ಕೊರೋನಾ ಭೀತಿ: ಕೋಮುಗ್ರಸ್ಥಗೊಳಿಸುವುದಕ್ಕೆ ಕಮ್ಯುನಿಸ್ಟ್ರ ವಿರೋಧ

0
32

ಕಲಬುರಗಿ: ಕೋವಿಡ್-೧೯ರ ವಿರುದ್ಧ ಭಾರತದ ಸಮರವನ್ನು ಕೋಮುಗ್ರಸ್ತಗೊಳಿಸುವುದನ್ನು ನಿಲ್ಲಿಸಬೇಕು ಎಂದು ಭಾರತ್ ಕಮ್ಯುನಿಸ್ಟ್ (ಮಾರ್ಕ್‌ಸಿಸ್ಟ್) ಪಕ್ಷದ ಪಾಲಿಟ್‌ಬ್ಯುರೋ ಒತ್ತಾಯಿಸಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ತಬ್ಲೀಘಿ ಜಮಾತ್‌ನ ಒಂದು ಸಭೆಯಲ್ಲಿ ಹಾಜರಿದ್ದ ಬಹಳಷ್ಟು ಜನಗಳು ದೇಶದ ವಿವಿಧ ಭಾಗಗಳಿಗೆ ಹೋಗಿದ್ದು, ಅವರಲ್ಲಿ ಹಲವರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಪತ್ತೆಯಾಗಿರುವುದು ಒಂದು ಗಂಭೀರ ಆತಂಕದ ಸಂಗತಿ ಎಂದು ಅವರು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಮಾರ್ಚ್ ಮಧ್ಯಭಾಗದಲ್ಲಿ ಸಭೆ, ಸಮಾರಂಭಗಳ ಸಂಖ್ಯೆಯ ಮೇಲೆ ನಿರ್ಬಂಧಗಳಿದ್ದಾಗ ಇಂತಹ ಒಂದು ಸಭೆಯನ್ನು ನಡೆಸುವುದು ಜಮಾತ್ ಮುಖಂಡತ್ವದ ಬೇಜವಾಬ್ದಾರಿತನ. ಆದಾಗ್ಯೂ, ಮಾರ್ಚ್ ೨೦,೨೧ರಂದು ಮತ್ತೊಂದು ಸಮಾರಂಭಕ್ಕೆ ಅಧಿಕಾರಿಗಳು ಹೇಗೆ ಅವಕಾಶ ನೀಡಿದರು ಎಂಬುದು ಅರ್ಥವಾಗದ ಸಂಗತಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಒಂದು ಕೋಮುವಾದಿ ಬಣ್ಣ ಕೊಡಲು ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡುವ ಪ್ರಯತ್ನಗಳನ್ನು, ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರಚಾರವನ್ನು ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕೊರೋನಾ ಸೋಂಕು ಧರ್ಮದ ಆಧಾರದಲ್ಲಿ ಬೇಧ ಮಾಡುವುದಿಲ್ಲ. ಈ ಪ್ರಶ್ನೆಯನ್ನು ಕೋಮುಗ್ರಸ್ತಗೊಳಿಸುವ ಎಲ್ಲ ಪ್ರಯತ್ನಗಳಿಗೆ ತಕ್ಕ ಪ್ರತ್ಯುತ್ತರ ನೀಡಬೇಕು. ಮಾರ್ಚ್ ೧೩ರಂದು ೨೦೦ಕ್ಕಿಂತ ಹೆಚ್ಚು ಜನಗಳಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಭೆ, ಸಮಾರಂಭಗಳನ್ನು ನಿಷೇಧಿಸಿದ ನಂತರ ದೇಶದ ಹಲವು ಭಾಗಗಳಲ್ಲಿ ನಡೆದಿರುವ ಎಲ್ಲ ದೊಡ್ಡ ಸಮಾರಂಭಗಳ ಆಮೂಲಾಗ್ರ ತನಿಖೆ ಕೈಗೊಳ್ಳಬೇಕು ಹಾಗೂ ಅವುಗಳಲ್ಲಿ ಪಾಲ್ಗೊಂಡವರಿಗೆ ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ದಕ್ಷಿಣ ಕೋರಿಯಾ ಮತ್ತು ಸಿಂಗಾಪೂರದಲ್ಲಿ ದೊಡ್ಡ ಗೋಷ್ಠಿಗಳಲ್ಲಿ ಭಾಗವಹಿಸಿದ ಎಲ್ಲರನ್ನೂ ಅತ್ಯಂತ ಜಾಗರೂಕತೆಯಿಂದ ಪತ್ತೆ ಹಚ್ಚಿ, ತೀವ್ರ ತಪಾಸಣೆಯ ನಂತರ ಅವರನ್ನು ಪ್ರತ್ಯೇಕಗೊಳಿಸಿ ಕೋವಿಡ್-೧೯ರ ಸಾಮುದಾಯಿಕ ಪ್ರಸರಣ ನಡೆಯದಂತೆ ತಡೆದಿವೆ. ಆದರಿಂದ ಎಲ್ಲರೂ ಪಾಠ ಕಲಿಯಬೇಕು. ಭಾರತದ ತಪಾಸಣಾ ದರ ತುಂಬಾ ಕೆಳಗಿದೆ. ದಕ್ಷಿಣ ಕೋರಿಯಾದ್ದು ನಮ್ಮ ದರದ ೨೪೧ ಪಟ್ಟು. ಅದನ್ನು ತುರ್ತಾಗಿ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದು ಕೋವಿಡ್-೧೯ರ ವಿರುದ್ಧ ಭಾರತದ ಸಮರ. ಅದನ್ನು ಕೋಮುಗ್ರಸ್ತಗೊಳಿಸುವ ಎಲ್ಲ ಪ್ರಯತ್ನಗಳೂ ಈ ಸೋಂಕನ್ನು ತಡೆಯುವಲ್ಲಿ ನಮ್ಮ ವಿಜಯವನ್ನು ಶಿಥಿಲಗೊಳಿಸುತ್ತವೆ. ಇದು ನಮ್ಮನ್ನು ನಾವೇ ಸೋಲಿಸುವ ಒಂದು ಕೆಲಸವಾಗುತ್ತದೆ. ಸರ್ಕಾರ ಇಂತಹ ಅಪಾಯಕಾರೀ ಕೋಮುವಾದಿ ದ್ರುವೀಕರಣ ಹರಡುವುದನ್ನು ನಿಲ್ಲಿಸಲು ಸರ್ವ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಚೋದನೆಗಳಿಗೆ ಬಲಿ ಬೀಳಬಾರದು. ಈ ಮಹಾಮಾರಿಯ ವಿರುದ್ಧ ನಮ್ಮ ಐಕ್ಯ ಪ್ರಯತ್ನಗಳನ್ನು ಬಲಪಡಿಸಬೇಕು ಎಂದು ಅವರು ಎಲ್ಲರಲ್ಲಿಯೂ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here