ಸುರಪುರ: ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಆಡಳಿತ ವಿಫಲವಾಗಿದೆ.ನಿತ್ಯವು ಒಂದಿಲ್ಲೊಂದು ಗಲಾಟೆಗಳು ನಡೆಯುತ್ತಿವೆ.ಜಿಲ್ಲಾ ಪಂಚಾಯತಿ ವಿರೋಧ ಪಕ್ಷದ ನಾಯಕನ ಮೇಲೆ ಹಲ್ಲೆ ನಡೆದರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆರೋಪಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ),ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಹಾಗು ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ (ಕ್ರಾಂತಿಕಾರಿ) ವತಿಯಿಂದ ನಗರದ ತಹಸೀಲ್ ಕಾರ್ಯಾಲಯದ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಮರಿಲಿಂಗಪ್ಪ ಕರ್ನಾಳ ಅವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದು ಒಂಬತ್ತು ದಿನಗಳಾವೆ ಆದರೂ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.
ನಿನ್ನೆಯೆ ದೇವಿಕೆರಾ ಗ್ರಾಮದಲ್ಲಿ ವ್ಯಕ್ತಿಯೊಬ್ಬನ ಬರ್ಬರವಾಗಿ ಕೊಲೆ ಮಾಡಲಾಗಿದೆ.ಅನೇಕ ಗ್ರಾಮಗಳಲ್ಲಿ ಗಲಾಟೆಗಳಾಗಿವೆ ಇವೆಲ್ಲವನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.ಆದ್ದರಿಂದ ಜಿಲ್ಲಾಡಳಿತದ ವೈಫಲ್ಯವನ್ನು ಉಗ್ರವಾಗಿ ಖಂಡಿಸುತ್ತ ಮರಿಲಿಂಗಪ್ಪನ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೆ ಬಂಧಿಸಬೇಕು.ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಜೀಬ್ ಸಾಬ್ ಐಕೂರ,ಡಾ: ಮಲ್ಲಿಕಾರ್ಜುನ ಆಶನಾಳ,ಬುದ್ಧಿವಂತ ನಾಗರಾಳ,ತಿಪ್ಪಣ್ಣ ಶೆಳ್ಳಿಗಿ,ಮರಲಿಂಗಪ್ಪ ಹುಣಸಿಹೊಳೆ,ಖಾಜಾ ಹುಸೇನ್ ಗುಡಗುಂಟಿ,ಹುಲಗಪ್ಪ ಬೈಲಕುಂಟಿ,ಭೀಮಣ್ಣ ಕ್ಯಾತನಾಳ,ಮಾನಪ್ಪ ಬಿಜಾಸಪುರ,ಬಸವರಾಜ ಶೆಳ್ಳಿಗಿ,ಮೌನೇಶ ತಿಂಥಣಿ,ದುರ್ಗಪ್ಪ ಅರಳಳ್ಳಿ,ಸಂಗಪ್ಪ ಚಿಂಚೋಳಿಮಹೇಶ ಸುಂಗಲಕರ್ ಸೇರಿದಂತೆ ಅನೇಕರಿದ್ದರು.