ಆಳಂದ: ತಾಲೂಕಿನ ಭೂಸನೂರ ಹತ್ತಿರದ ಎನ್. ಎಸ್. ಎಲ್. ಸಕ್ಕರೆ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ನುರಿಸುವ ಕಬ್ಬಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಬಸವರಾಜ ಯಳಸಂಗಿ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡು ಆಡಳಿತಕ್ಕೆ ಒತ್ತಾಯಿಸಿದರು.
ನಿಂಬರ್ಗಾ ಉಪ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಬಸವರಾಜ ಯಳಸಂಗಿ, ಸಂಕಷ್ಟದಲ್ಲಿ ಕಬ್ಬು ಬೆಳೆದ ರೈತರಿಗೆ ಕಬ್ಬು ನುರಿಸುವ ಮೊದಲೇ ಬೆಲೆ ಘೋಷಿಸಿ ಅದರಂತೆ ಸಕಾಲಕ್ಕೆ ಪಾವತಿಸಬೇಕು.
ಈಗಾಗಲೇ ಕಾರ್ಖಾನೆ ಆರಂಭಿಸಿ ಕಬ್ಬು ನುರಿಸಲಾಗುತ್ತಿದೆ. ಆದರೆ ಇದುವರೆಗೂ ಬೆಲೆ ನೀಡುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸದೆಯಿರೋದು ರೈತರಲ್ಲಿ ಗೊಂದಲ ಉಂಟು ಮಾಡಿದೆ.ಈ ಕೂಡಲೇ ಎನ್.ಎಸ್.ಎಲ್ ಆಡಳಿತ ಮಂಡಳಿಯು ಬೆಲೆ ನೀಡುವ ಕುರಿತು ಘೋಷಣೆ ಮಾಡಬೇಕು. ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ನೀಡಬೇಕು. ಹಾಗೂ ಪ್ರತಿ ಟನ್ ಕಬ್ಬಿಗೆ 1 ಕೆಜಿ ಯಂತೆ ರಿಯಾಯಿತಿ ದರದಲ್ಲಿ ರೈತರಿಗೆ ಸಕ್ಕರೆ ಕೊಡಬೇಕು. ಕಟಾವಿಗೆ ಬಂದ ಕಬ್ಬು ಸಮಯಕ್ಕೆ ಕಟಾವು ಕೈಗೊಳ್ಳಬೇಕು. ಕಾರ್ಖಾನೆಗೆ ಕಬ್ಬು ಸಾಗಿಸಿ ತೂಕವಾದ ಮೇಲೆ ಸಕಾಲಕ್ಕೆ ಹಣ ಪಾವತಿಸಬೇಕು. ಆಡಳಿತ ಮಂಡಳಿ ಅವರು ರೈತರ ಸಭೆ ಕರೆದು ದರ ನಿಗದಿ ಪಡಿಸಿ ಬೆಲೆ ಘೋಷಣೆ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಬಂದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಪ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಬಸವರಾಜ ಯಳಸಂಗಿ,ಮಲ್ಲಿನಾಥ ನಾಟಿಕಾರ, ಶಾಂತೇಶ್ ಮಠಪತಿ, ಮಹಾದೇವ ಮಿಟೆಕಾರ, ಮಡಿವಾಳಪ್ಪ ಮಡಿವಾಳ, ಮಲ್ಲಿನಾಥ ಮಾ.ಪಾಟೀಲ್, ರಮೇಶ್ ಚಿಂಚೂರ, ಈರಣ್ಣ ಶರಣ,ಬಾಬು ಪಡಸಾವಳಿ,ವೀರಭದ್ರ ನಂದಿ,ಮಲ್ಲಿಕಾರ್ಜುನ ಕೊರೆ,ಧರ್ಮರಾಯ ವಗ್ದರ್ಗಿ, ಕ್ಷೇಮಲಿಂಗ ಕಂಭಾರ, ಸಂತೋಷ್ ಧಂಗಾಪುರ,ಶ್ರೀಶೈಲ ನಿಗಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.