ಸುರಪುರ: ಪರೀಕ್ಷೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಉಳಿದಿರುವ ಸ್ವಲ್ಪ ಸಮಯವನ್ನು ಬಳಸಿಕೊಂಡು ಫಲಿತಾಂಶ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಅಪರ ಆಯುಕ್ತ ನಲಿನ್ ಅತುಲ್ ಕರೆ ನೀಡಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ೨೦೧೯-೨೦ನೇ ಸಾಲಿನ ತಾಲೂಕಿನ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಯ ನಿಮಿತ್ತ ಪೂರ್ವ ಸಿದ್ದತೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮುಂಬರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆಯ ಅದರಲ್ಲೂ ಸುರಪುರ ತಾಲೂಕಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಫಲಿತಾಂಶವನ್ನು ಹೆಚ್ಚಿಸಲು ತಾಲೂಕಿನ ಎಲ್ಲಾ ಶಿಕ್ಷಕ ಸಮುದಾಯದವರು ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಫಲಿತಾಂಶ ಹೆಚ್ಚಿಸಿ.
ಫಲಿತಾಂಶ ಹೆಚ್ಚಳಕ್ಕೆ ತಾಲೂಕಿನ ಪ್ರೌಢಶಾಲಾ ಶಿಕ್ಷಕರು ಸಾಕಷ್ಟು ಪ್ರಯತ್ನಿಸುತ್ತಿದ್ದೀರಿ ಆದರೂ ಯಾವ ಹಂತದಲ್ಲಿ ವಿಫಲತೆ ಆಗುತ್ತಿದೆ ಎಂಬುದನ್ನು ಶಿಕ್ಷಕರು ಕಂಡುಕೊಳ್ಳಿ, ತಾಲೂಕಿನ ಫಲಿತಾಂಶವನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳು ಹಾಗೂ ವಿಧಾನಗಳ ಮೂಲಕ ಉಳಿದಿರುವ ಅಲ್ಪ ದಿನಗಳಲ್ಲಿ ಶಕ್ತಿ ಮೀರಿ ಪ್ರಯತ್ನಿಸಬೇಕು ವಿದ್ಯಾರ್ಥಿಗಳ ಪಾಲಕರನ್ನು ಸಂಪರ್ಕಿಸಿ ಅವರ ಮಕ್ಕಳ ಕಲಿಕೆಯ ಕುರಿತು ತಿಳಿಸಿ ತಾಲೂಕಿನ ಫಲಿತಾಂಶವನ್ನು ನೂರಕ್ಕೆ ನೂರರಷ್ಟು ಪಡೆಯುವ ಬಗ್ಗೆ ನನಗೆ ಮಾತು ಕೊಡಿ ಎಂದು ಶಿಕ್ಷಕರನ್ನು ಕೇಳಿದರು, ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಶಿಕ್ಷಕರು ಫಲಿತಾಂಶ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಕ್ರೆಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ತೀವ್ರ ನಿಗಾ ಕಲಿಕಾ ಘಟಕದ ಮಕ್ಕಳ ಫಲಿತಾಂಶ ಕುಸಿದಿದ್ದು ಇದರ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದ ಶಿಕ್ಷಣ ಇಲಾಖೆ ವ್ಯಾಪ್ತಿಯ ಯಾದಗಿರಿ ಜಿಲ್ಲೆಯ ಮೂರು ತಾಲೂಕುಗಳಲ್ಲಿ ತೀವ್ರ ನಿಗಾ ಘಟಕದ ಮಕ್ಕಳ ಫಲಿತಾಂಶ ಕಮ್ಮಿ ಇದ್ದು ಮುಂಬರುವ ವಾರ್ಷಿಕ ಪರೀಕ್ಷೆಯಲ್ಲಿ ಫಲಿತಾಂಶ ಸುಧಾರಣೆಗೆ ಶ್ರಮಿಸುವಂತೆ ಅವರು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಹ ನಿರ್ದೇಶಕ ವಿಜಯಕುಮಾರ, ಬಿ.ಇ.ಓ ನಾಗರತ್ನ ಓಲೇಕಾರ ಮಾತನಾಡಿದರು, ಡಿ.ಡಿ.ಪಿ.ಯ ಲಕ್ಷ್ಮೀಕಾಂತರೆಡ್ಡಿ, ವಿಷಯ ಪರೀವೀಕ್ಷಕ ಮಲ್ಲಪ್ಪ ಯರಗೋಳ, ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ.ಕೆ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಹಾಗೂ ತಾಲೂಕಿನ ವಿವಿಧ ಪ್ರೌಢಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಇದ್ದರು.