ಸ್ವಚ್ಛಮೇವ ಜಯತೆ ಕಾರ್ಯಕ್ರಮದಡಿ ಸಾವಿರ ಸಸಿಗಳ ವಿತರಣೆ

0
46

ಬೀದರ್: ನಗರದ ಶರಣ ಉದ್ಯಾನದಲ್ಲಿ ಸೋಮುವಾರ ಸಂಜೆ ೬.೩೦ ಗಂಟೆಗೆ ೨೩೫ನೇ ಶರಣ ಸಂಗಮ, ವಿಶ್ವ ಪರಿಸರ ದಿನಾಚರಣೆ ಮತ್ತು ಸ್ವಚ್ಛಮೇವ ಜಯತೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಂಗವಾಗಿ ಸಾಮಾಜಿ ಅರಣ್ಯ ವಲಯ ಇಲಾಖೆಯ  ಸಹಯೋಗದೊಂದಿಗೆ ಒಂದು ಸಾವಿರ ಗ್ರಹ ಉಪಯೋಗಿ ಸಸಿಗಳನ್ನು ವಿತರಿಸಲಾಯಿತು. ಮನೆಗೆ ಎರಡು ಸಸಿಗಳನ್ನಾದರೂ ನೆಟ್ಟು ಬೆಳೆಸಬೇಕೆಂದು ಕರೆ ನೀಡಲಾಯಿತು.

ಪ್ರಾರಂಭದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ ಅವರು ಮಾತನಾಡಿ, ಇಂದು ಎಲ್ಲಾ ರಂಗದಲ್ಲಿ ಪರಿಸರ ಮಾಲಿನ್ಯ ಉಂಟಾಗಿದೆ. ಪರಿಸರ ಮಾಲಿನ್ಯ ಹೋಗಲಾಡಿಸಿ ಪ್ರಕೃತಿ ಉಳಿಸಿಕೊಳ್ಳಬೇಕಾದರೆ ಪ್ರತಿಯೊಬ್ಬರು ಸಹ ಸಸಿಗಳನ್ನು ನೆಡಬೇಕು. ಕೇವಲ ನೆಟ್ಟರೆ ಸಾಲದು. ತಮ್ಮ ಮಕ್ಕಳನ್ನು ಜೋಪಾನ ಮಾಡುವಂತೆ ಸಸಿಗಳನ್ನು ಪೋಷಣೆ ಮಾಡಿ ಬೆಳೆಸುವ ಮೂಲಕ ಪರಿಸರವನ್ನು ಉಳಿಸಿಕೊಳ್ಳಬೇಕೆಂದು ಕರೆಯಿತ್ತರು. ಮುಂದುವರೆದು ನಮ್ಮ ಮುಂದಿನ ಪೀಳಿಗೆಗೆ ಇದೇ ನಮ್ಮ ವಿಶೇಷ ಕೊಡುಗೆ ಎಂದು ಬಣ್ಣಿಸಿ, ಇಂಥ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡ ಅಕ್ಕನವರ ಕಾರ್ಯ ಶ್ಲಾಘನೀಯ ಎಂದು ಪ್ರಶಂಸಿದರು.

Contact Your\'s Advertisement; 9902492681

ಸಾನಿಧ್ಯವಹಿಸಿದ್ದ ಅಕ್ಕ ಅನ್ನಪೂರ್ಣತಾಯಿಯವರು ಮಾತನಾಡಿ, ಮನಸ್ಸಿನ ಮಾಲಿನ್ಯವೇ ಎಲ್ಲಾ ಮಾಲಿನ್ಯಗಳಿಗೆ ಕಾರಣವಾಗಿದೆ.  ಆದ್ದರಿಂದ ಮನದ ಮಾಲಿನ್ಯ ಹೋಗಲಾಡಿಸಿದರೆ ಪ್ರಕೃತಿಯ ಸರ್ವ ಮಾಲಿನ್ಯಗಳನ್ನು ನಿವಾರಿಸಬಹುದು. ಪ್ರಕೃತಿ ನಾಶ ಮಾಡವುದರಲ್ಲಿ ಮಾನವನ ಸಂಗ್ರಹ ಬುದ್ಧಿಯೇ ಕಾರಣವಾಗಿದೆ ಎಂದರು.

ಪ್ರಪಂಚದಲ್ಲಿ ಮಾನವನನ್ನು ಹೊರತು ಪಡಿಸಿ ಯಾವ ಪ್ರಾಣಿಗಳು ಸಹ ಪ್ರಕೃತಿಯನ್ನು ಹಾಳು ಮಾಡಲಾರವು. ತಮಗೆ ಬೇಕಾದಷ್ಟನ್ನು ಮಾತ್ರ ಬಳಸುವವು. ಆದರೆ ಮಾನವನ ದುರಾಸೆಯಿಂದ ಅಳಿವಿನ ಅಂಚಿಗೆ ಬಂದು ನಿಂತತಾಗಿದೆ. ಈಗಲಾದರೂ ಮನಕುಲ ಎಚ್ಚೆತ್ತುಕೊಳ್ಳದಿದ್ದರೆ ಜಗತ್ತಿನ ನಾಶ ಖಚಿತ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವ ಮೂಲಕ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗುವಂತೆ ನೋಡಿಕೊಳ್ಳುವುದು ಎಲ್ಲರ ಜವಬ್ದಾರಿಯಾಗಿದೆ. ಒಂದು ಸಸಿಯು ಸಹ ವ್ಯರ್ಥವಾಗದಂತೆ ಸಂರಕ್ಷಿಸಿ ಬೆಳೆಸಬೇಕೆಂದು ಕರೆಯಿತ್ತರು. ಮುಂದುವರೆದು ಶರಣರ ವಚನಗಳನ್ನು ಉದಾಹರಿಸಿ ಶರಣರು ಪ್ರಕೃತಿ ಪೋಷಕರಾಗಿದ್ದರು ಎಂದು ಅವರು ಬಣ್ಣಿಸಿದರು.

ಮುಖ್ಯ ಉಪನ್ಯಾಸಕ ನರ್ಚರ್ ಸಂಸ್ಥೆಯ ಅಧ್ಯಕ್ಷ ದತ್ತಾ ಮುಳೆಯವರು ಮಾತನಾಡಿ, ಪ್ರಕೃತಿ ಮಾಲಿನ್ಯದಿಂದ ವಾತಾವರಣದಲ್ಲಿ ಆಮ್ಲಜನಕ ದಿನೇ ದಿನೇ ಕಡಿಮೆಯಾಗುತ್ತಿದೆ. ಬಿಸಿ ಹೆಚ್ಚುತ್ತಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಇದಕ್ಕೆಲ್ಲ ಮುಖ್ಯವಾದ ಕಾರಣ ಕಾಡು ನಾಶವಾಗುತ್ತಿರುವುದು. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕಾದರೆ ಶೇಕಡಾ ೩೩ ರಷ್ಟು ಕಾಡು ಇರಬೇಕು. ಆದರೆ ಬೀದರ ಜಿಲ್ಲೆಯಲ್ಲಿ ಶೇ. ೮ ರಷ್ಟು ಮಾತ್ರ ಕಾಡು ಇದ್ದು, ಹಲವು ವರ್ಷಗಳ ಪ್ರಯತ್ನದ ಫಲವಾಗಿ ಅದು ಶೇ. ೧೨ಕ್ಕೆ ಏರಿದೆ. ಇನ್ನು ಶೇ. ೨೧ ರಷ್ಟು ಕಾಡು ಬೆಳೆಸುವುದು ಅವಶ್ಯವಿದೆ ಎಂದರು.

ಒಬ್ಬ ವ್ಯಕ್ತಿ ತನ್ನ ಜೀವಮಾನದಲ್ಲಿ ೩೦೦ ಮರಗಳನ್ನು ಬೆಳೆಸುವುದರಿಂದ ಮಾತ್ರ ಪ್ರಕೃತಿಯನ್ನು ಉಳಿಸಲು ಸಾಧ್ಯವೆಂದು ಅಂಕಿಅಂಶಗಳ ಸಮೇತ ವಿವರಿಸಿದ ಅವರು,ಮನೆಯಲ್ಲಿ ಅನಾವಶ್ಯಕ ವಸ್ತುಗಳನ್ನು ತುಂಬದೇ ಸ್ವಚ್ಛ ಗಾಳಿ ಹರಿದಾಡಲು ಅವಕಾಶವಿಡಬೇಕು. ನೀರು ಹಿತ-ಮಿತವಾಗಿ ಬಳಸಬೇಕೆಂದು ಕರೆಯಿತ್ತರು.

ನೇತೃತ್ವ ವಹಿಸಿದ್ದ ಡಾ. ಗಂಗಾಂಬಿಕೆ ಅಕ್ಕನವರು ಮಾತನಾಡಿ, ಪ್ರಾಣಿ ಸಂಕುಲಕ್ಕೆ ದೇವರು ಕೊಟ್ಟ ವರ ಪ್ರಕೃತಿ. ಅದನ್ನು ನಾಶ ಮಾಡುವ ವಿಕೃತಿಗೆ ಇಳಯಬಾರದು. ಪ್ರಕೃತಿ ಸಮತೋಲನವಾಗಿದ್ದರೆ ಮಾತ್ರ ಆರೋಗ್ಯಯುತ ಬದುಕು ಸಾಗಿಸಲು ಸಾಧ್ಯವೆಂದರು.

ಇದೇ ಸಂದರ್ಭದಲ್ಲಿ ಹೆಸರಾಂತ ಉದ್ಯಮಿ ಸಂತೋಷಕುಮಾರ್ ತಾಳಂಪಳ್ಳಿ, ಅಶೋಕ್ ಎಲಿ ಮತ್ತು ಪ್ರಕಾಶ್ ದೇಶಮುಖ್ ಅವರು ಕ್ರಮವಾಗಿ ವಚನ ಜೀವನ, ಮಾಚಿದೇವ ಸಂಪದ ಮತ್ತು ಪ್ರಭು ಸಂಪದ ಗ್ರಂಥಗಳನ್ನು ಬಿಡುಗಡೆ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದರು.

ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ ಮತ್ತು ಹುಮ್ನಾಬಾದ್ ಪುರಸಭೆ ನೂತನ ಸದಸ್ಯೆ ಸತ್ಯವತಿ ಡಾ. ಎಸ್.ಆರ್. ಮಠಪತಿಯವರನ್ನು ಅಭಿನಂದಿಸಿ ಶಾಲು ಹೊದಿಸಿ ಸತ್ಕರಿಸಲಾಯಿತು. ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶಿವರಾಜ್ ಅವರು ಅತಿಥಿಯಾಗಿ ಪಾಲ್ಗೊಂಡು ಸಸಿಗಳ ವಿತರಣೆಗೆ ಸಹಕರಿಸಿದರು.

ಅಧ್ಯಕ್ಷತೆಯನ್ನು ಶರಣಪ್ಪ ಚಿಮಕೋಡೆ ಅವರು ವಹಿಸಿದ್ದರು. ಡಾ. ಮಹೇಶ್ ಕರಂಜಿ ಅವರು ಸ್ವಾಗತಿಸಿದರು. ಮೀನಾಕ್ಷಿ ಮಲ್ಲಿಕಾರ್ಜುನ್ ಕರಂಜಿಯವರು ಭಕ್ತಿ ದಾಸೋಹಗೈದರು. ರಾಜಕುಮಾರ್ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here