ಸಾಹಿತಿಗಳಾದ ಎ.ಕೃಷ್ಣಾ,  ಬಸವರಾಜ ರುಮಾಲ ನಿಧನ

0
87

ಸುರಪುರ: ಕನ್ನಡ ಸಾಹಿತ್ಯ ಲೋಕದಲ್ಲಿ ತನ್ನದೆ ಆದ ಛಾಪು ಮೂಡಿಸಿ ಇಂದು ಮರೆಯಾದ ಎ.ಕೃಷ್ಣಾ ಸುರಪುರ ಅವರೊಬ್ಬ ಬಹುದೊಡ್ಡ ಪ್ರತಿಭೆ.ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು.08 ಏಪ್ರೆಲ್ 1941 ರಲ್ಲಿ ಜನಿಸಿದ ಎ.ಕೃಷ್ಣಾ ಅವರು 1966ರಲ್ಲಿಯೆ ಟಿ.ಸಿ.ಹೆಚ್ ಮುಗಿಸಿ ಶಿಕ್ಷಕರಾಗಿದ್ದರು. ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಸೇರಿದಂತೆ ಅನೇಕ ಜನ ಮುಖಂಡರು ಇವರ ಶಿಷ್ಯ ವರ್ಗ ಬಹುದೊಡ್ಡದಿದೆ.

ಗಾಯತ್ರಿ ಮಂತ್ರದ ಮೇಲೆ ಹೊಸ ವ್ಯಾಖ್ಯಾನವನ್ನು ಬರೆದವರು ಇವರು. ತಮ್ಮ 14ನೆಯ ವಯಸ್ಸಿನಲ್ಲಿಯೇ ‘ಶ್ರೀ ಮಚ್ಚಂದ್ರಲಾಂಬಾ ಅಣುಪುರಾಣಂ’ ಎಂಬ ಚಂಪೂ ಮಹಾಕಾವ್ಯ ಬರೆದ ಕವಿರಾಜ ಇವರು. ತಮ್ಮ ‘ಎದೆಗಡಲ ಮುತ್ತುಗಳು’ ಕವನ ಸಂಕಲನದ ಮೂಲಕ ನಾಡಿನ ಜನರ ನಾಡಿ ಮೀಟಿದವರು. ಬೇಂದ್ರೆಯಿಂದ ಪ್ರಭಾವಿತರಾಗಿ ಬೇಂದ್ರೆ ಕಾವ್ಯದ ಗುಂಗನ್ನು ಪಡೆದು ಶಬ್ಧಗಾರುಡಿಗನ ನೆರಳಾದವರು ಇವರು. ಇವರನ್ನು ಅದಕ್ಕಾಗಿಯೇ ‘ಹೈದ್ರಾಬಾದ್ ಕರ್ನಾಟಕದ ಬೇಂದ್ರೆ’ ಎಂದು ಕರೆಯಲಾಗುತ್ತದೆ. ಹಿಮಾಲಯದಲ್ಲಿ ತಿರುಗಾಡಿ ಅಲ್ಲಿ ಕೇದಾರ ಮಠದಲ್ಲಿದ್ದು ಅಲ್ಲಿಯ ಮಹಿಮೆಯನ್ನು ತನ್ನದೇ ಆದ ಕಾವ್ಯ ಶೈಲಿಯಲ್ಲಿ ನೀಡಿದ ಪ್ರತಿಭಾವಂತರು.
ಆದರೆ ಇವರು ಶಾಲೆಯಲ್ಲಿ ಕಲಿತದ್ದಕ್ಕಿಂತ ಹೊರಗೆ ಕಲಿತದ್ದೇ ಹೆಚ್ಚು. ಕವಿತ್ವ ಇವರಿಗೆ ದೈವದತ್ತವಾಗಿ ಒಲಿದು ಬಂದಿತ್ತು. ತಮ್ಮ 8ನೇಯ ವಯಸ್ಸಿನಲ್ಲಿಯೇ ಕಾವ್ಯದ ಗುಂಗಿಗೆ ಬಿದ್ದ ಇವರು, ‘ಎದೆಗಡಲ ನೀರು ಕಪ್ಪಾಗಿ ಹೋಯ್ತು, ಒಳಗಣ್ಣು ಕಾಣದಾಯ್ತು’ ಎಂದು ಹೇಳುತ್ತಾರೆ.

Contact Your\'s Advertisement; 9902492681

ಕನ್ನಡ ಕಟ್ಟಾಳು ದಿ.ಎಂ.ಆರ್.ಬುದ್ಧಿವಂತಶೆಟ್ಟರು ಕಟ್ಟಿ ಬೆಳೆಸಿದ್ದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ಬೇಂದ್ರೆಯವರು ಬಂದಿದ್ದಾಗ, ಇಲ್ಲಿಗೆ ಸಮೀಪದ ದೇವಪುರಕ್ಕೆ ಹೋಗಿ ‘ಮಹಾಕವಿ ಲಕ್ಷ್ಮೀಶ’ನ ತಾಣವನ್ನು ನೋಡಿದರು. ಜೈಮಿನಿ ಭಾರತದ ಮೂಲಪ್ರತಿಯನ್ನು ಒಯ್ದರು, ಅದಕ್ಕೆ ಎ.ಕೃಷ್ಣರೇ ಪ್ರತ್ಯಕ್ಷ ಸಾಕ್ಷಿ. ಲಕ್ಷ್ಮೀಶ ದೇವಪುರದವನೇ ಎಂದೂ ಹೇಳಿ ಹೋದರು ಬೇಂದ್ರೆ ಎನ್ನುತ್ತಾರೆ ಕೃಷ್ಣರು. ನಂತರ ಬೇರೆ ಬೇರೆ ಕಾರಣಗಳಿಗಾಗಿ ಅವರು ನಂತರ ಮಾಸ್ತಿಯವರೊಡಗೂಡಿ ಲಕ್ಷ್ಮೀಶ ದೇವನೂರಿನವನೆಂದರು, ಪ್ರಸಿದ್ಧ ಸಂಶೋಧಕರಾದ ಸೀತಾರಾಮ ಜಾಗೀರದಾರರು ಲಕ್ಷ್ಮೀಶನ ಕುರಿತು ದೀರ್ಘ ಸಂಶೋಧನೆ ನಡೆಸಿ ಅವನು ದೇವಪುರದವನೇ ಎಂದು ಪ್ರತಿಪಾದಿಸಿದ್ದಾರೆ ಎಂದು ಹೇಳುತ್ತಾರೆ ಕೃಷ್ಣ.

ಕಾಲಜ್ಞಾನ-ಕಾವ್ಯಜ್ಞಾನ ಎರಡೂ ಮೇಳೈಸಿದ ಕವಿ ಕೃಷ್ಣರಾಗಿದ್ದಾರೆ. ಇವರು ಮಗುವಿನ ಹೃದಯದ ಮೃದು-ಮಧುರ ಕವಿ. ‘ಸಗರನಾಡ ದರ್ಶನ’ವನ್ನು 1985ರಲ್ಲಿಯೇ ಸಂಪಾದಿಸಿ ಇಲ್ಲಿಯ ಸಾಹಿತ್ಯ-ನೆಲ-ಜಲಗಳ ಪರಿಚಯ ಮಾಡಿಸಿದ್ದಾರೆ. ಯಾರೂ ತುಳಿಯದ ಮಾರ್ಗ ಅನುಸರಿಸುವ, ಮುರಿದು ಕಟ್ಟುವ ಭಂಜಕ ಶೈಲಿ ಇವರಿಗೆ ತುಂಬ ಇಷ್ಟ. ಪ್ರಸಿದ್ಧ ಉರ್ದು ಕವಿ ತನಹಾ ತಿಮ್ಮಾಪುರಿ ‘ಗಜಲ್’ಗೆ ಹೇಗೆ ಪ್ರಸಿದ್ಧರೋ, ಎ.ಕೃಷ್ಣ ಅವರು ನವೋದಯದ ಕಾವ್ಯಕ್ಕೆ ಪ್ರಸಿದ್ಧರು.

ಕಂದ ಪದ್ಯ, ಚಂಪೂ, ಷಟ್ಪದಿ, ರಗಳೆ, ನವೋದಯ, ನವ್ಯ, ಬಂಡಾಯದವರೆಗೆ ಸಾಗಿದೆ ಇವರ ರಥ. ಗಾಯತ್ರಿ ಮಂತ್ರದ ಮೇಲಿನ ಹೊಸ ಅವಿಷ್ಕಾರ ಇವರ ಸಾಧನೆಯಾಗಿದೆ. ಇದಕ್ಕಾಗಿ ಇವರು ‘ವೇದ ಸೌರಭದ’ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಆಧ್ಯಾತ್ಮದ ಔನ್ನತ್ಯಕ್ಕೆ ಏರಿದ್ದಾರೆ. ವಿನಯದ ಸಾಕಾರ ಮೂರ್ತಿಯಾದ ಇವರು, ‘ಕರುಣ ಕಿರೀಟ’, ಸಂತ ಹೃದಯದ ಶ್ರೀಮಂತ ನುಡಿಗಳು, ಗಾನಗಂಧರ್ವ ಸುರಪುರದ ಆನಂದದಾಸರು, ಸುಪ್ರಭಾತಗಳು, ಹಾಲೋಕುಳಿ, ಅನಂತಗಿರಿ ಮಹಾತ್ಮೆ, ಚಂದ್ರಗಂಗಾ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ‘ಮಹಾಕಾವ್ಯ’ವೊಂದನ್ನು ಬರೆಯುವ ಸಿದ್ಧತೆಯಲ್ಲಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಇವರ ಭಾವಗೀತೆಗಳು ನಿರಂತರ ಪ್ರಸಾರಗೊಳ್ಳುತ್ತಿವೆ. ನೂರಾರು ಉದಯೋನ್ಮುಖ ಬರಹಗಾರರಿಗೆ ಮಾರ್ಗದರ್ಶನ ಮಾಡಿದ್ದಾರೆ.

ಖ್ಯಾತ ಚಲನಚಿತ್ರ ನರ್ದೇಶಕರಾಗಿದ್ದ ದಿ.ಜಿ.ವ್ಹಿ.ಅಯ್ಯರ ಜೊತೆಗೂಡಿ ‘ಗುರುರಾಜರಡಿಯಲ್ಲಿ’ ಎಂಬ ಕೃತಿ ಹೊರತಂದಿದ್ದಾರೆ. ವಿದ್ವಾನ್ ಪಾವಗಡ ಪ್ರಕಾಶರಾವ್ ಇವರ ಬಗ್ಗೆ ಹೇಳುತ್ತಾರೆ-‘ಸಹಜ ಕವಿಗಳಾದ ಕೃಷ್ಣ ಅವರಿಗೆ ಕಾವ್ಯ ರಚನೆ ಮಲ್ಲಿಗೆಯ ಮಾರ್ಗ, ಹೀಗಾಗಿ ಇವರ ಬರಹಕ್ಕೆ ಸರಳತೆಯ ಸೂತ್ರವಿದೆ, ಗುಲಾಬಿಯ ಗಂಧವಿದೆ, ಸಲೀಲ ಸರಾಗವಿದೆ, ಸರಸತೆಯ ಸಮ್ಮೋಹವಿದೆ, ಇವೆಲ್ಲಕ್ಕೂ ಮಿಗಿಲಾಗಿ ಭಕ್ತಿ ಭಾಗಿರಥಿಯ ಓತಪ್ರೇತವಿದೆ, ಅಮಿತ ಅರ್ಪಣಾ ಮನೋಭಾವವಿದೆ, ಇದು ಸುರಪುರದ ಮಣ್ಣಿಗೆ ಇರುವ ಒಂದು ದಿವ್ಯ ಸಂವೇದನೆಯ ಫಲ!’ ಎಂದು ಕರೆಯುತ್ತಾರೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀನಿವಾಸ ಜಾಲವಾದಿಯವರು.

ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗು ಗೌರವ ಡಾಕ್ಟರೇಟ್ ದೊರೆಯಬೇಕಿತ್ತು.ಆದರೆ ಇವರ ಪ್ರತಿಭೆಯನ್ನು ಗುರುತಿಸುವಲ್ಲಿ ಸರಕಾರ ಎಡವಿತು ಎಂದು ಬೇಸರದಿಂದ ನುಡಿಯುತ್ತಾರೆ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ.ಇಂತಹ ಮಹಾನ್ ಚೇತನ ಇಂದು ನಿಧನರಾಗಿದ್ದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ.

ಅದೇರೀತಿಯಾಗಿ ಮತ್ತೊಬ್ಬ ಹಿರಿಯ ಸಾಹಿತಿ ನಗರದ ತಿಮ್ಮಾಪುರದ ಬಸವರಾಜ ರುಮಾಲ ಕೂಡ ನಿಧನರಾಗಿದ್ದು,ಇವರು ಕೂಡ ಅನೇಕ ಕೃತಿಗಳನ್ನು ರಚಿಸಿದ್ದಾರೆ.ಅಲ್ಲದೆ ಆಧುನಿಕ ವಚನಗಳನ್ನು ರಚಿಸಿ ಅವುಗಳ ಧ್ವನಿಮುದ್ರಣ ಕೂಡ ಹೊರ ತರುವ ಮೂಲಕ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.ಸಾಹಿತಿ ಬಸವರಾಜ ರುಮಾಲ ಅವರಿಗೆ ಇಬ್ಬರು ಪುತ್ರರು,ಮೂವರು ಪುತ್ರಿಯರು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಈ ಇಬ್ಬರು ಸಾಹಿತಿಗಳ ನಿಧನಕ್ಕೆ ಸುರಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗು ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘವು ಕಂಬನಿ ಮಿಡಿದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here