ಶಹಾಬಾದ: ಜಗತ್ತಿನ ಸರ್ವರನ್ನೂ ಸಮಾನವಾಗಿ ಕಾಣುವ ಮೂಲಕ ವಿಶ್ವ ಭಾತೃತ್ವವನ್ನು ಪ್ರತಿಪಾದಿಸಿದವರು ಬಸವಣ್ಣನವರು ಎಂದು ಶಹಾಬಾದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸದಾನಂದ ಕುಂಬಾರ ಹೇಳಿದರು.
ಅವರು ಶುಕ್ರವಾರ ನಗರದ ಶಹಾಬಾದ ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ಆಯೋಜಿಸಲಾದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
12 ನೇ ಶತಮಾನ ಅದೊಂದು ಸುವರ್ಣಯುಗ. ಅಕ್ಷರ ಜ್ಞಾನವಿರದ ಎಷ್ಟೋ ಜನರಿಗೆ ಅಕ್ಷರ ಕಲಿಸಿ ವಚನಗಳನ್ನು ಬರೆಯಿಸಿದವನು ಬಸವಣ್ಣ. ಸಮಾಜದ ತಿರಸ್ಕಾರಕ್ಕೆ ಒಳಗಾದ ಹನ್ನೇರಡು ಸಾವಿರ ಸೂಳೆಯರನ್ನು ತಿಳಿ ಹೇಳಿ ಅವರನ್ನು ಶರಣೆಯರನ್ನಾಗಿ ಮಾಡಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ.ಹೊಟ್ಟೆಗೆ ಊಟ ಎಷ್ಟು ಮುಖ್ಯವೋ, ಅಷ್ಟೇ ನೆತ್ತಿಗೂ ಜ್ಞಾನ ಮುಖ್ಯ.ಅಂತಹ ಜ್ಞಾನ ಕಣಜವಾಗಿರುವ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು ನಡೆದರೇ ಸಮಾಜದಲ್ಲಿ ಪ್ರೀತಿ, ದಯೆ, ಕರುಣೆ ಉಂಟಾಗಿ ಎಲ್ಲರೂ ಒಂದಾಗಿ ಬಾಳಬಹುದು.ಆದರೆ ಇಂದು ಜಾತಿಗಳ ಮಧ್ಯೆ ದ್ವೇಷ ಬಿತ್ತುವ ಕಾರ್ಯ ನಡೆದಿದ್ದು, ಅದರಿಂದ ಹೊರಬರಬೇಕಾದರೆ ಬಸವಣ್ಣನವರ ವಿಚಾರಗಳು ನೆತ್ತಿಯೊಳಗೆ ಪ್ರವೇಶಮಾಡಬೇಕಿದೆ ಎಂದರು.
ಕಾರ್ಯದರ್ಶಿ ಶರಣಬಸಪ್ಪ ತುಂಗಳ ಮಾತನಾಡಿ, ವಚನಗಳು ನಮ್ಮ ಬದುಕಿಗೆ ದಾರಿ ದೀಪ. ಶರಣರು ನೀಡಿದ ವಚನ ಸಾಹಿತ್ಯವನ್ನು ನಾವು ತಿಳಿದುಕೊಂಡು, ಮತ್ತೊಬ್ಬರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಅಂಧಕಾರವನ್ನು ಹೋಗಲಾಡಿಸಲು ಪ್ರಯತ್ನಪಡೋಣ ಎಂದು ಹೇಳಿದರು.
ನಾಗಣ್ಣ.ಬಿ.ಪಾಟೀಲ, ಶರಣು ಜೋಗೂರ್,ಶಿವಾನಂದ ಪಾಟೀಲ, ಶರಣು ವಸ್ತ್ರದ್ ಇತರರು ಇದ್ದರು.