ಹೊಸಕೋಟೆ: ತಾಲ್ಲೂಕಿನ ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಣಿತಶಾಸ್ತ್ರದ ಪ್ರಾಧ್ಯಾಪಕ ಪ್ರೋ.ಎನ್ .ಶ್ರೀನಿವಾಸ್ ರಾವ್ ರವರಿಗೆ ಹೈಡ್ರೋ ಮ್ಯಾಗ್ನಟಿಕ್ ಕನೆಕ್ಟಿವ್ ಹೀಟ್ ಟ್ರಾನ್ಸ್ಫರ್ ಥ್ರೂ ಎ ಪೋರಸ್ ಮೀಡಿಯಂ ಇನ್ ಎ ಚಾನಲ್ ವಿಥ್ ರೇಡಿಯೇಷನ್ ಎಫೆಕ್ಟ್ ಎಂಬ ಮಹಾ ಪ್ರಬಂಧಕ್ಕೆ ಛತ್ತೀಸ್ ಗಡದ ಕಳಿಂಗ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಈ ಹಿನ್ನೆಲೆಯಲ್ಲಿ ಹೊಸಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2017-2020ನೇ ಸಾಲಿನ ಬಿ.ಎಸ್ಸಿ.ಯ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಗೌರವ ಸಮರ್ಪಣೆ ಮಾಡಿದರು.
ವಿದ್ಯಾರ್ಥಿ ಸಾಗರ್.ಬಿ.ಎಲ್. ಮಾತನಾಡಿ ನಮ್ಮ ಪ್ರೀತಿಯ ಮೇಷ್ಟ್ರು ಶ್ರೀನಿವಾಸ ಸರ್ ಇವರಿಗೆ ಛತ್ತಿಸ್ ಗಡದ ಕಳಿಂಗ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿರುವುದು ನಮ್ಮ ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ, ನಮ್ಮೆಲ್ಲರ ಬದುಕಿನ ದಾರಿಗೆ ಬೆಳಕು ಚೆಲ್ಲಿದ ನಿಮಗೆ ನಮ್ಮ ಗೌರವ ಸಮರ್ಪಣೆ, ನಿಮ್ಮ ಆದರ್ಶ ತತ್ವಗಳೇ ನಮಗೆ ದಾರಿದೀಪ, ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ನೀವು ಹೇಳಿಕೊಟ್ಟ ನೈತಿಕ ಶಿಕ್ಷಣವನ್ನು ನಾವು ಎಂದು ಮರೆಯುವುದಿಲ್ಲ, ನೀವು ಹಾಕಿಕೊಟ್ಟ ಹಾದಿಯಲ್ಲೇ ನಾವೆಲ್ಲರೂ ಸಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರೋ ಶ್ರೀನಿವಾಸ್ ರಾವ್ ರವರು ಮಾತನಾಡಿ ನನಗಿಂತ ಹೆಚ್ಚಿನ ಗೌರವ ಸನ್ಮಾನಗಳನ್ನು ನೀವು ಪಡೆದು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು, ಸದಾ ಗುರಿಯ ಕಡೆಯೇ ನಿಮ್ಮ ಗಮನವಿರಲಿ ಎಂದು ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯವಾಗಿ ಪ್ರತಿಯೊಬ್ಬರು ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು, ಸದಾ ಗುರಿಯನ್ನು ಸಾಧಿಸಲು ಪ್ರಯತ್ನ ಮಾಡಬೇಕು, ಮನುಷ್ಯ ಮನಸ್ಸು ಮಾಡಿದರೆ ಏನನ್ನೂ ಬೇಕಾದರು ಸಾಧಿಸಬಹುದು ಎಂದು ತಿಳಿಸುತ್ತಾ ಈ ನಿಮ್ಮ ಅಭಿಮಾನಕ್ಕೆ ನಾನು ಅಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಪ್ರೋ.ವೆಂಕಟೇಶಲು, ಗ್ರಂಥಾಲಯದ ಮುಖ್ಯಸ್ಥರಾದ ಮಂಜುನಾಥ್, ಹಾಗೂ ಅವರ ಅಚ್ಚುಮೆಚ್ಚಿನ ವಿದ್ಯಾರ್ಥಿಗಳಾದ ಸಾಗರ್.ಬಿ.ಎಲ್, ಸಂಜಯ್ ಕುಮಾರ್, ಭರತ್, ನಾಗಾರ್ಜುನ್, ಸುಪ್ರಿಯಾ, ಕೀರ್ತಿ, ಪ್ರವಳಿಕ, ರಫತ್ ಸಭಾ ಭಾಗವಹಿಸಿ ತಮ್ಮ ಪ್ರೀತಿಯ ಗುರುಗಳಿಗೆ ಶುಭಾಶಯ ಕೋರಿದರು.