ಶರಣರ ಉಳವಿ ದಾರಿ: ಲಿಂಬಿ ಚಿಂಚೋಳಿಯಿಂದ ಜೇರಟಗಿವರೆಗೆ

0
35

ಶರಣರನ್ನು ವೈರಿಗಳಂತೆ ಕಂಡ ಅರಸನ ಸೈನಿಕರು ಅವರನ್ನು ಬೆನ್ನಟ್ಟಿದ್ದರು. ಆಗ ಶರಣರು ಸಹಜವಾಗಿ ಭಯಗೊಂಡು ಹಗಲು ರಾತ್ರಿ ಎನ್ನದೆ, ಅನ್ನ ಆಹಾರದ ಪರಿವೆಯೇ ಇಲ್ಲದೆ ಮುನ್ನಡೆದರು. ಶರಣರು ಸಾಗಿದ ಈ ದಾರಿ ಬಹಳ ಕಠಿಣವಾದುದಾಗಿದೆ. ಕಲ್ಯಾಣದ ಕ್ರಾಂತಿ ನಂತರ ಕೆಲವರು ಸೊಲ್ಲಾಪುರಕ್ಕೆ ಹೋದರು ಎಂದು ಹೇಳುವ ಹಿನ್ನೆಲೆ ಮತ್ತು ಸಿದ್ಧರಾಮೇಶ್ವರು ಹಾಗೂ ರೇವಣಸಿದ್ಧರ ಜೊತೆ ಇರುವ ಶರಣರು ಸೊಲ್ಲಾಪುರ ಮಾರ್ಗವಾಗಿಯೇ ನಡೆದು ಜೇರಟಗಿಗೆ ತಲುಪಿದರು. ಶರಣರು ನಡೆದು ಬಂದ ಈ ದಾರಿ ಹೇಗಿದೆ? ಎಂದು ಕಲಬುರಗಿಯಿಂದ ಅಫಜಲಪುರ ತಾಲ್ಲೂಕಿನ ಬಡದಾಳ ಗ್ರಾಮ ನೋಡಲು ಹೋದಾಗ, ದಾರಿಯುದ್ದಕ್ಕೂ ಸುಮರು ೧೫ ಊರುಗಳಲ್ಲಿ ಸಿದ್ಧರಾಮ, ರೇವಣಸಿದ್ಧರ ಜೊತೆಗೆ ಮಲ್ಲಿಕಾರ್ಜುನ ದೇವಾಲಯಗಳಿರುವುದು ನಮಗೆ ಕಂಡು ಬಂದವು. ಶರಣರ ಬಗ್ಗೆ ಅಪಾರ ಭಕ್ತಿ ಇಟ್ಟುಕೊಂಡಿರುವ ಮಹಾರಾಷ್ಟ್ರದ ಜನರು, ಆ ದೇವಾಲಯಗಳನ್ನು ಬಹಳಷ್ಟು ಸುರಕ್ಷಿತವಾಗಿಟ್ಟುಕೊಂಡಿದ್ದಾರೆ. ಹಳೆಯ ದೇವಾಲಯಗಳ ಜೀರ್ಣೋದ್ಧಾರ ಕೂಡ ಮಾಡಿರುವುದನ್ನು ನಾವು ಕಾಣಬಹುದು.

ಲಿಂಬಿ ಚಿಂಚೋಳಿ: ಸೊಲ್ಲಾಪುರದಿಂದ ಬರುವಾಗ ಲಿಂಬಿ ಚಿಂಚೋಳಿಯಲ್ಲಿ ಸಿದ್ಧರಾಮೇಶ್ವರ, ರೇವಣಸಿದ್ಧೇಶ್ವರರ ನೆಲೆಗಳು ಕಾಣಬಹುದು. ಭಕ್ತರು ಅಲ್ಲಿ ಮಲ್ಲಿಕಾರ್ಜುನ ದೇವಾಲಯ ನಿರ್ಮಿಸಿಕೊಂಡಿರುವುದನ್ನು ಕೂಡ ಕಾಣುತ್ತೇವೆ. ಊರ ಹೊರಗಡೆ ಭವ್ಯವದ ರೇವಣಸಿದ್ಧೇಶ್ವರರ ದೇವಾಲಯ ನಿರ್ಮಿಸಿಕೊಂಡಿದ್ದಾರೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಸಿದ್ಧರಾಮೇಶ್ವರ ದೇವಾಲಯವಿದ್ದು. ಹಾದಿ ಮಧ್ಯೆ ಮಲ್ಲಿಕಾರ್ಜುನ ದೇವಾಲಯ ಕೂಡ ಇದೆ. ಅದ್ಧೂರಿಯಿಂದ ಜಾತ್ರೆ, ಉತ್ಸವ, ಮೆರವಣಿಗೆಗಳನ್ನು ನಡೆಸುತ್ತಾರೆ.

Contact Your\'s Advertisement; 9902492681

ವಳಸಂಗ-ವಡಗಾಂವ: ಲಿಂಬಿ ಚಿಂಚೋಳಿಯಿಂದ ೪ ಕಿ.ಮೀ. ದೂರದಲ್ಲಿ ವಳಸಂಗ ಗ್ರಾಮವಿದ್ದು, ಅಲ್ಲಿನ ಭೋವಿ ವಡ್ಡರ ಓಣಿಯಲ್ಲಿ ಸಿದ್ಧರಾಮೇಶ್ವರ ದೇವಾಲಯವಿದೆ. ದೇವಾಲಾಯದ ಒಳಗೆ ಮಲ್ಲಿಕಾರ್ಜುನ, ವೀರಭದ್ರೇಶ್ವರ, ರೇವಣಸಿದ್ದೇಶ್ವರ, ಶನೇಶ್ವರ ಸೇರಿದಂತೆ ಐದು ದೇವಕೋಷ್ಠಗಳಿವೆ (ಗರ್ಭಗುಡುಗಳಿವೆ). ಅಲ್ಲಿಂದ ಉತ್ತರಕ್ಕೆ ೮ ಕಿ. ಮೀ. ಸಾಗಿದರೆ ಎಂಬ ಪುರಾತನವಾದ ಊರು. ಆ ಊರಲ್ಲಿ ಪ್ರಭುದೇವರ ಗುಡಿ ಇದೆ. ಈ ಮೊದಲು ಗುಡ್ಡದ ಮೇಲೆ ಈ ಗುಡಿ ಇತ್ತು. ಇದನ್ನು ಬಿಚ್ಚಿ ಹಾಕಿ ದಿಬ್ಬ ತೆಗದು ಈಗ ಅಧ್ಭುತವಾದ ಗುಡಿ ನಿರ್ಮಾಣ ಮಾಡಿದ್ದಾರೆ. ಇದರ ಎದುರಿಗೆ ಮಹಾದೇವ ದೇವಾಲಯ ಕಾಣಬಹುದು. ಊರ ಹೊರಗೆ ಸಿದ್ಧರಾಮೇಶ್ವರರ ಗುಡಿ ಇದೆ. ಈ ಭಾಗದಲ್ಲಿ ಬೇರೆ ಎಲ್ಲೆಡೆಯೂ ಕಾಣದ ಅಲ್ಲಮಪ್ರಭುಗಳ ಗುಡಿ ಇಲ್ಲಿರುವುದು ಬಹಳ ವಿಶೇಷ ಕುತೂಹಲಕ್ಕೆ ಕಾರಣವಾಗಿದೆ.

ಬುರಾಣಪುರ: ಅಕ್ಕಲೋಟ ತಾಲ್ಲೂಕಿನ ಉತ್ತರಕ್ಕೆ ೧೫ ಕಿ.ಮೀ. ದೂರದಲ್ಲಿ ಬುರಾಣಪುರ ಗ್ರಾಮವಿದ್ದು, ಅಲ್ಲಿ ಸಿದ್ಧಯ್ಯಪ್ಪನ ದೇವಾಲಯ/ಗುಮ್ಮಜ್ ಇದೆ. ಈ ಪ್ರಸಿದ್ಧ-ಪುರಾತನ ದೇವಾಲಯಕ್ಕೆ ಕರ್ನಾಟಕದ ಭಕ್ತರು ನಡೆದುಕೊಳ್ಳುವುದು ಜಾಸ್ತಿ. ಇದು ಸಿದ್ಧರಾಮೇಶ್ವರರ ನೆಲೆಯಾಗಿರಬಹುದು. ದರ್ಗಾದ ಒಳಗೆ ಗವಿ, ದಂಡಕೋಲು, ಜಾಗಟೆ, ಕಳಸ, ಆಕಳ ಚೌರಿ, ಗಂಧ ತೇಯುವ ಕಲ್ಲು, ಇದರ ಅಡಿಯಲ್ಲಿ ೧೭೦೦ ಎಕರೆ ಜಮೀನು ಇದೆ ಎಂದು ನಾಗಲಿಂಗಯ್ಯನವರು ಹೇಳುತ್ತಾರೆ. ಇದರ ವಾರಸುದಾರಿಕೆಯ ಬಗ್ಗೆ ಇವರ ಮನೆತನದ ಶಿವಯ್ಯ ಸ್ವಾಮಿ ಜಿಲ್ಲಾ ಕೋರ್ಟ್‌ನಲ್ಲಿ ದಾವೆ ಹೂಡಿ ಗೆದ್ದಿದ್ದರು. ಅಂದಿನಿಂದ ಈ ದರ್ಗಾದ ಬಾಗಿಲು ಮುಚ್ಚಲಾಗಿದೆ. ಇದಕ್ಕೆ ಸಂಬಂಧಿಸಿದ ವ್ಯಾಜದೀಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.

ದಕ್ಷಿಣದ ಬಾಗಿಲಿನಿಂದ ಮುಸ್ಲಿಂರು, ಪೂರ್ವದ ಬಾಗಿಲಿನಿಂದ ಮುಸ್ಲಿಂಮೇತರರಿಗೆ ಪೂಜೆಗೆ ಅವಕಾಶವಿರುವುದನ್ನು ಗಮನಿಸಬಹುದು. ದರ್ಗಾದ ಕಾಂಪೌಂಡ್ ೧೦ ಎಕರೆ ವಿಶಾಲವಾಗಿದೆ. ಹಳೆಯ ಶಿವಲಿಂಗಗಳನ್ನು ಇಲ್ಲಿಡಲಾಗಿದೆ. ದಿರ್ಘದಂಡ ನಮಸ್ಕಾರ, ಪೂಜೆ ಇತ್ಯಾದಿ ಕಾರ್ಯಕ್ರಮಗಳು ಈಗಲೂ ನಡೆಯುತ್ತಿದ್ದು, ಇಲ್ಲಿಗೆ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕೂಡ ಈಗ ಅಲ್ಲಿ ಮಾಡಿದ್ದಾರೆ. ಶಿವರಾತ್ರಿ, ವೈಶಾಖ ಹುಣ್ಣಿಮೆಯಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಮಿರಜಗಿ, ಗಳೂರಗಿ, ಬಾಸಲೆಗಾಂವ: ಬೋರಿ ನದಿ ದಂಡೆಯ ಮೇಲೆ ಈ ಊರು ಇದೆ. ಇಲ್ಲಿ ಸುಮಾರು ೩೦೦ ಮನೆಗಳಿದ್ದು, ಅದರಲ್ಲಿ ೨೦೦ ಮನೆಗಳು ಕುರುಬ ಸಮುದಾಯಕ್ಕೆ ಸೇರಿದವುಗಳಾಗಿವೆ. ಲಿಂಗಾಯತರ ಒಂದು ಮನೆಯೂ ಇಲ್ಲಿ ಇಲ್ಲ. ಇಲ್ಲೊಂದು ಸಿದ್ಧರಾಮೇಶ್ವರ ದೇವಸ್ಥಾನವಿದೆ. ಎದುರಿಗೆ ದೀಪಸ್ಥಂಭಗಳಿವೆ. ಗಳೂರ್ಗಿ, ಬಾಸ್ಲೆಗಾಂವದಿಂದ ಈ ದೇವಸ್ಥಾನಕ್ಕೆ ಪಲ್ಲಕ್ಕಿ ಬರುತ್ತದೆ. ಸಿದ್ಧರಾಮ ಹಾಗೂ ರೇವಣಸಿದ್ಧರು ಜನೋಪಯೋಗಿ ಕೆಲಸ ಹೆಚ್ಚು ಮಾಡಿರುವುದರಿಂದ ಎಲ್ಲ ಸಮುದಾಯದವರು ಪೂಜೆಸುವುದನ್ನು ಕಾಣುತ್ತೇವೆ.

ಮೈಂದರ್ಗಿ: ಮೈಂದರ್ಗಿ ಕವಿ ಕಲಾವಿದರ ಊರಾಗಿದ್ದು, ಇಲ್ಲಿ ಸಿದ್ಧರಾಮೇಶ್ವರರ ಸಣ್ಣ ದೇವಾಲಯವಿದೆ. ದುಧನಿಯಲ್ಲಿ ಸಿದ್ಧರಾಮೇಶ್ವರ ದೊಡ್ಡ ದೇವಾಲಯ ಇದೆ. ದುಧನಿ ಸಿದ್ಧರಾಮೇಶ್ವರರ ಜಾತ್ರೆ ಸೊಲ್ಲಾಪುರದ ಸಿದ್ಧರಾಮೇಶ್ವರ ಜಾತ್ರೆಗಿಂತ ವಿಶೇಷ ಕಾರ್ಯಕ್ರಮ ಮಾಡುತ್ತಾರಂತೆ!

ಬಡದಾಳ: ಅಫಜಲಪುರ ತಾಲ್ಲೂಕಿನ ಬಡದಾಳದಲ್ಲಿ ಸಿದ್ಧರಾಮೇಶ್ವರರ ಬಾವಿ ಇರುವ ಹೊಲವಿದ್ದು. ಅಲ್ಲಿಯೇ ಗಿಡದ ಕೆಳಗೆ ಹಳೆಯ ನಂದಿ, ಶಿವಲಿಂಗ ವಿಗ್ರಹಗಳಿರುವುದನ್ನು ಕಾಣಬಹುದು. ಈ ಬಾವಿಯನ್ನು ಸಿದ್ಧರಾಮೇಶ್ವರರು ಕಟ್ಟಿಸಿದ್ದು, ಎಂಥ ಬೇಸಿಗೆ ಬಂದರೂ ಈ ಬಾವಿಯ ನೀರು ಒಣಗುವುದಿಲ್ಲವಂತೆ! ಈ ಬಾವಿಯಲ್ಲಿ ಸಿದ್ರಾಮೇಶ್ವರರ ವಿಗ್ರಹವಿದೆ ಎಂದು ಕೂಡ ಹೇಳಲಾಗುತ್ತಿದೆ.

ಅಫಜಲಪುರ-ತೋಳನೂರ: ಪಟ್ಟಣದಲ್ಲಿ ಸಿದ್ಧರಾಮೇಶ್ವರ ಗುಡಿಯಿದ್ದು, ಪ್ರತಿ ವರ್ಷ ಇಲ್ಲಿ ವೈಭವದಿಂದ ಜಾತ್ರೆ ನಡೆಯುತ್ತದೆ. ಮಲ್ಲಿಕಾರ್ಜುನ ದೇವಾಲಯ ಇದೆ. ತೋಳನೂರದಲ್ಲಿರುವ ರೇವಣಸಿದ್ಧೇಶ್ವರ ದೇವಾಲಯಕ್ಕೂ ಕುರುಬ ಸಮುದಾಯಕ್ಕೆ ಸೇರಿದ ಭಕ್ತರು ಹೆಚ್ಚಿರುವುದನ್ನು ಗಮನಿಸಬಹುದು.

ರೇವೂರ, ವೈಜಾಪುರ: ದುಧನಿಯಿಂದ ಕರ್ನಾಟಕ ಸೇರುವ ದಾರಿಯಲ್ಲಿ ಬರುವ ಅಫಜಲಪುರ ತಾಲ್ಲೂಕಿನ ರೇವೂರ ಗ್ರಾಮದಲ್ಲಿ ಬಾಲಬೊಮ್ಮಯ್ಯನ ಮಠವಿದೆ. ಸುತ್ತಲಿನ ಜೇವೂರ, ಹಂಜಗಿ ಹಾಗೂ ನಾಗಣಸೂರಗಳಲ್ಲಿ ಇದೇ ಶರಣನ ಸ್ಮಾರಕ ಸಿಗುತ್ತವೆ. ಸಿದ್ಧರಾಮ ಮಲ್ಲಿಕಾರ್ಜುನನ್ನು ಹುಡುಕುತ್ತ ಶ್ರೀಶೈಲಕ್ಕೆ ತೆರಳಿದಾಗ ಅವರನ್ನು ಮತ್ತೆ ಸೊಲ್ಲಾಪುರಕ್ಕೆ ಕರೆ ತಂದ ವ್ಯಕ್ತಿ ಇದೇ ಶರಣ ಬಾಲಬೊಮ್ಮಯ್ಯನಿರಬೇಕು ಎಂದು ಹೇಳಬಹುದಾಗಿದೆ.

ಸಿದ್ಧರಾಮೇಶ್ವರ, ರೇವಣಸಿದ್ಧೇಶ್ವರ, ಮಲ್ಲಿಕಾರ್ಜುನ ದೇವಸ್ಥಾನಗಳ ಜೊತೆಗೆ ರಾಮನಾಥ, ಕಾಳಭೈರವ ಮುಂತಾದ ಶೈವ ಸಂಪ್ರದಾಯಕ್ಕೆ ಸೇರಿದ ಗುಡಿಗಳನ್ನು ನಾವು ಇಲ್ಲಿ ಕಾಣಬಹುದು. ಇಲ್ಲಿಗೆ ಸಮೀಪದ ಆಳಂದ ತಾಲ್ಲೂಕಿನ ವೈಜಾಪುರದಲ್ಲಿಯೂ ರೇವಣಸಿದ್ಧನ ದೇವಾಲಯಗಳನ್ನು ಕಾಣಬಹುದಾಗಿರುವುದರಿಂದ ಸಿದ್ಧರಾಮೇಶ್ವರ, ರೇವಣಸಿದ್ಧೇಶ್ವರ ಹಾಗೂ ಶರಣರ ಗುಂಪು ಇಲ್ಲಿಂದ ೧೦-೨೦ ಕಿ. ಮೀ. ದೂರದ ಜೇರಟಗಿಯಲ್ಲಿ ಬಿಡಾರ ಹೂಡಿದ್ದ ಶರಣರನ್ನು ಸೇರಿರಬಹುದು ಎಂದು ಗುರುತಿಸಬಹುದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here