ಕಲಬುರಗಿ: ವೀರಶೈವ ಧರ್ಮ ಸ್ಥಾಪನಾಚಾರ್ಯ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡಲು ರಾಜ್ಯದ ಮುಖ್ಯಮಂತ್ರಿಗಳು ಬರುವ ಬಜೆಟ್ನಲ್ಲಿ ಘೋಷಿಸುವಂತೆ ಅಖಿಲ ಭಾರತ ವೀರಶೈವ ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಯ್ಯ ಮಠಪತಿ ಮುಖ್ಯಮಂತ್ರಿಗಳಲ್ಲಿ ವಿನಂತಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ವಿಶ್ವದ ಜನತೆಗೆ ಮಾನವೀಯ ಮೌಲ್ಯಗಳನ್ನು ಬೋಧಿಸಿ ಜನರಲ್ಲಿ ಧರ್ಮ ಪ್ರಜ್ಞೆಯೊಂದಿಗೆ ಧಾರ್ಮಿಕ ಆಚರಣೆಗಳನ್ನು ಸಾರಿದ ಜಗದ್ಗುರು ರೇಣುಕಾಚಾರ್ಯರಿಗೆ ನಾಡು ಸೇರಿದಂತೆ ದಕ್ಷಿಣ ಭಾರತಾದ್ಯಂತ ಜಾತಿ, ಮತ, ಪ್ರಾಂತ, ಪ್ರದೇಶವನ್ನು ಮೀರಿ ಲಕ್ಷಾಂತರ ಭಕ್ತ ಸಮೂಹವಿದೆ.
ಪ್ರಾಚೀನ ಗ್ರಂಥವಾದ ಸಿದ್ಧಾಂತ ಶಿಖಾಮಣಿಯನ್ನು ಜನತೆಗೆ ಧಾರೆಯೆರೆದು ಸಾಮರಸ್ಯ, ಸಹಬಾಳ್ವೆ, ಸೌಹಾರ್ದತೆಯ ಬದುಕನ್ನು ಬೋಧಿಸಿದ ಜಗದ್ಗುರು ಶ್ರೀ ರೇಣುಕಾಚಾರ್ಯರ ಮೌಲ್ಯಗಳು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಾಗಿರುವುದರಿಂದ ಸರ್ಕಾರದಿಂದ ಜಯಂತಿ ಆಚರಣೆ ಮಾಡುವುದು ಅತ್ಯವಶ್ಯಕವಾಗಿದೆ.
ಜಯಂತಿಯನ್ನು ಸರಕಾರದ ವತಿಯಿಂದ ಆಚರಣೆ ಮಾಡಬೇಕೆನ್ನುವುದು ಬಹುದಿನಗಳ ಬೇಡಿಕೆಯಾಗಿದ್ದು ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭೆಯ ಕೇಂದ್ರ ಮತ್ತು ರಾಜ್ಯ ಘಟಕಗಳು ಮನವಿ ಸಹ ಮಾಡಿದ್ದು ಇದರ ಕುರಿತು ಮುಖ್ಯಮಂತ್ರಿಗಳು ಸಹ ಪಂಚ ಪೀಠಗಳು ಸೇರಿದಂತೆ ನಾಡಿನ ಮಠಮಾನ್ಯಗಳು ಆಯೋಜಿಸಿದ ಅನೇಕ ಧಾರ್ಮಿಕ ಸಭೆ, ಸಮಾರಂಭಗಳಲ್ಲಿ ಸಕಾರಾತ್ಮಕವಾಗಿ ಜಯಂತಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದು ಅದೇ ರೀತಿಯಾಗಿ ಈ ಬಾರಿಯ ಬಜೇಟ್ನಲ್ಲಿ ಜಯಂತಿ ಸರ್ಕಾರದಿಂದ ಆಚರಣೆ ಮಾಡುವಂತೆ ಘೋಷಣೆ ಮಾಡುವುದರ ಮೂಲಕ ಭಕ್ತ ಸಮೂಹದ ಬೇಡಿಕೆಯನ್ನು ಈಡೇರಿಸುವಂತೆ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರಲ್ಲಿ ಕೋರಿದ್ದಾರೆ.