ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳು ಡಿಜಿಟಲೀಕರಣವಾಗಲಿ: ಪ್ರೊ. ಎಚ್. ಎಂ. ಮಹೇಶ್ವರಯ್ಯ

0
65

ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇಂದು ೬೫ನೇ ಕರ್ನಾಟಕ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಗಾಗಿದ್ದ, ಪ್ರೊ. ಹೆಚ್. ಎಂ. ಮಹೇಶ್ವರಯ್ಯನವರು ಪತ್ರಿಕೋದ್ಯಮ ಹಾಗೂ ಸಮೂಹ-ಸಂವಹನ ವಿಭಾಗವು ಸಿದ್ಧಪಡಿಸಿದ ವಿಶ್ವವಿದ್ಯಾಲಯದ ವಾರ್ತಾ ಸಂಚಿಕೆಯಾದ ಸಿಯುಕೆ ಬುಲೆಟಿನ್ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವು ಮುಂದಿನ ದಿನಗಳಲ್ಲಿ ನಿರ್ವಹಿಸಬೇಕಾದ ಕನ್ನಡದ ಚಟುವಟಿಕೆಗಳನ್ನು ಕುರಿತು ಮಾತನಾಡುತ್ತ, ಕನ್ನಡದ ಶಾಸ್ತ್ರೀಯ ಪಠ್ಯಗಳ ಡಿಜಿಟಲೀಕರಣ,  ಮಹತ್ವದ ಪಠ್ಯಗಳ ಅನುವಾದ ಕಾರ್ಯ, ಕನ್ನಡದ ಮಹತ್ವದ ಅಂಶಗಳನ್ನು ವಿಕಿಪೀಡಿಯಾಕ್ಕೆ ತರುವ ಪ್ರಯತ್ನ ಮಾಡಬೇಕಾಗಿದೆ ಎಂದರು.

Contact Your\'s Advertisement; 9902492681

ಪ್ರಾಸ್ತಾವಿಕವಾಗಿ ಮಾತನಾಡಿದ ಕುಲಸಚಿವರಾದ ಪ್ರೊ. ಮುಷ್ತಾಕ್ ಅಹ್ಮದ್ ಐ. ಪಟೇಲ್ ಅವರು ಜಾಗತಿಕ ಸಂಸ್ಕೃತಿ, ಪರಂಪರೆಗೆ ಕನ್ನಡ ಸಾಹಿತ್ಯ ಮಹತ್ವದ ಕೊಡುಗೆಯನ್ನು ನೀಡಿದೆ. ಪಂಪ, ರನ್ನ, ಶ್ರೀವಿಜಯರಂತಹ ಕವಿಗಳ ಶ್ರೇಷ್ಠ ಪರಂಪರೆಯಿರುವ ಕನ್ನಡ ಸಾಹಿತ್ಯವನ್ನು ವಿಶ್ವ ಸ್ತರದಲ್ಲಿ ಬೆಳೆಸಬೇಕಾದ ಕರ್ತವ್ಯ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರಧಾನ ಭಾಷಣಕಾರರಾಗಿ ಮಾತನಾಡಿದ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಬಾಬುರಾವ ಪೂಜಾರಿ ಅವರು ಕರ್ನಾಟಕ ರಾಜ್ಯೋತ್ಸವವು ನಾಡಿಗಾಗಿ, ನುಡಿಗಾಗಿ ಸಂಸ್ಕೃತಿ ಪರಂಪರೆಗಾಗಿ ನಾವೆಲ್ಲರೂ ಅಭಿಮಾನ ಪಡುವ ದಿನವಾಗಿದೆ. ಕುವೆಂಪು, ಮಹಾಲಿಂಗರಂಗ, ಜಿ.ಪಿ ರಾಜರತ್ನಂ ಮೊದಲಾದ ಕವಿಗಳು ತಮ್ಮ ಸಾಹಿತ್ಯದ ಮೂಲಕ ಕನ್ನಡಾಭಿಮಾನವನ್ನುಜಾಗೃತಗೊಳಿಸುವ ಕಾರ್ಯವನ್ನು ಮಾಡಿದರು.

ಕನ್ನಡ ಮತ್ತು ಮರಾಠಿ ಭಾಷೆಗಳ ಸಾಹಿತ್ಯದ ಅನುವಾದ ಕಾರ್ಯಗಳಿಂದ ಭಾಷಿಕ ಅನುಸಂಧಾನ ಸಾಧ್ಯವಾಯಿತು. ನಾಟಕ, ಕಾದಂಬರಿ ಮೊದಲಾದ ಸಾಹಿತ್ಯ ಪ್ರಕಾರಗಳ ಅನುವಾದ, ಅನುಸಂಧಾನದ ಮೂಲಕ ಕನ್ನಡ ಹಾಗೂ ಇತರೆ ಭಾಷಿಕರ ನಡುವೆ ಸೌಹಾರ್ದತೆ ಸಾಧ್ಯವಾಗುತ್ತದೆ.ಶಾಸ್ತ್ರೀಯ ಸ್ಥಾನಮಾನ ಕನ್ನಡದ ಹಿರಿಮೆಗೆ ದೊರೆತ ಬಹುದೊಡ್ಡ ಗೌರವವಾಗಿದೆ. ಪ್ರಾಚೀನ ಕನ್ನಡ ಸಾಹಿತ್ಯ, ವಚನ ಸಾಹಿತ್ಯ, ದಾಸಸಾಹಿತ್ಯ ಹಾಗೂ ತತ್ವಪದ ಸಾಹಿತ್ಯಗಳು ಜನಸಾಮಾನ್ಯರ ಸಂಕಟಗಳಿಗೆ ಸ್ಪಂದಿಸಿವೆ. ಈ ನೆಲೆಯಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳ ಅಧ್ಯಯನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಪ್ರಧಾನ ಭಾಷಣಕಾರರು, ಮಾನವಿಕ ಮತ್ತು ಭಾಷಾ ನಿಕಾಯದ ಡೀನರಾದ ಪ್ರೊ. ಬಸವರಾಜ ಪಿ. ಡೋಣೂರ ಅವರು ಮಾತನಾಡುತ್ತ ಭಾಷಾವಾರು ಪ್ರಾಂತ್ಯಗಳ ರಚನೆಯ ಹಿಂದೆ ಸುಮಾರು ೧೫೦ ವರ್ಷಗಳ ಹೋರಾಟದ ಹಿನ್ನೆಲೆಯಿದೆ. ರಾಜ್ಯೋತ್ಸವ ದಿನ ನಮಗೆಲ್ಲರಿಗೂ ಭಾವನಾತ್ಮಕ ಸಂಗತಿ ಮಾತ್ರವಾಗಿರದೆ, ಅದು ಬೌದ್ಧಿಕ, ಸಾಂಸ್ಕೃತಿಕ, ವೈಚಾರಿಕ ಹಾಗೂ ಆಧ್ಯಾತ್ಮಿಕ ಸಂಬಂಧವನ್ನು ಕೂಡ ನಮ್ಮೊಂದಿಗೆ ಹೊಂದಿದೆ. ಪ್ರಾದೇಶಿಕ ಅಭಿಮಾನದಷ್ಟೇ ನಾವು ದೇಶಾಭಿಮಾವನ್ನು ಹೊಂದಿರಬೇಕಾದುದು ಅಗತ್ಯವಾಗಿದೆ. ಕರ್ನಾಟಕ ಏಕೀಕರಣದ ಭಾವ ಮೂಡಲು ಕಾರಣವಾದ ಅಂಶಗಳ ಕುರಿತು ಚರ್ಚಿಸಿದ ಅವರು ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ನಂತರ ಕನ್ನಡದ ಹಲವು ಪ್ರಾಂತ್ಯಗಳು ಹರಿದು ಹಂಚಿ ಹೋಗಿ ೨೦ ಸಂಸ್ಥಾನಗಳ ಆಳ್ವಿಕೆಗೆ ಒಳಪಟ್ಟವು. ಇದರಿಂದ ಕನ್ನಡಿಗರ ಭಾಷಿಕ, ಸಾಂಸ್ಕೃತಿಕ, ರಾಜಕೀಯ ಅನನ್ಯತೆಗೆ ಧಕ್ಕೆಯುಂಟಾಯಿತು. ಇದು ಕನ್ನಡಿಗರಲ್ಲಿ ಏಕೀಕರಣದ ಭಾವ ಮೂಡುವಂತೆ ಮಾಡಿತು. ವಿವಿಧ ಆಯಾಮದ ಚಳುವಳಿಗಳು ಹಾಗೂ ಸಮಿತಿಗಳ ವರದಿಗಳ ಮೂಲಕ ಭಾಷಾವಾರು ಪ್ರಾಂತ್ಯಗಳು ಅಸ್ತಿತ್ವಕ್ಕೆ ಬಂದವು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಕ್ರಮ ವಿಸಾಜಿಅವರು ಬದುಕಿನ ಬಗ್ಗೆ, ನಾಡಿನ ಬಗ್ಗೆ ನಂಬಿಕೆಯನ್ನು ಹುಟ್ಟಿಸುವಲ್ಲಿ ರಾಜ್ಯೋತ್ಸವದಂತಹ ಆಚರಣೆಗಳು ಮಹತ್ವದ ಪಾತ್ರವಹಿಸುತ್ತವೆ.ಭಾಷಾಭಿಮಾನದ ಜೊತೆಗೆ ಬೌದ್ಧಿಕ ಶ್ರಮವು ಅಷ್ಟೇ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.ಡಾ.ಅಪ್ಪಗೆರೆ ಸೋಮಶೇಖರ್ ಅವರು ಕಾರ್ಯಕ್ರಮದ ಸಂಯೋಜಕರಾಗಿದ್ದರು. ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯದೇವಿ ಜಂಗಮಶೆಟ್ಟಿ ಹಾಗೂ ಡಾ. ರವಿಕಿರಣ ನಾಕೋಡ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ವಿಜಯಕುಮಾರ ಎಚ್. ಅವರು ನಿರೂಪಿಸಿದರು.

ಡಾ.ಟಿ.ಡಿ.ರಾಜಣ್ಣ ತಗ್ಗಿ ಅವರು ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು, ಸಂಶೋಧಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here