ಜೇವರ್ಗಿಯ ಜನರ ಹಣೆಬರವೇ ಅಷ್ಟೇ, ಅಪ್ಪ ಮುಖ್ಯಮಂತ್ರಿಯಾಗಿ ಏನು ಮಾಡಿಲ್ಲ!! ಇನ್ ಮಗ ಮಂತ್ರಿಯಾಗಿ ಏನ್ ಮಾಡ್ತಾನ?

0
108

ಚುನಾವಣೆ ಹತ್ತಿರ ಸಮೀಪಿಸಿದಂತೆ ಅಜಯ್ ಸಿಂಗ್ ಅವರಿಂದ ತಾಲೂಕಿನಲ್ಲಿ ಈಗ ಪ್ರತಿ ಹಳ್ಳಿಯಲಿ ಅಡಿಗಲ್ಲ ಸಮಾರಂಭದ ಪರ್ವವವೇ ನಡೆಯುತ್ತಿದೆ. ಎರಡು ಅವಧಿ ಪೂರ್ಣಗೊಳಿಸಿದ ಅಜಯ ಸಿಂಗ್ ಅವರು ಬೋಗಸ್ ಅಡಿಗಲ್ಲು ಹಾಕುವುದೇ ಅಭಿವೃದ್ಧಿ ಎಂದು ಪರಿಗಣಿಸಿ ಹ್ಯಾಟ್ರಿಕ್ ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ. ಹೋದ ಚುನಾವಣೆಯಲ್ಲಿ ಇವರು ಹಾಕಿರುವ ಅಡಿಗಲ್ಲು ಮತ್ತು ಇವರ ತಂದೆಯವರ ಕಾಲದಲ್ಲ ಹಾಕಿರುವ ಅಡಿಗಲ್ಲಿನ ಯೋಜನಗಳು ಕೊಳೆಯುತ್ತಾ ಬಿದ್ದಿವೆ.

ಐದು ವರ್ಷಗಳ ಕಾಲ ಅಡಿಗಲ್ಲಿಲ್ಲದೆ ತಾಲೂಕಿನಲ್ಲಿ ನಡೆದ ಸರ್ಕಾರದ ಯೋಜನೆಯ ಕಾಮಗಾರಿಗಳು, ಈಗೇಕೆ ಚುನಾವಣೆಯ ನೀತಿ ಸಂಹಿತೆಯ ಸಂದರ್ಭದಲ್ಲಿ ಅಡಿಗಲು ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತವೆ? ಹಾಗಾದರೆ ಅಜಯ್ ಸಿಂಗ್ ಅವರು ಶಾಸಕ ಆದಾಗಿನಿಂದ ಇಲ್ಲಿಯವರೆಗೆ ತಾಲೂಕಿನಲ್ಲಿ ಯಾವುದೇ ಕಾಮಗಾರಿಗಳು ನಡೆದಿಲ್ಲವೇ? ಏಕೆ ನಡೆದಿಲ್ಲ ನಡೆದಿದೆ.

Contact Your\'s Advertisement; 9902492681

ನಡೆದ ಕೆಲ ಕಾಮಗಾರಿಗಳು ಹೊರ ರಾಜ್ಯದ ಗುತ್ತಿಗೆದಾರರಿಂದ ಮಾಡಿಸಿದ್ದಾರೆ. ಅವುಗಳ ಕೆಲಸವೆಲ್ಲ ಕೇವಲ ಕಾಗದ ಪತ್ರಗಳಲ್ಲಿ ಆಗಿ ಮುಗಿದು ಹೋಗಿವೆ. ಈಗ ಮಾಡಿದ ಹಾಗೆ ಆವಾಗ ಅಡಿಗಲ್ಲು ಹಾಕಿ ಕಾಮಗಾರಿ ಉದ್ಘಾಟಿಸಿದರೆ ಕಾರ್ಯಕರ್ತರು ನಮಗೆ ಆ ಕೆಲಸ ಕೊಡಿ ಎಂದು ಕೇಳುತ್ತಾರೆ ಎಂಬ ಕಾರಣಕ್ಕೆ ಅಡಿಗಲ್ಲು ಹಾಕದೆ ಯೋಜನೆಗಳು ಕಾಗದ ಪತ್ರಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಬೆಳಗಾದರೆ ಚುನಾವಣಾ ನೀತಿ ಸಂಹಿತಿ ಜಾರಿಗೆ ಬರಲಿದೆ ಆದರೆ ಅಜಯ್ ಸಿಂಗ್ ಅವರು ತಾಲೂಕಿನಾದ್ಯಂತ ಅಡಿಗಲು ಸಮಾರಂಭದ ಮತಯಾತ್ರೆ ಹಾಕಿಕೊಂಡಿದ್ದಾರೆ. ಆದರೂ ಇವರು ಕೈಗೊಂಡಿರುವ ಅಡಿಗಲ್ಲು ಸಮಾರಂಭದ ಕಾರ್ಯಕ್ರಮದ ವೇದಿಕೆ ಮೇಲೆ ರೈತರು ಗಲಾಟೆ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ನಿಮ್ಮಪ್ಪ. ನೀನು ನಮಗಾಗಿ ಏನು ಕೆಲಸ ಮಾಡಿದ್ದಿರಿ ಎಂದು ವೇದಿಕೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ.

ಪ್ರಶ್ನೆ ಕೇಳಿದ ಜನಸಾಮಾನ್ಯರ ಮೇಲೆ ರೈತರ ಮೇಲೆ ಹಿಂಬಾಲಕರಿಂದ ಹಲ್ಲೆ, ದಬ್ಬಾಳಿಕೆ ನಡೆಸಿ ಹತ್ತಿಕುತ್ತಿದ್ದ ವಿಡಿಯೋ ತುಣುಕುಗಳು ಫೇಸ್ಬುಕ್, ವಾಟ್ಸಾಪ್, ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೂ ಹಠಕ್ಕೆ ಬಿದ್ದ ತ್ರಿವಿಕ್ರಮನಂತೆ ಅಜಯ ಸಿಂಗ್ ಅವರು ತಮ್ಮ ಅಡಿಗಲು ಸಮಾರಂಭದ ಮುಖಾಂತರ ಜನಸಾಮಾನ್ಯರನ್ನು, ರೈತರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ನಿಲ್ಲಿಸುತ್ತಿಲ್ಲ.

ಜೇವರ್ಗಿ ತಾಲೂಕಿನಿಂದ ಧರ್ಮಸಿಂಗ್ ಅವರು ಸತತ ಎಂಟು ಬಾರಿ ಆಯ್ಕೆಯಾಗಿ, ಪ್ರಮುಖವಾದ ಎಲ್ಲಾ ಖಾತೆಗಳ ಸಚಿವರಾಗಿದ್ದಲ್ಲದೆ ಮುಖ್ಯಮಂತ್ರಿಗಳಾದರು. ಮುಂದಿನ ಸರತಿ ಈಗ ಅವರ ಮಗ ಅಜಯ್ ಸಿಂಗರದ್ದು. ಅವರು ಕೂಡ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದಾರೆ.

ಈ ಬಾರಿಯೂ ಟಿಕೆಟ್ ಅವರಿಗೆ ಫೈನಲ್ ಆಗಿದೆ. ಏಕೆಂದರೆ ಯಾವೊಬ್ಬ ಅಭ್ಯರ್ಥಿಯು ಕೂಡ ಆಕಾಂಕ್ಷೆಯಾಗಿ ಅರ್ಜಿ ಸಲ್ಲಿಸಿಲ್ಲ. ಸಲ್ಲಿಸಬೇಕೆಂದರೆ ಯಾರಲ್ಲಿಯೂ ಆ ಸಾಮರ್ಥ್ಯ ಉಳಿಸಿಲ್ಲ. ಅವರಿವರನ್ನದೆ ಎಲ್ಲಾ ಸಮುದಾಯದ ಘಟಾನುಘಟಿ ನಾಯಕರನ್ನು ರಾಜಕೀಯವಾಗಿ ಮಣ್ಣುಗೂಡಿಸಿದ್ದಾರೆ. ರಾಜನ ಮಗ ರಾಜನಾಗಬೇಕೆಂಬ ನೀತಿಯ ಮೇಲೆ ಧರ್ಮಸಿಂಗ್ ತನ್ನ ನಂತರ ಅಜಯ್ ಸಿಂಗ ಅವರಿಗೆ ಪಟ್ಟಾಭಿಷೇ ಮಾಡಿದ್ದಾರೆ.

ಇರಲಿ, ಧರ್ಮ್ ಸಿಂಗ್ ನಂತರ ಅಜಯ್ ಸಿಂಗ್ ನಂತರ ಅವರ ಮಗ, ಅವರ ಮಗ ನಂತರ ಅವರ ಮಗ ಹೀಗೆ ರಾಜಮನೆತನದಂತೆ ಇವರ ರಾಜಕೀಯ ಪ್ರಭುತ್ವ ಮುಂದುವರೆಯಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳು ಕಲ್ಪಿಸುವುದು ಇವರ ಗುರುತರವಾದ ಜವಾಬ್ದಾರಿ ಅಲ್ಲವೇ? ಈ ತಾಲೂಕಿನಿಂದಲೇ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆದರು ಕೂಡ ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ದೇವದುರ್ಗ ಹೊರತುಪಡಿಸಿದರೆ ಜೇವರ್ಗಿ ತಾಲೂಕ ಆಗ್ರ ಸ್ಥಾನದಲ್ಲಿದೆ.

ತಾಲೂಕಿನಲ್ಲಿ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಸೇರಿದಂತೆ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳು ತಾಂಡವಾಡುತ್ತಿವೆ. ಉದಾಹರಣೆಗೆ ಅವುಗಳಲ್ಲಿ ಒಂದಾದ ಕುಡಿವ ನೀರಿನ ವಿಚಾರ ತೆಗೆದುಕೊಳ್ಳೋಣ. ಜೀವನದಿ ಭೀಮೆ ತಾಲೂಕಿನ ಬಹುತೇಕ ಪ್ರದೇಶ ವ್ಯಾಪಿಸಿದ್ದರೂ ಇಂದಿಗೂ ಇಲ್ಲಿನ ನೂರಾರು ಹಳ್ಳಿಗಳು ಶಾಶ್ವತ ಕುಡಿವ ನೀರಿನ ಸೌಕರ್ಯವಿಲ್ಲದೆ ಕಂಗೆಟ್ಟಿವೆ. ಉಳಿದ ಸಮಸ್ಯೆಗಳು ಕೂಡ ಇದರಂತೆ.

ನೀರಿನ ಸಮಸ್ಯೆ ವಿಪರೀತ: ಧರಂಸಿಂಗ್ ಹುಟ್ಟೂರು ನೆಲೋಗಿಯೇ ಈ ಮಾತಿಗೆ ಕೈ ಕನ್ನಡಿ. ಈ ಊರ ಪಕ್ಕದಲ್ಲೇ ಭೀಮೆ ಹರಿದು ಹೋಗುತ್ತಾಳೆ. ತಂದೆ ಮಕ್ಕಳಿಬ್ಬರು ಈ ಭೀಮಾ ನದಿಯ ನೀರನ್ನು ಶುದ್ಧೀಕರಿಸಿ ತನ್ನ ಊರಿನವರಿಗೆ ಕೊಡುವ ಪ್ರಾಮಾಣಿಕ ಪ್ರಯತ್ನ ಇಂದಿಗೂ ಮಾಡಿಲ್ಲ. ಆಂದೋಲಾ, ಕಲ್ಲಹಂಗರ್ಗಾ, ಕೂಡಿದರ್ಗಾ ಹೀಗೆ ನೀರಿಲ್ಲದೆ ಬಾಯಾರಿರುವ ಹಳ್ಳಿಗಳ ಹೆಸರಿನ ಯಾದಿ ಹೇಳುತ್ತಲ್ಲಿದ್ದರೆ ಹನುಮಂತನ ಬಾಲದಂತೆ ಉದ್ದಕ್ಕೇ ಬೆಳೆಯುತ್ತಲೇ ಹೋಗುತ್ತದೆ.

ಧರ್ಮಸಿಂಗ್ ಅವರ ಕಾಲದಿಂದಲೂ ಚುನಾವಣೆ ಬಂದಾಗೊಮ್ಮೆ ಕೆಲ ಮುಖಂಡರುಗಳನ್ನು ಕರೆದುಕೊಂಡು ಹಳ್ಳಿ ಕಡೆಗೆ ಬರುವುದು ವಾಡಿಕೆ ಇದೆ. ಈಗ ಅಜಯ ಸಿಗ್ ಅವರು ಕೂಡ ಅದನ್ನೇ ಮುಂದುವರಿಸುತ್ತಿದ್ದಾರೆ. ಅವರೊಂದಿಗೆ ಬರೋ ಮಂದಿಗೆ ಹೇಳಿ ಹೇಳಿ ಸಾಕ್ಯಾಗದ್ರಿ, ಬೇಸಿಗೆ ಬಂದಾಗ ಕಾಟಾಚಾರಕ್ಕೆ ಬೋರವೆಲ್ ಹಾಕಿ ಹೋಗ್ತಾರ, ಅದು ನಡದಷ್ಟು ದಿನ ನೀರ, ಮುಂದ ಆ ದೇವರೇ ಗತಿ ಎಂದು ಜನತೆ ತಾವು ಅನುಭವಿಸುತ್ತಿರುವ ನೀರಿನ ಸಮಸ್ಯೆಯನ್ನು ಈ ರೀತಿ ಹೇಳುತ್ತಾರೆ.

ಇದಕ್ಕೇನು ಕಾರಣ?: 1972ರಿಂದ 2004ರ ವರೆಗಿನ 8 ಚುನಾವಣೆಗಳಲ್ಲಿ ಜೇವರ್ಗಿಯಿಂದ ಗೆದ್ದುಬಂದವರು ಧರಂಸಿಂಗ್. ಸಮಾಜ ಕಲ್ಯಾಣ, ಅಬಕಾರಿ, ನಗರಾಭಿವೃದ್ಧಿ, ಕಂದಾಯ, ಪಿಡಬ್ಲೂಡಿ ಸಚಿವರಾಗಿ, ಕೊನೆಗೆ ರಾಜ್ಯದ ಮುಖ್ಯಮಂತ್ರಿ ಕೂಡ ಆದರು. ಆದರೆ ತಾಲೂಕಿನಲ್ಲೇ ಪವಡಿಸಿರುವ ಭೀಮೆ ಬದಿ ಬಾಂದಾರುಗಳ ನಿರ್ಮಾಣ ಸಾಧ್ಯತೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ಧರಂಸಿಂಗ್ ನಿರೀಕ್ಷಿತ ಸಾಧನೆ ಮಾಡಿದ್ದರೆ ಇಂದು ಜೇವರ್ಗಿ ನಂದನವನ ಆಗುತ್ತಿತ್ತು ಎಂಬ ಜನರ ಅಭಿಮತ ಸುಳ್ಳೇನಲ್ಲ.
ಇಲ್ಲಿ ಮಂಜೂರಾಗಿದ್ದ ತಾಲೂಕು ಕಚೇರಿಗಳ ಸಂಕೀರ್ಣ ಕಟ್ಟಡ ಲೋಕಾರ್ಪಣೆಗೆ ವರ್ಷಗಳೇ ಹಿಡಿದವು.

ಹಾಗೆಯೇ ಇಲ್ಲಿನ ಶೌಚಾಲಯಗಳ ಸಮಸ್ಯೆಕ್ಕೆ ಪರಿಹಾರ ಪ್ರಯತ್ನಗಳೇ ನಡೆದಿಲ್ಲ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಸಚಿವ ಜೈರಾಂ ರಮೇಶ ಅವರು ಜೇವರ್ಗಿ ತಾಲೂಕಿನ ಇದೇ ಕ್ಷೇತ್ರದ ಗಂವ್ಹಾರಕ್ಕೆ ಬಂದು ಶೌಚಾಲಯ ಸಮಸ್ಯೆಗೆ ಪರಿಹಾರ ನೀಡುವ ಯತ್ನ ಮಾಡಿದ್ದು ಇಲ್ಲಿ ಸ್ಮರಣಾರ್ಹ.

ಫುಡ್ಪಾರ್ಕ್ ಯೋಜನೆ ನೆನೆಗುದಿಗೆ: ಧರಂಸಿಂಗ್ ಅವರು ಸಿಎಂ ಆಗಿದ್ದಾಗ ಮಂಜೂರಾಗಿದ್ದ ಜೇವರ್ಗಿ ಫುಡ್ಪಾರ್ಕ್ ಯೋಜನೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ರೈತರಿಂದ ಸ್ವಾಧೀನಪಡಿಸಿಕೊಂಡಿರುವ 125 ಎಕರೆ ಭೂಮಿ ಹಾಗೇ ಉಳಿದಿದೆ. ತಂದೆಯ ಯೋಜನೆ ಮಗ ಅಜಯ ಸಿಂಗ್ ಪೂರ್ಣಗೊಳಿಸಬೇಕಾಗಿತ್ತು. ರೈತರು ಉದಾರತನದಿಂದ ತಮ್ಮೂರಿಗೆ ದೊಡ್ಡದೊಂಡು ಉದ್ಯಮ ಬರುತ್ತದೆ ಎಂದು ಭೂಮಿ ನೀಡಿದ್ದರು. ಆದರೆ ಇಂದಿಗೂ ರೈತರ ನಿರೀಕ್ಷೆ ಕೈಗೂಡಿಲ್ಲ. ಅವರ ನಿರಾಶಕ್ತಿಗೆ ಕಾರಣ ಏನಿರಬಹುದು. ಕಾರಣ ಆ ಭೂಮಿಯನ್ನು ಖಾಸಗಿ ಸೊತ್ತಾಗಿ ಪರಿವರ್ತಿಸಿಕೊಳ್ಳುವ ಪ್ರಯತ್ನಗಳು ನಡಿದಿವೆ ಎಂಬುದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಯಡ್ರಾಮಿ ತಾಲೂಕು ಕೇಂದ್ರ: ಯಡ್ರಾಮಿಯೂ ತಾಲೂಕು ಕೇಂದ್ರವಾಗಬೇಕೆಂಬ ಇಲ್ಲಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಕೋನಾ ಹಿಪ್ಪರ್ಗಾ ಬಾಂದಾರು ಯೋಜನೆಗೂ ಅನುಮತಿ ದೊರಕಿದೆ. ಆದರೆ ತಾಲೂಕು ಕೇಂದ್ರವಾದ ಯಡ್ರಾಮಿ ಪ್ರಗತಿಯಲ್ಲಿ ಒಂದ್ ಹೆಜ್ಜೆಯು ಮುಂದಿಟ್ಟಿಲ್ಲ. ಬರುವ ದಿನಗಳಲ್ಲಿ ತಮ್ಮ ತಾಲೂಕು ಕೇಂದ್ರದ ಪ್ರಗತಿಗೆ ಬೆಂಬಲ ನೀಡುವವರಿಗೆ ಮತ ಹಾಕುವುದಾಗಿ ಯಡ್ರಾಮಿ ಜನ ಹೇಳುತ್ತಿದ್ದಾರೆ. ಕೋನಾಹಿಪ್ಪರ್ಗಾ ಬಾಂದಾರಿಗೆ ಅನುಮತಿ ದೊರಕಿದ್ದರೂ ಮಲ್ಲಾಬಾದಿ ಏತ ನೀರಾವರಿಗೆ ನಿರ್ಲಕ್ಷ್ಯ ವಹಿಸಿದ್ದಾರೆ ಏನ್ನಲಾಗುತ್ತಿದೆ.

ಕಣದ ಹಿನ್ನೋಟ: ಈ ಬಾರಿ ಧರಂ ಪುತ್ರ ಡಾ. ಅಜಯ್ ಸಿಂಗ್(ಕಾಂಗ್ರೆಸ್) ಹಾಗೂ ಪ್ರಸಕ್ತ ಶಾಸಕ, ಬಿಜೆಪಿಯ ದೊಡ್ಡಪ್ಪಗೌಡ ನರಿಬೋಳ್ ನಡುವಿನ ಜಿದ್ದಾಜಿದ್ದಿ ಕಣ. ನಡೆದ 12 ಚುನಾವಣೆಗಳಲ್ಲಿ ಕ್ಷೇತ್ರ ಕಂಡದ್ದೇ 4 ಶಾಸಕರನ್ನು. ಏಕೆಂದರೆ- 8 ಬಾರಿ ಧರಂಸಿಂಗ್ ಅವರೇ ಇಲ್ಲಿಂದ ಗೆದ್ದವರು. ಜಾತಿ ರಾಜಕೀಯ ಇಲ್ಲಿ ಕಮ್ಮಿ ಏನಿಲ್ಲ. ಪ್ರಗತಿ ವಿಚಾರಗಳಿಗಿಂತ ಜಾತಿ ಸಮೀಕರಣ ಯಾರು ತಮ್ಮ ಪರವಾಗಿರುವಂತೆ ನೋಡಿಕೊಳ್ಳುತ್ತಾರೋ ಅವರಿಲ್ಲಿ ಶಾಸಕರಾಗುವುದು ನಿಶ್ಚಿತ ಎಂಬುದನ್ನು ಚುನಾವಣೆಗಳೇ ಸಾಬೀತುಪಡಿಸಿವೆ.

ಆದರೆ ತಂದೆ ಧರ್ಮಸಿಂಗ್ ಅವರಂತೆ ಅಜಯ್ ಸಿಂಗ್ ಅವರು ಎಲ್ಲ ಜಾತಿಯ ನಾಯಕರನ್ನು ತುಳಿಯುತ್ತಲೇ ಮೂಲೆಗುಂಪುಮಾಡಿ, ಅವರಲ್ಲಿ ಒಬ್ಬರನ್ನೊಬ್ಬರು ಎತ್ತಿ ಕಟ್ಟಿ ತಾವು ತಾವೇ ಕಿತ್ತಾಡಿಕೊಳ್ಳುವ ಹಾಗೆ ಮಾಡಿ, ತಾನು ಅಧಿಕಾರದಲ್ಲಿ ಮುಂದುವರಿಯಬೇಕೆಂದು ಹಾಕಿರುವ ಲೆಕ್ಕಾಚಾರವನ್ನು ಈ ಬಾರಿ ಎಲ್ಲಾ ಸಮುದಾಯದ ಮತ ಬಾಂಧವರು ಹುಷಿಗೊಳಿಸಲಿದ್ದಾರೆ.

ಏಕೆಂದರೆ ಗೆದ್ದು ಹೋದರೆ ಮತ್ತೆ ಐದು ವರ್ಷದ ನಂತರ ಬರುವ ಚುನಾವಣೆಗಳಲ್ಲಿ ಅಡಿಗಲ್ಲು ಸಮಾರಂಭದಲ್ಲಿ ಮಾತ್ರ ನಮಗೆ ಸಿಗುತ್ತಾನೆ ಅಲ್ಲಿಯವರೆಗೆ ಪ್ರತಿ ಸಲದಂತೆ ನಾವು ನಾವೇ ಕಿತ್ತಾಡಿಕೊಳ್ಳುತ್ತ ಇರಬೇಕಾಗುತ್ತದೆ ಎಂಬ ಅರಿವು ಬಂದಿರುವುದರಿಂದ, ಮುಂದಿನ ಚುನಾವಣೆಗೆ ಅಡಿಗಲ್ಲು ಸಮಾರಂಭಕ್ಕೆ ಅವಕಾಶವಿಲ್ಲವೆಂದು ಹೇಳಲು ನಿರ್ಧರಿಸಿದ್ದಾರೆ. ಇಲ್ಲದಿದ್ದರೆ ಜೇವರ್ಗಿಯ ಜನರ ಹಣೆಬರವೇ ಅಷ್ಟೇ ಅಪ್ಪ ಮುಖ್ಯಮಂತ್ರಿಯಾಗಿ ಏನು ಮಾಡಿಲ್ಲ ಇನ್ ಮಗ ಮಂತ್ರಿಯಾಗಿ ಏನ್ ಮಾಡ್ತಾನ? ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಹೊಸ ಮುಖ ಹೊಸ ಭರವಸೆ ಎಂಬಂತೆ ಹೊಸಬರಿಗೆ ಅವಕಾಶ ಮಾಡಿ ಕೊಡೋಣ ಎಂದು ಮತದಾರ ಪ್ರಭು ನಿರ್ಧರಿಸಿದ್ದಾರೆ.

– ಡಾ. ಸರ್ದಾರ ರಾಯಪ್ಪ
ರಾಜ್ಯಾಧ್ಯಕ್ಷರು
ರಾಷ್ಟ್ರೀಯ ಸಮಾಜ ಪಕ್ಷ
ಯುವ ಘಟಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here