ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಎದುರು ಹೀನಾಯ ಸೋಲು ಕಂಡ ಖರ್ಗೆ

0
731
  • ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಸೋಲಿಲ್ಲದ ಸರದಾರ ಉತ್ತಮ ಸಂಸದೀಯ ಪಟು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೇ ಮೊದಲ ಬಾರಿಗೆ ಬಿಜೆಪಿಯ ಡಾ. ಉಮೇಶ್ ಜಾಧವ್ ಅವರು ಸೋಲಿನ ರುಚಿ ಉಣಿಸುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ಸತತ 11 ಬಾರಿ ಗೆಲುವು ಕಂಡಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಅವರು 1972ರಿಂದ ಇಲ್ಲಿಯ ವರೆಗೆ ತಮ್ಮ ರಾಜಕೀಯ ಜೀವನದಲ್ಲಿ ಸೋಲೆಂಬುದೇ ಅವರಿಗೆ ತಿಳಿದಿರಲಿಲ್ಲ. ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಸತತ 8 ಬಾರಿ ಗೆಲುವು ಸಾಧಿಸಿದ್ದ ಅವರು ಚಿತ್ತಾಪೂರ ಮೀಸಲು ಕ್ಷೇತ್ರದಿಂದ ಒಂದು ಬಾರಿ ಗೆಲುವು ಸಾಧಿಸುವ ಮೂಲಕ ಸತತ 9 ಬಾರಿ ವಿಧಾನ ಸಭೆ ಪ್ರವೇಶ ಮಾಡಿದ್ದರು.

Contact Your\'s Advertisement; 9902492681

ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸತತ 2 ಬಾರಿ ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಕಾರ್ಮಿಕ ಮತ್ತು ರೈಲ್ವೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಮೇಲಾಗಿ ಈ ಬಾರಿ ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಪಕ್ಷದಲ್ಲಿ ತಮ್ಮ ಪ್ರಭಾವ ಬೆಳಸಿಕೊಂಡಿದ್ದರು.

ಲೋಕ ಸಭೆ ಅಧಿವೇಶ ನಡೆಯುವ ವೇಳೆ ಸ್ವತಹ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೀರಿಳಿಸಿದ ಅನೇಕ ಪ್ರಸಂಗಗಳಿವೆ ಹೀಗಾಗಿ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಶತಾಯಗತಾಯ ಸೋಲಿಸಲೇ ಬೇಕೆಂದು ಬಿಜೆಪಿಯವರು ಪಣತೊಟ್ಟಿದ್ದರು. ಅಂತೆಯೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪ್ರಚಾರ ಭಾಷಣದಲ್ಲಿ “ದಿಲ್ಲಿಯಿಂದ ಹಳ್ಳಿಯವರೆಗೆ ನನ್ನನ್ನು ಸೋಲಿಸಲು ಶಪಥ ಮಾಡಿದಂತಿದೆ ಎಂದು ಅವಲತ್ತುಕೊಳ್ಳುತ್ತಿದ್ದರು.

ನನ್ನನ್ನು ಸೋಲಿಸಲು ಕಾರಣಗಳೇನು? ಕ್ಷೇತ್ರದ ಜನತೆಗೆ ಅಭಿವೃದ್ದಿ ಕೆಲಸಗಳು ಬೇಡವೆ? ಹೈ.ಕ ಭಾಗಕ್ಕೆ 371(ಜೆ) ತರಬಾರದಿತ್ತೆ? ಈ ಭಾಗದಲ್ಲಿ ಕರ್ನಾಟಕ ಕೇಂದ್ರಿಯ ವಿಶ್ವ ವಿದ್ಯಾಲಯ, ಗುಲ್ಬರ್ಗ ವಿಶ್ವ ವಿದ್ಯಾಲಯ, ಇಎಸ್ಐ ಆಸ್ಪತ್ರೆ ಆರಂಭಿಸಬಾರದಾಗಿತ್ತೆ? ಎಂದು ಚುನಾವಣೆ ವೇಳೆ ಹೋದಲ್ಲಿ ಬಂದಲ್ಲಿ ಇದೇ ಮಾತುಗಳನ್ನು ಆಡುತ್ತಿದ್ದರು.

ಚುನಾವಣೆ ನಂತರವೂ ನಾನು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ಜನ ನನಗೆ ವೋಟ್ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ ಆದರೆ ಈ. ಇವಿಎಂ ಮಷಿನ್ ಗಳ ಮೇಲೆ ನನಗೆ ವಿಶ್ವಾಸ ವಿಲ್ಲ ಎಂದು ಮಾಧ್ಯಮದ ಎದುರು ತಮ್ಮ ಅಳಲು ತೋಡಿಕೊಂಡಿದ್ದರು. ನಿರೀಕ್ಷೆಯಂತೆ ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು,

ಕಲಬುರಗಿ ಲೋಕ ಸಭೆ ಚುನಾವಣೆ 1,01,33 ಮತಗಳ ಅಂತರದಿಂದ ಖರ್ಗೆ ಸೋಲು

ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಎದುರು 1,01,33 ಮತಗಳ ಅಂತರದಿಂದ ಖರ್ಗೆ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ, ಉಮೇಶ ಜಾಧವ್ ಅವರಿಗೆ 6,04,171 ಮತಗಳು ಬಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಮಲಿಕಾರ್ಜುನ ಖರ್ಗೆ ಅವರಿಗೆ 5,02,838 ಮತಗಳು ಬಂದಿವೆ.

ಸದ್ಯ ಖರ್ಗೆ ವಿರುದ್ಧ ಗೆಲುವು ಸಾಧಿಸಿರುವ ಡಾ. ಉಮೇಶ್ ಜಾಧವ್ ಕೂಡ ವೈದ್ಯಕೀಯ ಪದವಿಧರರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸದಾ ಆಸಕ್ತಿ ತೋರುವ ಲಕ್ಷಣಗಳು ಅವರಲ್ಲಿ ಇದೆ. ಆದರೆ ಅವರು ತಮ್ಮ ನೇರ ನಡೆ ನುಡಿಯಿಂದಾಗಿ ಬಿಜೆಪಿಯಲ್ಲಿ ಅದೆಷ್ಟು ಕಾಲ ಉಳಿಯ ಬಲ್ಲರು? ಅಥವಾ ಇಂತಹವರನ್ನು ಬಿಜೆಪಿ ಅದೆಷ್ಟು ಕಾಲ ಉಳಿಸಿಕೊಳ್ಳಬಲ್ಲರು ಎಂಬುದು ಸದ್ಯ ನಮ್ಮ ಮುಂದಿರುವ ಪ್ರಶ್ನೆಯಾಗಿದೆ. ಯಾಕೆಂದರೆ ತಮ್ಮ ಚುನಾವಣಾ ಪ್ರಚಾರದ ಸಭೆಯೊಂದರಲ್ಲಿ ನನಗೆ ಬಿಜೆಪಿ ಸೆಟ್ ಆಗ್ತಿಲ್ಲಾ ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಇದೇನೆ ಇರಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಡಾ. ಉಮೇಶ ಜಾಧವ್ ಅವರು ಖರ್ಗೆ ವಿರುದ್ಧ ಸೆಡ್ಡು ಹೊಡೆದು ನಿಂತು ಗೆಲುವು ಸಾಧಿಸಿರುವುದು ಐತಿಹಾಸಿಕ ಗೆಲುವು ಎಂದು ಬಣ್ಣಿಸಬಹುದಾಗಿದೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here