ವಾಡಿ: ಬಡಾವಣೆಯಲ್ಲಿ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದ ಜೆಸ್ಕಾಂ ಅಧಿಕಾರಿಗಳ ವರ್ತನೆಗೆ ಬೇಸತ್ತ ಸಾರ್ವಜನಿಕರು, ತಾವುಗಳೇ ದೇಣಿಗೆ ಸಂಗ್ರಹಿಸಿ ತಾತ್ಕಾಲಿಕ ಕಂಬಗಳನ್ನು ಅಳವಡಿಸಿಕೊಳ್ಳುವ ಮೂಲಕ ಮನೆಗೆ ಬೆಳಕು ಕಂಡಿದ್ದಾರೆ.
ಪಟ್ಟಣದ ಸೋನಾಬಾಯಿ ಏರಿಯಾದ ಬಸವೇಶ್ವರ ಶಾಲೆ ಹತ್ತಿರದ ಹೊಸ ಬಡಾವಣೆ ಹತ್ತಾರು ಮನೆಯ ಕುಟುಂಬಗಳು ವಿದ್ಯುತ್ ಸೌಕರ್ಯದಿಂದ ವಂಚಿತರಾಗಿದ್ದರು. ವಿದ್ಯುತ್ ಕಂಬ ಅಳವಡಿಸಿ ಬೆಳಕಿನ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯ ಜೆಸ್ಕಾಂ ಅಧಿಕಾರಿಗಳಿಗೆ ಬಡಾವಣೆಯ ನಿವಾಸಿಗಳು ವರ್ಷದ ಹಿಂದೆಯೇ ಮನವಿಪತ್ರ ಕೊಟ್ಟು ಬೇಸರಗೊಂಡಿದ್ದರು. ಇಂದು ನಾಳೆ ಎನ್ನುತ್ತಲೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು.
ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಇತರ ಅಗತ್ಯತೆಗಳಿಗಾಗಿ ವಿದ್ಯುತ್ ಕೊರತೆ ಎದುರಿಸಿದ ಇಲ್ಲಿನ ಜನರು, ಪ್ರತಿಯೊಬ್ಬರಿಂದ ದೇಣಿಗೆ ಸಂಗ್ರಹಿಸಿ ಸುಮಾರು 30.000 ರೂ. ವೆಚ್ಚದಲ್ಲಿ ಐದು ಕಬ್ಬಿಣದ ತಾತ್ಕಾಲಿಕ ಕಂಬಗಳನ್ನು ಖರೀದಿಸಿ ನೆಲದಡಿ ಹೂಳುವ ಮೂಲಕ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ.
ನಿಗದಿಪಡಿಸಿದ ಶುಲ್ಕ ಪಾವತಿಸುತ್ತೇವೆ ಎಂದರೂ ಅಧಿಕಾರಿಗಳು ನಮ್ಮ ಗೋಳು ಕೇಳಲಿಲ್ಲ. ಕತ್ತಲು ಮನೆಯಲ್ಲಿ ಜೀವನ ನಡೆಸುವುದು ಕಷ್ಟಕರವಾಯಿತು. ಎರಡು ವಿದ್ಯುತ್ ಕಂಬಗಳಿಗಾಗಿ ಬೇಡಿಕೆಯಿಟ್ಟು ಒಂದು ವರ್ಷದಿಂದ ಜೆಸ್ಕಾಂ ಕಚೇರಿಗೆ ಅಲೆದು ಅರ್ಜಿ ಕೊಟ್ಟರೂ ಕ್ಯಾರೆ ಎನ್ನಲಿಲ್ಲ. ಪರಿಣಾಮ ನಾವುಗಳೇ ಹಣ ಕ್ರೂಡೀಕರಿಸಿ ಕಂಬಗಳನ್ನು ಹಾಕಿಕೊಂಡಿದ್ದೇವೆ.
ಇದು ನಮಗೆ ಅಸುರಕ್ಷತೆ ಕಾಡುತ್ತಿದೆ. ಇಷ್ಟಾದರೂ ನಮ್ಮ ಸಮಸ್ಯೆ ಕೇಳಲು ಯಾರೂ ಬಂದಿಲ್ಲ ಎಂದು ಬಡಾವಣೆಯ ಬಾಬು ಗುತ್ತೇದಾರ, ವಿಷ್ಣು ಗೌಳಿ, ಲಕ್ಷ್ಮೀ ಗುತ್ತೇದಾರ, ಬಸವರಾಜ ಅಣಕಲ್, ಶರಣಯ್ಯ ಗುತ್ತೇದಾರ, ಸುರೇಶ ಪವಾರ, ಭೀಮಾ ಜಾಧವ ಜೆಸ್ಕಾಂಗೆ ಶಾಪ ಹಾಕುತ್ತಿದ್ದಾರೆ. ಆದಷ್ಟು ಬೇಗ ನಮಗೆ ಸಿಮೆಂಟ್ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
24ಜಿಯು-ವಾಡಿ2
ವಾಡಿ: ಜೆಸ್ಕಾಂ ಅಧಿಕಾರಿಗಳಿಗೆ ಅರ್ಜಿ ಕೊಟ್ಟು ಬೇಸತ್ತ ಸೋನಾಬಾಯಿ ಬಡಾವಣೆಯ ಜನರು ತಮ್ಮ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ಕಂಬಗಳನ್ನು ಅಳವಡಿಸಿ ಮನೆಗೆ ಬೆಳಕು ಪಡೆದಿದ್ದಾರೆ.