ಕಲಬುರಗಿ: ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶುವೈದ್ಯಕೀಯ ಸಂಘ ಕಲಬುರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರೇಬಿಸ್ (ಹುಚ್ಚು ನಾಯಿ) ರೋಗದ ವಿರುದ್ಧ ಪ್ರಾಣಿಗಳಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಬುಧವಾರ ಕಲಬುರಗಿ ನಗರದ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ವ್ಹಿ. ಹೆಚ್. ಹನುಮಂತಪ್ಪ ಮಾತನಾಡಿ, ಸಾರ್ವಜನಿಕರು ರೇಬಿಸ್ (ಹುಚ್ಚು ನಾಯಿ) ರೋಗದ ಕುರಿತು ತಮ್ಮ ಸಾಕು ಪ್ರಾಣಿಗಳಿಗೆ ತಪ್ಪದೆ ಲಸಿಕೆ ಹಾಕಿಸಿ, ಮುಂಜಾಗ್ರತೆ ವಹಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸೋಮು ರಾಠೋಡ ಮಾತನಾಡಿ, 2019-20 ರಲ್ಲಿ ಜಿಲ್ಲೆಯಲ್ಲಿ 15,324 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಈ ಅವಧಿಯಲ್ಲಿ ರೇಬಿಸ್ದಿಂದ ಯಾವುದೇ ಸಾವು ಸಂಭವಿಸಿರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಕಲಬುರಗಿಯ ಕರ್ನಾಟಕ ಪಶುವೈದ್ಯಕೀಯ ಸಂಘ ಅಧ್ಯಕ್ಷ ಡಾ. ಸಂಜಯರೆಡ್ಡಿ ಹಾಗೂ ಪದಾಧಿಕಾರಿ ಡಾ. ಶೇಷರಾವ ಹಾಗೂ ಪಶು ವೈದ್ಯಾಧಿಕಾರಿಗಳಾದ ಡಾ. ಸಂಧ್ಯಾ ಕುಲಕರ್ಣಿ, ಡಾ. ಯಲ್ಲಪ್ಪ.ಎಸ್.ಇಂಗಳೆ ಹಾಗೂ ಡಾ. ವಿಜಯಕುಮಾರ ತೆಲಗಾರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.