ಕಲಬುರಗಿ: ವಿಭಾಗೀಯ ಕೇಂದ್ರ ಕಲಬುರಗಿಯಲ್ಲಿರುವ ಆಹಾರ ಪ್ರಯೋಗಾಲಯವನ್ನು ಬೆಳಗಾವಿಗೆ ಸ್ಥಳಾಂತರಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ವಿರೋಧ ವ್ಯಕ್ತಪಡಿಸಿದ್ದಾರೆ.
ಆಹಾರ ಪ್ರಯೋಗಾಲಯದಿಂದ ಜಿಲ್ಲೆಗಷ್ಷೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ, ವ್ಯಾಪಾರಸ್ಥರಿಗೆ ಹಾಗೂ ರೈತರಿಗೆ ಅನುಕೂಲವಾಗಿದೆ.ಯಾವುದೋ ನೆಪ ಹೇಳಿ ಸರಕಾರ ಸ್ಥಳಾಂತರ ಮಾಡುತ್ತಿರುವುದು ಈ ಭಾಗಕ್ಕೆ ತನ್ನ ಮಲತಾಯಿ ಧೋರಣೆ ಮುಂದುವರಿಸಿದೆ.
ಕಲಬುರಗಿ ವಿಭಾಗಿಯ ಕೇಂದ್ರವಾದರೂ ಇಲ್ಲಿಂದ ಒಂದೊಂದಾಗಿ ಯೋಜನೆಗಳು,ಇಲಾಖೆಗಳನ್ನ ಎತ್ತಂಗಡಿ ಮಾಡುತ್ತಿರುವುದು ಖಂಡನೀಯ. ಐಐಟಿ, ರೈಲ್ವೆ ಪ್ರಾದೇಶಿಕ ಕಚೇರಿ ಹೀಗೆ ಹಲವು ಯೋಜನೆಗಳು ಕೈ ತಪ್ಪಿ ಹೋದರೂ ನಮ್ಮ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.ನಿರದ್ಯೋಗ ಇಲ್ಲಿ ತಾಂಡವಾಡುತ್ತಿದೆ.ಇದೇ ರೀತಿ ಮುಂದುವರೆದರೆ ಇಲ್ಲಿರುವ ಎಲ್ಲಾ ಯೋಜನೆಗಳು,ಇಲಾಖೆಗಳು ಸ್ಥಳಾಂತರ ಗೊಳ್ಳುತ್ತವೆ.
ಕೂಡಲೇ ಸರಕಾರ ಆಹಾರ ಪ್ರಯೋಗಾಲಯ ಕಲಬುರ್ಗಿಯಲ್ಲಿಯೇ ಮುಂದುವರೆಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.