ಸುರಪುರ: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗುತ್ತಿದ್ದಂತೆ ಎಲ್ಲೆಡೆ ಗೋಪ್ರಿಯರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.ಅದರಂತೆ ಶಾಸಕ ನರಸಿಂಹ ನಾಯಕ ರಾಜುಗೌಡ ಅವರು ವಿಶೇಷವಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸಂಭ್ರಮಿಸಿದ್ದಾರೆ.
ಹುಣಸಗಿ ತಾಲೂಕಿನ ಕೊಡೇಕಲ್ ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಗೋವಿನ ಪೂಜೆ ಸಲ್ಲಿಸಿ ರಾಜ್ಯದಲ್ಲಿ ಜಾರಿಗೊಂಡಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸ್ವಾಗತಿಸುವ ಜೊತೆಗೆ ಸಂಭ್ರಮಾಚರಿಸಿದ್ದಾರೆ.
ರಾಜುಗೌಡ ದಂಪತಿಗಳು ಗೋವಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ,ಗೋವಿಗೆ ಭಾರತದಲ್ಲಿ ಪೂಜ್ಯನಿಯ ಮಾತೃ ಸ್ಥಾನವನ್ನು ನೀಡಲಾಗಿದೆ.ಆದಿ ಕಾಲದಿಂದಲೂ ಗೋವು ಭಾರತೀಯರ ಪೂಜ್ಯನಿಯ ಪ್ರಾಣಿಯಾಗಿದೆ.ಇಂತಹ ಗೋವನ್ನು ಹತ್ಯೆ ಮಾಡುತ್ತಿರುವುದು ಪಾಪದ ಕಾರ್ಯವಾಗಿತ್ತು,ಈ ಗೋ ಹತ್ಯೆಯನ್ನು ತಡೆಯಬೇಕೆಂದು ಬಿಜೆಪಿ ಹಿಂದಿನಿಂದಲೂ ಆಗ್ರಹಿಸುತ್ತಿತ್ತು,ಅಲ್ಲದೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದಾಗಿ ಹೇಳಲಾಗಿತ್ತು,ಅದರಂತೆ ಇಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ನಮ್ಮ ಸರಕಾರ ಜಾರಿಗೊಳಿಸುವ ಮೂಲಕ ದೇಶದಲ್ಲಿ ಕರ್ನಾಟಕ ಸರಕಾರ ತನ್ನದೆ ಆದ ವಿಶೇಷತೆಯನ್ನು ಹೊಂದಿದೆ,ಈ ಮುಂದೆ ನಾಡಿನಲ್ಲಿ ಗೋವುಗಳ ರಕ್ಷಣೆಗೆ ಬಿಜೆಪಿ ಮುಂದಾಗಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರಪುರ ಮಂಡಲ ಬಿಜೆಪಿ ಅಧ್ಯಕ್ಷ ಮೇಲಪ್ಪ ಗುಳಗಿ,ಬಸನಗೌಡ ಹಳ್ಳಿಕೋಟೆ ಸೇರಿದಂತೆ ಅನೇಕರಿದ್ದರು.