ಕಲಬುರಗಿ: ಕೊರೊನಾ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಅದೇ ರೀತಿ ಕಲಬುರಗಿ ಜಿಲ್ಲಾದ್ಯಂತ ಕೊರೊನಾ ವೈರಾಣು ವ್ಯಾಪಕವಾಗಿ ಹರಡುತ್ತಿದ್ದು ರಾಜ್ಯ ಸರ್ಕಾರ ಸೋಂಕನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ) ದ ಕಲ್ಯಾಣ ಕರ್ನಾಟಕ ಪ್ರಧಾನ ಕಾರ್ಯದರ್ಶಿಯಾದ ಗೋಪಾಲ ನಾಟೀಕಾರ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಕಳೆದ ವರ್ಷ ಕೊರೊನಾ ಹರಡಿದ ಸಮಯದಲ್ಲಿ ಜನಪ್ರತಿನಿಧಿಗಳು , ಸಮಾಜಸೇವಕರು , ದಾನಿಗಳು ಜನಸಾಮಾನ್ಯರಿಗೆ ಆಹಾರದ ಕಿಟ್ , ತರಕಾರಿ, ಮಾಸ್ಕ್ , ಸ್ಯಾನಿಟೇಜರಗಳನ್ನು ಉಚಿತವಾಗಿ ನೀಡಿ ಮಾನವೀಯತೆ ಮೆರೆದಿದ್ದರು. ಆದರೆ ಈ ಬಾರಿ ಯಾರು ಸಹ ಮುಂದೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರ 5 ಕೆಜಿ ಅಕ್ಕಿ ಬದಲು 2 ಕೆಜಿ ಅಕ್ಕಿ ನೀಡುತ್ತಿರುವುದರಿಂದ ಆನೆಗೆ ಹಪ್ಪಳ ನೀಡಿದಂತೆ ಆಗಿದೆ. ಇದರಿಂದ ಜನಸಾಮಾನ್ಯರ ಹೊಟ್ಟೆ ಮೇಲೆ ಬರ ಎಳೆದಂತೆ ಆಗಿದ್ದು ಆಹಾರದ ಕೊರತೆ ಎದುರಾಗಲಿದ್ದು ಇದನ್ನು ತಪ್ಪಿಸಲು ಸರಕಾರ 2 ಕೆಜಿ ಅಕ್ಕಿ ಬದಲು 5 ಕೆಜಿ ಅಕ್ಕಿಯನ್ನು ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಲಬುರಗಿ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ವ್ಯಾಕ್ಸಿನೇಷನ್, ವೆಂಟಿಲೇಟರ್, ಆಕ್ಸಿಜನ್ ಮತ್ತಿತರ ಆರೋಗ್ಯ ಸಲಕರಣೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೂಡಲೇ ಸರಬರಾಜು ಮಾಡಬೇಕು ಇಲ್ಲದಿದ್ದ ಪಕ್ಷದಲ್ಲಿ ಜನಸಾಮಾನ್ಯರೊಂದಿಗೆ ಬೀದಿಗಿಳಿದು ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.