ರಾಜಕೀಯವಾಗಿ ಬೆಳೆದಲ್ಲಿ ಮಾತ್ರ ಕೋಲಿ ಸಮಾಜದ ಅಭಿವೃದ್ಧಿ ಸಾಧ್ಯ: ಚಿನಿವಾರ್

0
45

ಕಲಬುರಗಿ: ರಾಜಕೀಯವಾಗಿ ಮೇಲೆ ಬಂದಲ್ಲಿ ಕೋಲಿ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಪತ್ರಕರ್ತ ಬಸವರಾಜ್ ಅ. ಚಿನಿವಾರ್ ಅವರು ಇಲ್ಲಿ ಹೇಳಿದರು.

ನಗರದ ಶ್ರೀ ಶರಣಬಸವೇಶ್ವರ್ ದೇವಸ್ಥಾನದ ಎದುರು ಇರುವ ಲಾಲ್‌ಗಿರಿ ಕ್ರಾಸ್ ಜಾತ್ರಾ ಮೈದಾನದಲ್ಲಿ ಕೋಲಿ ಸಮಾಜದವರು ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಮುಖ್ಯ ಸಚೇತಕ ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡ ದಿ. ವಿಠಲ್ ಹೇರೂರ್ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಹಮ್ಮಿಕೊಳ್ಳುವ ಮೂಲಕ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ ರಾಜಕೀಯವಾಗಿ ಮೇಲೆ ಬಂದರು ಎಂದರು.

Contact Your\'s Advertisement; 9902492681

ಸ್ವಾತಂತ್ರ್ಯ ಸಿಕ್ಕು ಇಲ್ಲಿಯವರೆಗೂ ಕೋಲಿ ಸಮಾಜದ ಬೇಡಿಕೆಗಳು ಇಡೇರಿಲ್ಲ. ಅದೇ ಹಳೆಯ ಬೇಡಿಕೆಗಳು ಈಗಲೂ ಸಹ ಮುಂದುವರೆದಿವೆ. ದಿ. ವಿಠಲ್ ಹೇರೂರ್ ಅವರು ಸಾಕಷ್ಟು ಹೋರಾಟ ಮಾಡಿದರೂ ಸಹ ಕೋಲಿ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರಲಿಲ್ಲ. ಅವರ ನಿಧನದ ನಂತರವೂ ಸಹ ಹೋರಾಟವೂ ಸಹ ಪರಿಣಾಮಕಾರಿಯಾಗಿ ಮುಂದುವರೆದುಕೊಂಡು ಹೋಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಇಚ್ಛಾಶಕ್ತಿಯಿಂದಲೇ ಕೋಲಿ ಸಮಾಜವು ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಆದ್ದರಿಂದ ಪುರ, ಪಂಚಾಯಿತಿಗಳೂ ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಸಮಾಜದವರು ಸಾರಥ್ಯ ವಹಿಸಬೇಕು. ಆ ದಿಸೆಯಲ್ಲಿ ಸಮಾಜ ರಾಜಕೀಯವಾಗಿ ಬೆಳೆಯಬೇಕು ಎಂದು ಅವರು ಹೇಳಿದರು.

ಮೂಢನಂಬಿಕೆ, ಕಂದಾಚಾರಗಳನ್ನು ಮೈಗೂಡಿಸಿಕೊಂಡು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸುವುದರಿಂದ ಯಾವುದೇ ಉಪಯೋಗವಿಲ್ಲ. ಸಮಾಜದಲ್ಲಿನ ಅಸಮಾನತೆ ನಿವಾರಣೆಯಾದಾಗ ಮಾತ್ರ ಇಂತಹ ಕಾರ್ಯಕ್ರಮಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ ಎಂದು ಅವರು ತಿಳಿಸಿದರು.

ಸಮಾಜದ ಮುಖಂಡ ಬಾಬುರಾವ್ ಜಮಾದಾರ್ ಅವರು ಮಾತನಾಡಿ, ಮೊದಲು ಕೋಲಿ ಸಮಾಜವು ಮಹರ್ಷಿ ವಾಲ್ಮೀಕಿ ಅವರನ್ನೇ ಗುರು ಎಂದು ಭಾವಿಸಿತ್ತು. ಈಗ ನಮ್ಮ ಸಮಾಜಕ್ಕೆ ಗುರು ಮತ್ತು ನಿಜಶರಣರು ಸಿಕ್ಕಿದ್ದಾರೆ. ನಿಜಶರಣ ಅಂಬಿಗರ ಚೌಡಯ್ಯನವರು ಸಮಾಜದ ಅಂಕು, ಡೊಂಕುಗಳ ವಿರುದ್ಧ ವಚನಗಳಲ್ಲಿ ಹರಿಹಾಯ್ದಿದ್ದಾರೆ. ಆದ್ದರಿಂದ ಸಮಾಜ ಬಾಂಧವರು ಮೂಢನಂಬಿಕೆಗಳಿಂದ ಹೊರಬರಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಮಲ್ಲಿಕಾರ್ಜುನ್ ವ್ಹಿ.ಎನ್. ಅವರು ಮಾತನಾಡಿ, ಸಮಾಜವು ಒಗ್ಗೂಡಬೇಕು. ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಹೆಚ್ಚು ಹೆಚ್ಚು ಪ್ರಚಾರಗೊಳ್ಳಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಮಾರುತಿ, ರಾಜಕುಮಾರ್ ಜಮಾದಾರ್ ಮುಂತಾದವರು ಮಾತನಾಡಿ, ದಿ. ವಿಠಲ್ ಹೇರೂರ್ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಸಮಾಜದ ಗಣ್ಯರಾದ ಪ್ರಭಾಕರ್ ಬೆನಕನಳ್ಳಿ ಅವರು ವಹಿಸಿದ್ದರು. ವೇದಿಕೆಯ ಮೇಲೆ ದೇವೆಂದ್ರಪ್ಪ ಬಾಡ್ಯಾಳ್, ಶರಣಪ್ಪ ಕುಮಸಗಿ, ರಾಜಶೇಖರ್ ದಂಡೋತಿ, ವೈ.ಎಚ್. ಕೋಲಕರ್, ಶಿವಕುಮಾರ್ ಹೊನಗುಂಟಾ, ಕರ್ನಾಟಕ ನವ ನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ್, ಸಂತೋಷ್ ಬೆಣ್ಣೂರ್, ಶರಣಪ್ಪ ಹರಸೂರ್, ಅಣ್ಣಪ್ಪ ಜಮಾದಾರ್, ಸಂಚಾರಿ ಪೋಲಿಸ್ ಅಧಿಕಾರಿ ಶಾಂತಾಬಾಯಿ, ಶಾಂತಪ್ಪ ಕೂಡಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯೋಗೇಶ್ ಸುರಪುರ, ಮಹಾದೇವಪ್ಪಾ ಬೊಮ್ನಳ್ಳಿ, ಮಹಾದೇವಪ್ಪ ಕುಳಕುಮಟಗಿ, ಶಿವಶರಣ್ ಕೂಡಿ, ಶರಣು ಮರಕಲ್, ಮಲ್ಲಯ್ಯ, ಸಿದ್ರಾಮ್ ಸೋನಾ, ಮಹಾದೇವಪ್ಪ, ಅರುಣ್ ಕೋಬಾಳ್, ಸುರೇಶ್ ಮುಂತಾದವರು ಯಶಸ್ವಿಯಾಗಿ ಸಂಘಟಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here