ಚಿಂಚೋಳಿ: ಗ್ರಾಮೀಣ ಪ್ರದೇಶಗಳು ಸದೃಢತೆಯಾದಾಗ ಮಾತ್ರ ನಮ್ಮ ದೇಶ ಸದೃಢವಾಗಿರಲು ಸಾಧ್ಯ ಎಂದು ಬಾಲರಾಜ್ ಬ್ರಿಗೇಡ್ ಸಂಸ್ಥಾಪಕ ಬಾಲರಾಜ್ ಗುತ್ತೇದಾರ ಹೇಳಿದರು.
ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಗುರುವಾರ ಶಾರದಾ ಚಾರಿಟೇಬಲ್ ಟ್ರಸ್ಟ್ ಸಂಚಾಲಿತ ಬಾಲರಾಜ್ ಬ್ರಿಗೇಡ್ ಫೌಂಡೇಷನ್ ಹಾಗೂ ಕಲಬುರಗಿಯ ಮನೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ಮೌಲ್ಯಗಳ ತತ್ವದಡಿಯಲ್ಲಿ ಸಮಾಜ ಸೇವೆ ಮಾಡಲು ಇದೊಂದು ಸದಾವಕಾಶ. ಆ ನಿಟ್ಟಿನಲ್ಲಿ ಮನೂರ ಆಸ್ಪತ್ರೆ ಕೈ ಜೋಡಿಸಿರುವುದು ಸ್ತುತ್ಯಾರ್ಹ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಮನೂರ ಆಸ್ಪತ್ರೆ ಮುಖ್ಯಸ್ಥ ಡಾ. ಫಾರೂಕ್ ಮಾತನಾಡಿ, ಬಡ ರೋಗಿಗಳ ಸೇವೆ ಮಾಡುವ ಸದುದ್ದೇಶದಿಂದ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಬಾಲರಾಜ್ ಬ್ರಿಗೇಡ್ ತುಂಬಾ ಸಹಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿಯು ಕೂಡಾ ಯಾವುದೇ ಗ್ರಾಮಗಳಲ್ಲಿ ಉಚಿತ ಸೇವೆ ಮಾಡಲು ತಾವು ಸಿದ್ದರಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಲಾಯಿತು. ಮನೂರ ಆಸ್ಪತ್ರೆಯ ಮಾನವ ಸಂಪನ್ಮೂಲ ಅಧಿಕಾರಿ ಶೋಭಾ ಮಠಪತಿ, ಕರವೇ ಅಧ್ಯಕ್ಷ ಸಚಿನ್ ಚವ್ಹಾಣ, ಬಾಲರಾಜ್ ಬ್ರಿಗೇಡ್ ಸೇಡಂ ಅಧ್ಯಕ್ಷ ಶಿವಕುಮಾರ ನಿಡಗುಂದಾ, ಸುಲೇಪೇಟ್ ಅಧ್ಯಕ್ಷ ಮೋಯಿನ್ ಮೋಮಿನ್, ಲಾಡ್ಲೇಸಾಬ್ ತಾಂಡೂರ, ಡಾ.ಜಾಗೃತಿ, ಡಾ.ಇಸ್ಮಾಯಿಲ್ ಚಾಂದ್, ಅನೀಲ ಪೂಜಾರಿ, ಲಕ್ಷ್ಮಿ ನೂರೊಂದ, ತನು ಭಾವೆ, ರವಿ, ವಿಶಾಲ್ ರಾಠೋಡ, ಪೃಥ್ವಿರಾಜ್, ಅಣ್ಣಾರಾವ ನೂರಂದಗೌಡ ಸೇರಿ ಅನೇಕರು ಇದ್ದರು.