಈ ಹೋರಾಟದಲ್ಲಿ ಲಾಲಜೀಯವರ ಮೇಲೆ ಪೋಲಿಸರು ಘೋರ ಆಕ್ರಮಣ ವೆಸಗಿದರು. ಇದರಿಂದ ಚೇತರಿಸಿಕೊಳ್ಳಲಾಗದ ಇಳಿ ವಯಸ್ಸಿನ ಲಾಲಜಿಯವರು ನವೆಂಬರ ೧೭, ೧೯೨೮ ರಂದು ಕೊನೆ ಉಸಿರೆಳೆದರು. ಲಾಲಜಿಯವರ ಸಾವು ಇಡೀ ದೇಶಕ್ಕೆ ತೀವ್ರ ನೋವನ್ನುಂಟು ಮಾಡಿತು. ಇದಕ್ಕೆ ಪ್ರತ್ಯುತ್ತರ ನೀಡಲು ಆಜಾದ್ ಸುಖದೇವ ನೇತೃತ್ವದಲ್ಲಿ ಯೋಜನೆ ರೂಪಿಸಿ, ಕ್ರೂರ ಸ್ಕಾಟನನ್ನು ಕೊಲೆ ಮಾಡಲು ಸಂಚು ರೂಪಿಸಲಾಯಿತು ಆದರೆ ಸ್ಕಾಟನ ಬದಲು ಸ್ಯಾಂಡರ್ಸನ್ ಕೊಲೆಗೀಡಾದನು.

ಈ ಕೃತ್ಯದಿಂದ ಬ್ರೀಟಿಷ್ ಸರಕಾರ ತಲ್ಲಣ ಗೊಂಡಿತು. ತಮ್ಮ ಈ ಕೃತ್ಯವನ್ನು ಸಮರ್ಥಿಸಿಕೊಂಡ ಕ್ರಾಂತಿಕಾರಿಗಳು ಹೀಗೆ ನುಡಿದರು. ದೇಶದ ಮೂವತ್ತು ಕೋಟಿ ಜನರ ಪ್ರೀತಿ -ಗೌರವಗಳಿಗೆ ಪಾತ್ರರಾದ ವಯೋವೃದ್ದರ ಸಾವು – ದೇಶದ ಗೌರವಕ್ಕೆ ಕುಂದು ಅದಕ್ಕೆ ಪ್ರತಿಕಾರವೇ ಓರ್ವ ಸರಕಾರದ ಪ್ರತಿನಿಧಿಯ ಹತ್ಯೆ ನಿಜವಾಗಿಯೂ ಓರ್ವ ಮನುಷ್ಯನ ರಕ್ತಪಾತವಾದುದಕ್ಕೆ ನಮಗೆ ವಿಷಾದವಿದೆ. ಆದರೆ ಎಲ್ಲರಿಗೂ ಸ್ವಾತಂತ್ರ್ಯವನ್ನು ತರುವ ಮಾನವನಿಂದ ಮಾನವನ ಶೋಷಣೆಯನ್ನು ಅಳಿಸಿ ಹಾಕುವ ಕ್ರಾಂತಿ ನೇರವೇರಲು ವ್ಯಕ್ತಿಗಳ ಸಾವು, ಬಲಿದಾನ ಅನಿವಾರ್ಯವಾಗುತ್ತದೆ.

ಅತ್ಯಂತ ಜತನದಿಂದ ತಾವೇ ಕಟ್ಟಿ ಬೆಳೆಸಿದ ಸಂಘಟನೆಗಳು ಕುಸಿದಾಗಲೂ, ಕಣ್ಣ ಮುಂದೆಯೇ ತಮ್ಮ ಪ್ರೀತಿ ಪಾತ್ರರಾದ ಸಂಗಾತಿಗಳೆಲ್ಲಾ ಹುತಾತ್ಮರಾದರೂ, ಬಹುತೇಕ ಏಕಾಂಗಿಯಾದ ಆಜಾದ್‌ರು ಧೃತಿಗೆಡಲ್ಲಿಲ್ಲ. ಒಂದೆಡೆ ಸಂಗಾತಿಗಳ ಬಂಧನ ಸಾವು, ಇನ್ನೊಂದೆಡೆ ಸೆರೆಸಿಕ್ಕ ಕೆಲವರ ದ್ರೋಹ. ಇದಾವುದರಿಂದಲೂ ವಿಚಲಿತರಾಗದೆ ಮೇರು ಪರ್ವತದಂತೆ ಆಜಾದ್‌ರು ನಿಂತರು. ಸಂಗಾತಿಗಳೇ,ಪ್ರಾಣವನ್ನು ಒತ್ತೆಯಿಟ್ಟಾದರು ದೇಶವನ್ನು ದಾಸ್ಯದಿಂದ ಮುಕ್ತಗೊಳಿಸಲು ಯತ್ನಿಸುತ್ತೇನೆ. ಸಶಸ್ತ್ರ ಕ್ರಾಂತಿ ಕೊನೆಯ ಉಸಿರಿರುವರೆಗೂ ನೆರೆವೇರಿಸುತ್ತೇನೆ. ನಮ್ಮೆಲ್ಲರ ಕನಸನ್ನು ನನಸಾಗಿಸುತ್ತೇನೆ ಎಂದೂ ಕ್ರಾಂತಿಯನ್ನು ಪೂರೈಸುವತ್ತಾ ಹೆಜ್ಜೆ ಹಾಕಲಾರಂಭಿಸಿದರು. ೧೯೩೧ ಫೆಬ್ರುವರಿ ೨೭ ರಂದು ಆಜಾದ್‌ರು ಅಲಹಾಬಾದಿನ ಆಲ್ಫ್ರೆಡ್ ಪಾರ್ಕ್‌ನಲ್ಲಿ ತಮ್ಮ ಸಂಗಾತಿಯೊಂದಿಗೆ ಮಾತನಾಡುತ್ತಿದ್ದಾಗ ದ್ರೋಹಿಗಳ ಸಂಚಿನಿಂದ ಪೋಲಿಸರಿಗೆ ವಿಷಯ ತಿಳಿಯಿತು.

ನೂರಾರು ಜನ ಪೋಲಿಸರು ಪಾರ್ಕ್‌ನ್ನು ಸುತ್ತು ವರೆದು ಆಕ್ರಮಣ ವೆಸಗಿದರು. ಆದಾಗ್ಯೂ ಹೆದರದ ಆಜಾದ್ ತಮ್ಮ ಸಂಗಾತಿಗೆ ತಪ್ಪಿಸಿ ಕೊಂಡು ಹೋಗಲು ಅನುವು ಮಾಡಿದರು. ಪೋಲಿಸ ಆಕ್ರಮಣವನ್ನು ಎದುರಿಸಿ ಅರ್ಧಗಂಟೆಗೂ ಹೆಚ್ಚು ಕಾಲ ಏಕಾಂಗಿಯಾಗಿ ಸೆಣಸಿದರು ಗುಂಡುಗಳಿಂದ ದೇಹ ರಕ್ತಮಯವಾದರೂ, ಕಣ್ಮುಂದೆಯೆ ಸಾವಿನ ಛಾಯೆ ನರ್ತಿಸುತ್ತಿದ್ದರೂ, ಕೊನೆಯ ಘಳಿಗೆಯವರೆಗೂ ಹೋರಾಡಿದ ಆಜಾದ್‌ದರಿಗೆ ಗುಂಡಿನ ಲೆಕ್ಕ ತಪ್ಪಿರಲಿಲ್ಲ. ಪ್ರತಿಜ್ಞೆ ಮರೆತಿರಲಿಲ್ಲ ಜೀವಂತವಾಗಿ ನಾನೆಂದು ಪೋಲಿಸರಿಗೆ ಸಿಕ್ಕಿ ಕೊಳ್ಳುವದಿಲ್ಲ ಕೈಗೆ ಬೇಡಿ ತೊಟ್ಟು ಕೋತಿಯಂತೆ ಹಿಂಬಾಲಿಸುವುದಿಲ್ಲ. ನಾನು ಸ್ವತಂತ್ರವಾಗಿ ಬದುಕುತ್ತೇನೆ. ಸ್ವತಂತ್ರವಾಗಿ ಸಾಯುತ್ತೇನೆ ಎಂದು ತಾವೇ ಪಿಸ್ತೂಲಿನ ಕೊನೆಯ ಗುಂಡಿನಿಂದ ಗುಂಡಿಟ್ಟುಕೊಂಡು ಪ್ರಾಣ ತ್ಯಾಗ ಮಾಡಿದರು. ಆಗ ಅವರ ವಯಸ್ಸು ಕೇವಲ ೨೪ ವರ್ಷ. ಆಜಾದ್‌ರ ಸಾಹಸ, ದೇಶ ಪ್ರೇಮ ಸಾವಿರಾರು ಯುವಕರಲ್ಲಿ ಸ್ಫೂರ್ತಿಯನ್ನು ತುಂಬಿ ವಿದ್ಯಾರ್ಥಿ ಯುವಜನರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವಂತೆ ಮಾಡಿತು.

ಆದರ್ಶ ಕ್ರಾಂತಿಕಾರಿ ಆಜಾದ್ ಸ್ಫೂರ್ತಿಯಾಗಲಿ.!
ಮಹೋನ್ನತ ಆದರ್ಶಗಳನ್ನು ಹೊತ್ತು ಹೋರಾಡಿ, ಭಾರತದ ನೆಲವನ್ನು ಬ್ರೀಟಿಷ್‌ರ ಕ್ರೂರ ಶೋಷಣೆಯಿಂದ ಬಿಡುಗಡೆಗೊಳಿಸುವಲ್ಲಿ ನೇತಾರ ಪಾತ್ರವಹಿಸಿದ ’ಅಜಾದ್’ ರವರು ಇಂದಿಗೂ ಜನಮನದಲ್ಲಿ ಅಚ್ಚಳಿಯದ ಸ್ಪೂರ್ತಿಯ ಸಂಕೇತವಾಗಿದ್ದಾರೆ. ದುರದೃಷ್ಟವಶಾತ್ ಸ್ವಾತಂತ್ರ್ಯ ನಂತರ ಕ್ರಾಂತಿಕಾರಿಗಳು ಕಂಡ ಕನಸು ಕನಸಾಗಿಯೇ ಉಳಿದಿದೆ. ದೇಶವು ಉಳ್ಳವರ ಸ್ವತ್ತಾಗಿದೆ. ಶ್ರೀಮಂತರು ದಿನೇ ದಿನೇ ಶ್ರೀಮಂತರಾಗುತ್ತಿದ್ದಾರೆ. ಬಡವರು ಕಡುಬಡವಾಗಿ ದಾರಿದ್ರಕ್ಕೊಳಡುತ್ತಿದ್ದಾರೆ. ನಿರುದ್ಯೋಗ, ಬೆಲೆಏರಿಕೆ, ಮಹಿಳೆಯರ ಮೇಲಿನ ಕೃತ್ಯಗಳು ಜನತೆಯ ಕಂಗೆಡಿಸಿದೆ. ಅಶ್ಲೀಲತೆ, ಅಸಂಬದ್ದತೆ, ಅನೈತಿಕತೆ, ಕುಸಂಸ್ಕೃತಿಗಳು ದೃತಿಗೆಡಿಸಿವೆ. ರಾಜಕೀಯವೂ ಮಲಿನವಾಗಿ ವಾಕರಿಕೆ ಬರುವಂತಾಗಿದೆ. ಸ್ವಪ್ರತಿಷ್ಟೆ, ಸೃಜನಪಕ್ಷಪಾತ, ಅಧಿಕಾರ ಲಾಲಸೆಯು ಸಮಾಜದ ಎಲ್ಲಾ ಕಟ್ಟೆಳೆಗಳನ್ನು ಮುರಿದು ಭ್ರಷ್ಟತೆಯ ಪರಮಾವಧಿಯನ್ನು ಮುಟ್ಟಿದೆ.

ಹೀಗಾಗಿ ಇಂದು ದೇಶವೇ ಕಾರ್ಗತ್ತಲಿನಲ್ಲಿ ಮುಳುಗಿದೆ. ಇಂತಹ ಕಾರ್ಗತ್ತಲಿನಲ್ಲಿ ’ಚಂದ್ರಶೇಖರ ಅಜಾದ್’ ಕೊಲ್ಮಿಂಚಿನಂತೆ ಸದಾ ಮಿನುಗುತ್ತಿದ್ದಾರೆ. ಅಂಜುವ ದನಿಗಳಿಗೆ ಸಿಂಹಗರ್ಜನೆಯನ್ನು ಮೊಳಗಿಸಿ, ಸೋತ ಮನಸ್ಸಿಗೆ ಸ್ಪೂರ್ತಿಯ ಸೆಲೆಯಾಗಿ, ಜಡಗಟ್ಟಿದ ವಾತವರಣದಲ್ಲಿ ವಿದ್ಯುತ್ ಸಂಚಾರವನ್ನು ಮೂಡಿಸಲು ಈ ಘೋರ ಅಂಧಕಾರಗಳನ್ನು ಹೋರಾಡಲು ಚಂದ್ರಶೇಖರ ಅಜಾದ್‌ರವರು ಪ್ರೇರಣೆಯಾಗಿದ್ದಾರೆ. ಅಸೀಮವಾದ ಧೈರ್ಯ ಸಾಹಸಗಳಿಗೆ ಹೆಸರಾದ ಆಜಾದ್‌ರವರು ಇಂದು ಮತ್ತೆ ಯುವಜನತೆಯಲ್ಲಿ ಮೂಡಿಬರಬೇಕಾಗಿದೆ. ಈ ಸಂಘರ್ಷದಲ್ಲಿ ನಾವೇಲ್ಲರು ಮತ್ತೆ ಪಣ ತೊಡಬೇಕಾಗಿದೆ.

ಇಂತಹ ಸಂದರ್ಭದಲ್ಲಿ ಚಂದ್ರಶೇಖರ ಆಜಾದ್ ರವರ ಭವ್ಯ ವ್ಯಕ್ತಿತ್ವ, ಸಾಹಸಮಯ ಬದುಕು ನಮಗೆಲ್ಲ ಸದಾ ಆದರ್ಶ ಮತ್ತು ಸ್ಫೂರ್ತಿವಾಗಿರಲಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here