ಕಲಬುರಗಿ: ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯಗಳಿಂದ ಬಂದ ಜನರ ಕ್ವಾರಂಟೈನ್ಗಾಗಿ ಕಾಳಗಿ ಪಟ್ಟಣದಲ್ಲಿರುವ ಕೆಳಕಂಡ ಶಾಲೆಗಳನ್ನು ಅಧಿಗ್ರಹಣ ಮಾಡುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳು ತಮ್ಮ ಶಾಲೆಗಳ ಕಟ್ಟಡವನ್ನು ಕಾಳಗಿ ತಹಶೀಲ್ದಾರರಿಗೆ ಹಸ್ತಾಂತರಿಸಬೇಕೆಂದು ಕಲಬುರಗಿ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಶರತ್ ಬಿ. ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಕಾಳಗಿ ಪಟ್ಟಣದಲ್ಲಿರುವ ಶಶಿಕಲಾ ವಿದ್ಯಾಮಂದಿರ ಇಂಗ್ಲೀಷ ಮಾಧ್ಯಮ ಶಾಲೆ, ಎಂ.ಎನ್. ಗಾಜರೆ ಪದವಿ ಪೂರ್ವ ಕಾಲೇಜು ಹಾಗೂ ಗಾಜರೆ ಎಜ್ಯುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಕಾಳಗಿ ಶಾಲೆಗಳ ಕಟ್ಟಡಗಳನ್ನು ಅಧಿಗ್ರಹಣ ಮಾಡಲಾಗುವುದು. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1897, ಕರ್ನಾಟಕ ಕೋವಿಡ್-19 ರೆಗ್ಯುಲೇಶನ್ ಉಪ ಕಲಂ (24) 2020 ನಿಯಮ 12ರಲ್ಲಿ ಹಾಗೂ Disaster Management Act 2005, ಕಲಂ 25, 26 ಮತ್ತು 30 ರಡಿ ಸಿ.ಆರ್.ಪಿ.ಸಿ. ಕಾಯ್ದೆ 1973 ರ ಕಲಂ 133ರನ್ವಯ ಡಿ.ಸಿ. ಶರತ್ ಬಿ. ಅವರು ಈ ಆದೇಶ ಹೊರಡಿಸಿದ್ದಾರೆ.