ಒಳಚರಂಡಿ ಗುಂಡಿಯಲ್ಲಿ ಬಿದ್ದು ಮೃತ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ: ಎಂ. ಶಿವಣ್ಣ

0
36

ಕಲಬುರಗಿ: ಕೈಲಾಶ್ ನಗರದಲ್ಲಿ ಕಳೆದ ಜ.28 ರಂದು ಮ್ಯಾನ್‍ಹೋಲ್ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಪ್ರಕರಣದಲ್ಲಿ ಯಾವುದೇ ಮುಲಾಜಿಗೆ ಮತ್ತು ರಾಜಕೀಯ ಒತ್ತಡಕ್ಕೂ ಒಳಗಾಗದೇ ತಪ್ಪಿಸ್ಥರಿಗೆ ಕಾನೂನಿನ್ವಯ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ. ಶಿವಣ್ಣ (ಕೋಟೆ) ಅವರು ಡಿ.ಸಿ.ಪಿ. ಕಿಶೋರ ಬಾಬು ಅವರಿಗೆ ಖಡಕ್ ಸೂಚನೆ ನೀಡಿದರು.

ಶನಿವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನ್‍ಹೋಲ್ ಗುಂಡಿಯಲ್ಲಿ ಬಿದ್ದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 2013 ರಲ್ಲಿ ಮ್ಯಾನ್ವಲ್ ಸ್ಕ್ಯಾವೆಂಜರ್ ಕಾಯ್ದೆ ಜಾರಿಗೆ ಬಂದು ಒಳಚರಂಡಿ ಗುಂಡಿಯಲ್ಲಿ ಮಾನವ ಇಳಿಯಲು ನಿμÉೀಧವಿದ್ದರು ಗುಂಡಿಯಲ್ಲಿ ಇಳಿಸಿದ ಗುತ್ತಿಗೆದಾರನನ್ನು ಕೂಡಲೆ ವಶಕ್ಕೆ ಪಡೆಯಿರಿ. ಈ ಪ್ರಕರಣದಲ್ಲಿ ತಪ್ಪಿಸ್ಥರು ರಕ್ಷಿಸಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಮತ್ತು ರಾಜ್ಯಕ್ಕೆ ಮಾದರಿಯಾಗುವಂತಹ ಕಠಿಣ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಕಲಬುರಗಿ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇಂತಹ ಪ್ರಕರಣಗಳು ಮುಂದೆ ಆಗದಂತೆ ಎಚ್ಚರಿಕೆ ವಹಿಸಬೇಕು. ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ಮತ್ತು ಮ್ಯಾನ್ವಲ್ ಸ್ಕ್ಯಾವೆಂಜರ್ಸ್ ಕಾರ್ಮಿಕರ ಹಿತರಕ್ಷಣೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮತ್ತು ರಾಜ್ಯ ಹೈಕೋರ್ಟ್‍ಗಳು ತುಂಬಾನೆ ತೀಕ್ಷ್ಣವಾಗಿ ಪ್ರತಿಕ್ರಿಯೆಸುತ್ತಿದ್ದು, ಅಧಿಕಾರಿಗಳು ಇದನ್ನು ಅರಿತು ಕಾರ್ಯನಿರ್ವಹಿಸಬೇಕಾಗಿದೆ. ಈ ವಿಚಾರದಲ್ಲಿ ಅಸಡ್ಡೆ ತೋರಿದಲ್ಲಿ ಮ್ಯಾನ್ವಲ್ ಸ್ಕ್ಯಾವೆಂಜರ್ ಕಾಯ್ದೆಯನ್ವಯ ಆಯೋಗ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹಿಂಜರಿಯದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಒಳಚರಂಡಿ ಸ್ವಚ್ಛತಾ ಕಾರ್ಮಿಕರಿಗೆ ಕಳೆದ 3 ತಿಂಗಳಿಂದ ವೇತನ ಬಾಕಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷ ಎಂ. ಶಿವಣ್ಣ ಅವರು ಸಂಬಳ ಇಲ್ಲದೆ ಹೋದಲ್ಲಿ ಕಾರ್ಮಿಕರ ಮನೆ ನಡೆಯುವುದು ಹೇಗೆ ಎಂದು ಪ್ರಶ್ನಿಸಿದರು. ವೇತನ ವೇತನ ಪಾವತಿಸಿದ ಗುತ್ತಿಗೆದಾರನಿಗೆ ನೋಟಿಸ್ ಕೊಟ್ಟು ಕೂಡಲೆ ಕಾರ್ಮಿಕರಿಗೆ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಮಂಡಳಿಯ ಕಲಬುರಗಿ ವಲಯದ ಮುಖ್ಯ ಅಭಿಯಂತರ ದಿನೇಶ ಅವರಿಗೆ ನಿರ್ದೇಶನ ನೀಡಿದರು.

ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ಹಾಗೂ ವಿಶೇಷವಾಗಿ ಮ್ಯಾನ್ವಲ್ ಸ್ಕ್ಯಾವೆಂಜರ್ಸ್ ಗಳಿಗೆ ಸಕಾಲದಲ್ಲಿ ವೇತನ ಪಾವತಿ, ಪಿ.ಎಫ್. ಇ.ಎಸ್.ಐ. ಸೌಲಭ್ಯ, ಸ್ವಚ್ಛತಾ ಪರಿಕರ ವಿತರಣೆ, ಆರೋಗ್ಯ ರಕ್ಷಣೆ ಮತ್ತು ವಸತಿ ಕಲ್ಪಿಸುವ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು. ಮ್ಯಾನ್ವಲ್ ಸ್ಕ್ಯಾವೆಂಜರ್ ಕಾಯ್ದೆ-2013ರ ಬಗ್ಗೆ ಹೆಚ್ಚಿನ ಅಧಿಕಾರಿಗಳಿಗೆ ಇದರ ಅರಿವಿಲ್ಲ, ಈ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರಿಗೆ ಅಧ್ಯಕ್ಷರು ಸೂಚಿಸಿದರು.

ಮ್ಯಾನ್ವಲ್ ಸ್ಕ್ಯಾವೆಂಜರ್ಸ್‍ಗಳಿಗೆ ಸರ್ಕಾರಿ ಯೋಜನೆಯಡಿ ಮಂಜೂರು ಮಾಡಲಾಗುವ ವಸತಿ ಯೋಜನೆಯಡಿ ಪ್ರಥಮಾದ್ಯತೆ ನೀಡಬೇಕು. ಪೌರ ಕಾರ್ಮಿಕರ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ನೇರ ನೇಮಕಾತಿಯಾದವರಿಗೆ ನೇರ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಅವರಿಗೆ ಸೂಚನೆ ನೀಡಿದ ಅಧ್ಯಕ್ಷರು ಮುಂದಿನ ತಿಂಗಳ ಮತ್ತೆ ತಾವು ಕಲಬುರಗಿಗೆ ಜಿಲ್ಲೆಗೆ ಬರಲಿದ್ದು, ಜಿಲ್ಲೆಯಲ್ಲಿನ ಪೌರ ಕಾರ್ಮಿಕರು, ಸ್ವಚ್ಛತಾ ಕಾರ್ಮಿಕರು ಮತ್ತು ಮ್ಯಾನ್ವಲ್ ಸ್ಕ್ಯಾವೆಂಜರ್ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲಿಸುವುದಾಗಿ ತಿಳಿಸಿದರು.

ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹೀರೆಮನಿ ಮಾತನಾಡಿ ಕಳೆದ 2 ವರ್ಷದ ಹಿಂದೆ ತಾವು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಕಲಬುರಗಿ ನಗರದ ಸಂಜೀವ ನಗರ ಸ್ಲಂ ಪ್ರದೇಶದಲ್ಲಿ ರಾತ್ರಿ ವಾಸ್ತವ್ಯ ಮಾಡಿದೆ. ಆಗ ಅಲ್ಲಿನ ನಿವಾಸಿಗಳು ಸಮುದಾಯ ಶೌಚಾಲಯ ಮತ್ತು ಕುಡಿಯುವ ನೀರು ಪೂರೈಕೆಗೆ ಟ್ಯಾಂಕ್ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದರು. 2 ವರ್ಷ ಗತಿಸಿದರೂ ಈ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಕೂಡಲೆ ಇದನ್ನು ಕಾರ್ಯಗತಗೊಳಿಸಿ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರಿಗೆ ತಿಳಿಸಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮಾತನಾಡಿ ಒಳಚರಂಡಿ ಮಂಡಳಿಯ ಕಾರ್ಮಿಕರ ಬಾಕಿ ವೇತನ ಮುಂದಿನ 10 ದಿನದೊಳಗೆ ಪಾವತಿಗೆ ಕ್ರಮ ವಹಿಸಲಾಗುವುದು. ಮುಂದೆ ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳನ್ನು ಮರುಕಳುಹಿಸದಂತೆ ಎಲ್ಲಾ ರೀತಿಯ ಎಚ್ಚರಿಕೆ ವಹಿಸಲಾಗುವುದು ಮತ್ತು ಆಯೋಗದ ನಿರ್ದೇಶನಗಳನ್ನು ಸಹ ಪಾಲಿಸಲಾಗುವುದು. ಕಲಬುರಗಿ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ವೇತನ ಬಾಕಿ ಸಂಬಂಧಿಸಿದಂತೆ ಹಿಂದೆ ಬಹಳಷ್ಟು ವೇತನ ಬಾಕಿ ಇತ್ತು. ಪಾಲಿಕೆಯ ನೂತನ ಆಯುಕ್ತರಾಗಿ ನೇಮಕವಾದ ನಂತರ ಸ್ನೇಹಲ್ ಸುಧಾಕರ ಲೋಖಂಡೆ ಅವರು ಖುದ್ದು ಮತುವರ್ಜಿ ವಹಿಸಿ ನವೆಂಬರ್-2020ರ ವರೆಗೆ ವೇತನ ಪಾವತಿ ಮಾಡಲಾಗಿದೆ. ಪಾಲಿಕೆಯ ಆಡಳಿತ ಸುಧಾರಣೆಯಾಗುತ್ತಿದೆ ಎಂದು ಆಯೋಗಕ್ಕೆ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಲಬುರಗಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ನರಸಿಂಹರೆಡ್ಡಿ ಮಾತನಾಡಿ ಕಲಬುರಗಿ ನಗರದಲ್ಲಿ ಒಳಚರಂಡಿ ಸ್ವಚ್ಛತೆಗೆ ಒಟ್ಟು 6 ಮಶೀನ್‍ಗಳಿವೆ. ಹಳೇ ಮತ್ತು ಹೊಸದಾಗಿ ತಲಾ 350 ಕಿ.ಮೀ. ಯು.ಜಿ.ಡಿ. ಸಂಪರ್ಕವನ್ನು ನಗರ ಹೊಂದಿದೆ. ಅಮೃತ ಯೋಜನೆಯಡಿ ಇನ್ನೂ 3 ಯಂತ್ರಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯರಾದ ಗೀತಾ ವಾಡೇಕರ್, ನಾಗರಾಜ ಎಸ್., ಎಂ.ವಿ.ವೆಂಕಟೇಶ, ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಸದಸ್ಯರಾದ ನ್ಯಾಯವಾದಿ ಹೆಚ್.ವೆಂಕಟೇಶ ದೊಡ್ಡೇರಿ, ಡಿ.ಸಿ.ಪಿ. ಕಿಶೋರ ಬಾಬು, ಸಹಾಯಕ ಅಯುಕ್ತ ಬಲರಾಂ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಲಬುರಗಿ ವಲಯದ ಅಧೀಕ್ಷಕ ಅಭಿಯಂತರ ಬಸವರಾಜ ಅಲೇಗಾಂವ, ಜಿಲ್ಲಾ ಜಾಗೃತ ಸಮಿತಿ ಸದಸ್ಯ ಆದಿಲ್ ಕುಮಾರ ಸೇರಿದಂತೆ ಜೆಸ್ಕಾಂ, ಸ್ಲಂ ಮಂಡಳಿ, ಕಾರ್ಮಿಕ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here