ಕಲಬುರಗಿ: ಚಿತ್ತಾಪುರ ತಾಲೂಕಿನ ರಾವೂರ ಗ್ರಾಪಂ ಚುನಾವಣೆಗೆ ಎಲ್ಲಾ 32 ಸ್ಥಾನಗಳಿಗೆ ಮುಖಂಡರು ಅವಿರೋಧ ಆಯ್ಕೆಗೆ ತಂತ್ರ ರೂಪಿಸಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ವಾರ್ಡ್ ಗಳಿಗೆ ಆಯ್ಕೆ ಬಯಸಿ ಚುನಾವಣೆಗೆ ಸ್ಪರ್ಧಿಸಲು ಮುಂದಾದ ಯುವಕರನ್ನು ಗ್ರಾಮದ ಮುಖಂಡರುಗಳೇ ತಡೆಯುತ್ತಿದ್ದಾರೆ ಎಂದು ಗ್ರಾಮಸ್ಥರೇ ನೇರವಾಗಿ ಆರೋಪಿಸಿದ್ದಾರೆ. ಗುರುವಾರ ದಿಢೀರ್ ಗ್ರಾಪಂ ಮುಂದೆ ಜಮಾಯಿಸಿದ ವಿವಿಧ ಬಡಾವಣೆಗಳ ನಿವಾಸಿಗಳು, ಅವಿರೋಧ ಆಯ್ಕೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ರಾವೂರ ಗ್ರಾಮದ ಚುನಾವಣೆ ಅಪ್ರಜಾತಾಂತ್ರಿಕವಾಗಿ ನಡೆಯುತ್ತಿದೆ. ಚುನಾವಣೆಗೆ ಸ್ಪರ್ಧಿಸುವ ಹಕ್ಕು ಕಸಿಯಲಾಗುತ್ತಿದೆ. ಜನರು ಸೂಚಿಸುವ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಲು ಅವಕಾಶ ನೀಡಲಾಗುತ್ತಿಲ್ಲ. ಪ್ರಭಾವಿ ವ್ಯಕ್ತಿಗಳ ರಾಜಕೀಯ ಅಧಿಕಾರದ ದಾಹ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಯುವ ಮುಖಂಡ ರಾಘವೇಂದ್ರ ಹೂಗಾರ ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹಿರಿಯ ರಾಜಕೀಯ ಮುಖಂಡರು ತಮ್ಮ ಬೆಂಬಲಿಗರಿಗೆ ಮಾತ್ರ ಮಣೆ ಹಾಕುತ್ತಿದ್ದಾರೆ. ನಾಮಪತ್ರ ಸಲ್ಲಿಸಲು ಮುಂದಾದ ಯುವಕರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಡಮ್ಮಿ ಕ್ಯಾಂಡಿಡೇಟ್ ಹಾಕಿಸಿ ವಂಚಿಸುತ್ತಿದ್ದಾರೆ. ಪ್ರತಿಯೊಂದು ವಾರ್ಡ್ ಗಳ ಪ್ರತಿಸ್ಪರ್ಧಿ ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್ ಪಡೆಯುವ ಅರ್ಜಿಗೆ ಮೋಸದಿಂದ ಸಹಿ ಹಾಕಿಸಿದ್ದಾರೆ ಎಂದು ವಾರ್ಡ್ 7ರ ಅಭ್ಯರ್ಥಿಗಳಾದ ಶ್ರೀದೇವಿ ರಜನಿಕಾಂತ್ ಹಾಗೂ ರಹಿಮಾನ್ ಪಟೇಲ್ ಗಂಭೀರ ಆರೋಪ ಮಾಡಿದ್ದಾರೆ.
ಯಾವೂದೇ ಕಾರಣಕ್ಕೂ ನಾವು ನಾಮಪತ್ರ ಹಿಂಪಡೆಯುವುದಿಲ್ಲ. ನಮಗೆ ಪ್ರಭಾವಿ ರಾಜಕಾರಣಿಗಳ ಒತ್ತಡವಿದ್ದು, ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣೆ ಒದಗಿಸಬೇಕು ಎಂದು ಬಡಾವಣೆಯ ರಜನಿಕಾಂತ್ ಭೋವಿ, ಮಹೆಬೂಬ ಖಾನ್ ಮನವಿ ಮಾಡಿದ್ದಾರೆ.