ಅನುಬವ ಮಂಟಪದಲ್ಲಿ “ವಚನ ಮಾಧುರ್ಯ” ಸಂಗೀತ ಕಾರ್ಯಕ್ರಮ

0
58

ಕಲಬುರಗಿ: ವಚನಗಳು ಶರಣರ ಅನುಭಾವ ಮೂಸೆಯಲ್ಲಿ ಅರಳಿದ ಬಾಡದ ಪುಷ್ಪಗಳು. ಸಮಾಜದಲ್ಲಿ ಎಗ್ಗಿಲ್ಲದೆ ಬೆಳೆದ ಮೌಢ್ಯಗಳನ್ನು ಕಂದಾಚಾರಗಳನ್ನು ವಚನಗಳ ಮೂಲಕ ತಿತ್ತಿಸೆಯಲು ಹೋರಾಡಿದ ಧೀರರು. ಜಾತಿ ಭೇದ, ವರ್ಗ ವೈಷಮ್ಯಗಳನ್ನು ನೇರ ಮಾತುಗಳಲ್ಲಿ ಖಂಡಿಸಿದ ಸಮಾಜ ಸುಧಾರಕರು. ದೇವರ ಬಗೆಗೆ ಜನರಲ್ಲಿ ಅಡಗಿದ್ದ ಅಜ್ಞಾನವನ್ನು ತೊಡೆದು ಹಾಕಿ. ಸಾಮಾನ್ಯರೂ ತಮ್ಮ ಅರಿವನ್ನು ಜಾಗ್ರತ ಮಾಡಿಕೊಂಡು ದೈವಿ ಸಾಕ್ಷಾತ್ಕಾರ ಪಡೆಯಲು ಇಷ್ಟಲಿಂಗವನ್ನು ಕರುಣಿಸಿದವರು ಬಸವಣ್ಣನವರು.

ಬಸವ ಸಮಿತಿಯ ಅನುಭವ ಮಂಟಪದಲ್ಲಿ  ಲಿಂ. ಗಂಗಮ್ಮ ವೀರಪ್ಪ ಹತ್ತಿ ಸ್ಮರಣಾರ್ಥ ಆನ್‍ಲೈನ್ ಅರಿವಿನ ಮನೆ 639 ನೆಯ ದತ್ತಿ ಕಾರ್ಯಕ್ರಮ “ವಚನ ಮಾಧುರ್ಯ” ಎಂಬ ಸಂಗೀತ ಕಾರ್ಯಕ್ರಮದ ರೂಪದಲ್ಲಿ ಆಯೋಜಿಸಲಾಗಿತ್ತು. ಖ್ಯಾತ ಆಕಾಶವಾಣಿ ಕಲಾವಿದರಾದ ಶ್ರೀ ಎಂ.ವೈ. ಸುರಪುರವರು ವಿವಿಧ ಶರಣರ ವಚನಗಳನ್ನು ಗಾಯನ ಮಾಡುವುದರ ಮೂಲಕ ಸರ್ವರನ್ನು ಸಂಗೀತ ಲೋಕದಲ್ಲಿ ತೇಲಿಸಿದರು.

Contact Your\'s Advertisement; 9902492681

ಪ್ರಾರಂಭದಲ್ಲಿ ಚಾರಮರಸನ ಪ್ರಭುಲಿಂಗ ಲೀಲೆಯ ಮಂಗಲಾಚರಣ ಪದ್ಯಗಳನ್ನು ಪ್ರಾರ್ಥನಾ ರೂಪದಲ್ಲಿ ಹಾಡಿ ಕಾರ್ಯಕ್ರಮಕ್ಕೆ ಶೋಭೆ ತಂದರು ನಂತರ ಪಟದೀಪ ರಾಗದಲ್ಲಿ ‘ಕಲ್ಯಾಣವೆಂಬ ಪ್ರಣತೆಯಲ್ಲಿ’ ಎಂಬ ಅಲ್ಲಮ ಪ್ರಭುಗಳ ವಚನ ಸರ್ವರೂ ತಲೆದೂಗುವಂತಿತ್ತು. ಮದುಮಾನ ಸಾರಂಗದಲ್ಲಿ ಹಾಡಿದ ‘ಅಂಬಿಗರ ಚೌಡಯ್ಯನವರ ‘ಅಸುರರ ಮಾಲೆಗಳಿಲ್ಲ’ ಎಂಬ ವಚನ, ಬಸವಣ್ಣನವರ ‘ಎನ್ನವಾ ಕ್ಷೇಮ ನಿಮ್ಮದಯ್ಯ’ ದರ್ಬಾರಿ ರಾಗದಲ್ಲಿ ಸರ್ವರನ್ನೂ ರಂಜಿಸಿತು. ‘ಬಸವ ಎನಗೊಲಿಯೊ’ ಎಂಬ ರಂಗ ಗೀತೆ ಅನೇಕರ ಮೆಚ್ಚುಗೆಗೆ ಪಾತ್ರವಾಯಿತು.

ಮಾಲಕಂಸ ರಾಗದಲ್ಲಿ ಹಾಡಿದ ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ಬಸವಣ್ಣನವರ ವಚನ ಅನೇಕ ಶರಣಾಭೀಮಾನಿಗಳ ಮೆಚ್ಚುಗೆಯನ್ನು ಗಳಿಸಿತು. ಲಲತ ರಾಗದಲ್ಲಿ ‘ಸುಪ್ರಭಾತ ಸಮಯದಲ್ಲಿ’ ಎಂಬ ವಚನ. ಜಂಬು ದ್ವೀಪ ನವಖಂಡ ಪೃಥ್ವಿಯಲ್ಲಿ’ ಪಟದೀಪ ರಾಗದಲ್ಲಿ ಹಾಡಿದರು. ವಚನ ಭೂಪರಾಗದಲ್ಲಿ ಹಾಡಿದ್ದು ಅನೇಕರು ಮೆಚ್ಚಿ ಸಂದೇಶ ಕಳುಹಿಸಿದರು.

ಹೀಗೆ ರವಿವಾರದ “ವಚನ ಮಾಧುರ್ಯ” ಕಾರ್ಯಕ್ರಮ ವಿನೂತನ ರೀತಿಯಲ್ಲಿ ಸರ್ವರ ಮನಸೆಳೆಯಿತು. ಹಾರ್ಮೋನಿಯಂ ನುಡಿಸಲು ಶ್ರೀ ಗುರುಶಾಂತಯ್ಯ ಸ್ಥಾವರಮಠ ಮತ್ತು ತಬಲಾ ವಾದನದಲ್ಲಿ ಶ್ರೀ ಮಹಾಂತೇಶ ಹರವಾಳ ಇದ್ದರು.

ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ, ದತ್ತಿ ದಾಸೋಹಿಗಳಾದ ಶ್ರೀ ಎಸ್.ವಿ. ಹತ್ತಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹೆಚ್. ಕೆ. ಉದ್ದಂಡಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here