ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದಿದ್ದು, ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಗೆಲುವು ಸಾಧಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ
ಬೆಳಿಗ್ಗೆ 8 ರಿಂದಲೆ ಮತ ಎಣಿಕೆ ಆರಂಭವಾಗಿ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಸಂಜೆ ಸುಮಾರು 6 ಗಂಟೆಗೆ ಮುಗಿಯಿತು.
ಒಟ್ಟು ಚಲಾವಣೆಯ 21437 ಮತಗಳ ಪ್ರಥಮ ಪ್ರಾಶಸ್ತ್ಯದ ಮತ ಎಣಿಕೆ ಸಂಪೂರ್ಣ ಮುಗಿದ ನಂತರ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ-3812, ಕಾಂಗ್ರೇಸ್ ಅಭ್ಯರ್ಥಿ
ಶರಣಪ್ಪ ಮಟ್ಟೂರು-6213, ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಶಶೀಲ ಜಿ. ನಮೋಶಿ -9418, ವಾಟಾಳ್ ಪಕ್ಷದ ಅಭ್ಯರ್ಥಿ
ವಾಟಾಳ ನಾಗರಾಜ -59 ಹಾಗೂ ಸ್ವತಂತ್ರ ಅಭ್ಯರ್ಥಿ
ಡಾ.ಚಂದ್ರಕಾಂತ ಸಿಂಗೆ ಅವರು-91 ಮತಗಳನ್ನು ಪಡೆದರು.
ಚಲಾವಣೆಯಾದ ಒಟ್ಟು 21437 ಮತದಲ್ಲಿ 19593 ಮತಗಳು ಸಿಂಧುವಾಗಿ 1844 ಮತಗಳು ತಿರಸ್ಕ್ರತಗೊಂಡವು. ಸಿಂಧು ಮತ 19593 ಗೆ ಎರಡರಿಂದ ಭಾಗ ಮಾಡಿದಾಗ ಬರುವ ಸಂಖ್ಯೆಗೆ ಒಂದು ಹೆಚ್ಚಿನ ಸಂಖ್ಯೆ ಸೇರಿಸಿದಾಗ ಬರುವ ಸಂಖ್ಯೆಯನ್ನು 9797 ಗೆಲುವಿನ ಸಂಖ್ಯೆ ಎಂದು ಗುರುತಿಸಿ ಚುನಾವಣಾಧಿಕಾರಿಗಳು ವಿನ್ನಿಂಗ್ ಕೋಟಾ ಘೋಷಿಸಿದರು.
ಪ್ರಥಮ ಪ್ರಾಶಸ್ತ್ಯದ (ವಿನ್ನಿಂಗ್ ಕೋಟಾ) ಸಂಖ್ಯೆಗೆ ಯಾವೊಬ್ಬ ಅಭ್ಯರ್ಥಿ ತಲುಪದ ಕಾರಣ ಚುನಾವಣಾಧಿಕಾರಿಗಳು ಎರಡನೇ ಪ್ರಾಶಸ್ತ್ಯ ಮತ ಎಣಿಕೆಗೆ ಘೋಷಿಸಿದರು.
ಎರಡನೇ ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಒಟ್ಟಾರೆ ಕಣದಲ್ಲಿದ್ದ ಐದು ಅಭ್ಯರ್ಥಿಗಳಲ್ಲಿ ಪ್ರಥಮ ಪ್ರಾಶಾಸ್ತ್ಯದ ಮತ ಎಣಿಕೆಯಲ್ಲಿ ಅತ್ಯಂತ ಕಡಿಮೆ ಮತ ಪಡೆದ ವಾಟಾಳ್ ಪಕ್ಷದ ವಾಟಾಳ ನಾಗರಾಜ, ಸ್ವತಂತ್ರ ಅಭ್ಯರ್ಥಿ ಡಾ.ಚಂದ್ರಕಾಂತ ಸಿಂಗೆ ಹಾಗೂ ಜೆ.ಡಿ.ಎಸ್. ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಅವರನ್ನು ಕ್ರಮವಾಗಿ ಎಲಿಮಿನೇಟ್ ಮಾಡಿದ ನಂತರ ಅವರ ಮತಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತವನ್ನು ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹಂಚಿದಾಗ ಅಂತಿಮವಾಗಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ-10212 ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರು 7082 ಮತ ಪಡೆದರು. 2299 ಮತಗಳು ಎಕ್ಸ್ ಹಾಸ್ಟಡ್ ಆದವು (ಬ್ಯಾಲೆಟ್ ನಲ್ಲಿ ಪ್ರಥಮ ಪ್ರಾಶಸ್ತ್ಯ ಮಾತ್ರ ನೀಡಿದ್ದರಿಂದ ಎರಡನೇ ಪ್ರಾಶಸ್ತ್ಯ ಎಣಿಕೆಗೆ ಅರ್ಹವಿರುವುದಿಲ್ಲ).
ವಿನ್ನಿಂಗ್ ಕೋಟಾ 9717 ಮತವನ್ನು ಬಿ.ಜೆ.ಪಿ. ಪಕ್ಷದ ಶಶೀಲ್ ಜಿ. ನಮೋಶಿ ಅವರು ತಲುಪಿದ್ದರಿಂದ ಚುನಾವಣಾಧಿಕಾರಿ ಡಾ.ಎನ್.ವಿ.ಪ್ರಸಾದ ಅವರು ಚುನಾವಣಾ ಫಲಿತಾಂಶ ಘೋಷಿಸಿ ಶಶೀಲ್ ಜಿ. ನಮೋಶಿ ಅವರಿಗೆ ಗೆಲುವಿನ ಪ್ರಮಾಣ ಪತ್ರ ವಿತರಿಸಿದರು.
ಚುನಾವಣಾ ವೀಕ್ಷಕ ಹಾಗೂ ಪರಿಸರ, ಜೀವಶಾಸ್ತ್ರ ಹಾಗೂ ಅರಣ್ಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ ಡವೆ ಅವರ ಮಾರ್ಗದರ್ಶನದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಬೀದರ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, ಕಲಬುರಗಿ ಡಿ.ಸಿ. ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಸಿ.ಇ.ಓ. ಡಾ.ಪಿ.ರಾಜಾ, ಮಹಾನಗರ ಪಾಲಿಕೆ ಅಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಎನ್.ಇ.ಕೆ.ಆರ್.ಟಿ.ಸಿ. ವ್ಯವಸ್ಥಾಪಕ ನಿರ್ದೇಶಕ ಎಂ.ಖೂರ್ಮರಾವ್, ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹ್ಮದ್ ಇಸಾಮದಿ, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿಗಳು, ಚುನಾವಣಾ ಹಾಗೂ ಮತ ಎಣಿಕೆ ಸಿಬ್ಬಂದಿಗಳು ಇದ್ದರು.