ಕಲಬುರಗಿ: ಹಿಂಗಾರು ಹಂಗಾಮಿನ 2020-21ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವು ಈಗಾಗಲೇ ಜಿಲ್ಲೆಯಾದ್ಯಂತ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬುಧವಾರ ಹಾಗರಗುಂಡಗಿ, ಅವರಾದ (ಕೆ), ಕವಲಗಾ (ಬಿ), ಕವಲಗಾ (ಕೆ), ಹೇರೂರ (ಬಿ), ಜೋಗೂರ, ಮೈನಾಳ, ಬಸವಪಟ್ಟಣ, ತಿಳಗೋಳ, ಫರಹತಾಬಾದ, ಸಿಂದಗಿ (ಬಿ), ಸಿರನೂರ, ಕಿಣ್ಣಿಸಡಕ, ಅವರಾದ (ಬಿ), ತಾವರಗೇರಾ, ಖಣದಾಳ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ “ಹಿಂಗಾರು ರೈತರ ಬೆಳೆ ಸಮೀಕ್ಷೆ-2020-21” ಮೊಬೈಲ್ ಆಪ್ ಕುರಿತು ರೈತರಿಗೆ ಅರಿವು ಹಾಗೂ ಜಾಗೃತಿ ಮೂಡಿಸಿದರು.
ಸರ್ಕಾರದ ಆದೇಶದಂತೆ ಈ ಬಾರಿ ಬೆಳೆ ಸಮೀಕ್ಷೆ ಕಾರ್ಯಕ್ಕಾಗಿ ರೈತರು ಸ್ವತ: ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರ ದಾಖಲಿಸಲು ಗೂಗಲ್ ಪ್ಲೇಸ್ಟೋರ್ನಿಂದ ಹಿಂಗಾರು ಬೆಳೆ ಸಮೀಕ್ಷೆ 2020-21 ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಸ್ವತಃ ರೈತರೇ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗಳ ವಿವರ ಹಾಗೂ ಮಾಹಿತಿಯನ್ನು ನಿಗದಿತ ಅವಧಿಯೊಳಗಾಗಿ ಬೆಳೆ ವಿವರ ದಾಖಲಿಸಬೇಕೆಂದು ಕಲಬುರಗಿ ಹಾಗೂ ಕಮಲಾಪುರ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ತಿಳಿಸಿದ್ದಾರೆ.