ಕೋಲಾರ: ಜಿಲ್ಲೆ ಮತ್ತು ತಾಲ್ಲೂಕಿನ ನರಸಾಪುರ ಗ್ರಾಮವನ್ನು ಕೊರೊನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೇ 24 ರವರೆಗೂ ಗ್ರಾಮ ಪಂಚಾಯಿತಿ ವತಿಯಿಂದ ಇಡೀ ನರಸಾಪುರ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ನರಸಾಪುರ ಗ್ರಾಮವು ಕೋಲಾರ ಜಿಲ್ಲೆಗೆ ಸಮೀಪದಲ್ಲಿದ್ದು, ಕೋಲಾರದ ಪ್ರಮುಖ ಕೈಗಾರಿಕಾ ಪ್ರದೇಶವಾಗಿದೆ. ಮುಖ್ಯವಾಗಿ ಹೋಂಡಾ, ವಿಸ್ಟ್ರಾನ್, ಬ್ಯಾಂಡೋ, ಸೆರೆಬ್ರಾ, ಮಹೇಂದ್ರ, ವಿಂಡೋ, ಲೂಮ್ಯಾಕ್ಸ್, ಸ್ಕ್ಯಾನಿಯ ಈಗೆ ಅನೇಕ ಕಂಪನಿಗಳು ಇದ್ದು ಪ್ರತಿದಿನ ಜಿಲ್ಲೆಯ ಹಲವು ಭಾಗಗಳಿಂದ ಹಾಗೂ ಬೇರೆ ಜಿಲ್ಲೆಗಳ, ಬೇರೆ ರಾಜ್ಯಗಳ ಸಾವಿರಾರು ಕಾರ್ಮಿಕರು, ಕೆಲಸ ಮಾಡುತ್ತಿದ್ದರು. ಪ್ರತಿದಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಜನಜಂಗುಳಿ ತುಂಬಿರುತ್ತಿತ್ತು ಹಾಗೂ ನರಸಾಪುರ ಗ್ರಾಮದಲ್ಲೂ ಜನರು ಓಡಾಟ ಹೆಚ್ಚಿರುತ್ತಿತ್ತು.
ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸುಮಾರು ಕಾರ್ಮಿಕರು, ನರಸಾಪುರ, ಕುರ್ಕಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಮಾಡುತ್ತಿದ್ದಾರೆ. ಈ ಕಾರ್ಮಿಕರಿಂದ ಹಾಗೂ ಗ್ರಾಮಸ್ಥರಿಂದ ನರಸಾಪುರ ಗ್ರಾಮದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಸುಮಾರು 300ಕ್ಕೂ ಹೆಚ್ಚು ಜನರಿಗೆ ಕೊರೊನ ಪಾಸಿಟಿವ್ ಬಂದಿದ್ದು, ಗ್ರಾಮದ ಸುರಕ್ಷತೆಗಾಗಿ ಹಾಗೂ ಜನರ ಆರೋಗ್ಯದ ಹಿತದೃಷ್ಟಿಯಿಂದ ನರಸಾಪುರ ಗ್ರಾಮ ಪಂಚಾಯಿತಿ ವತಿಯಿಂದ ಇಂದು ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ದಿನೇ ದಿನೇ ಕೋವಿಡ್ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚಾಗುತ್ತಿವೆ. ಅಲ್ಲದೆ ನರಸಾಪುರ ಹೋಬಳಿ ಕೇಂದ್ರವಾಗಿರುವುದರಿಂದ ಪ್ರತಿನಿತ್ಯ ಸುತ್ತಮುತ್ತಲಿನ ಅನೇಕ ಜನರು ನರಸಾಪುರಕ್ಕೆ ಬಂದು ಹೋಗುತ್ತಿರುತ್ತಾರೆ.
ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನರಸಾಪುರ ಗ್ರಾಮದಲ್ಲಿ ಮೇ 24ನೇ ತಾರೀಖಿನವರೆಗೆ ಆಸ್ಪತ್ರೆ, ಮೆಡಿಕಲ್ ಸ್ಟೋರ್, ನಂದಿನಿ ಹಾಲಿನ ಕೇಂದ್ರ ಬಿಟ್ಟು ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗಿದೆ. ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಮಾತ್ರ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಲಾಗಿದೆ ಗ್ರಾಮದ ಎಲ್ಲಾ ಜನರು ಲಾಕ್ ಡೌನ್ ನಿಯಮಗಳನ್ನು ಪಾಲಿಸಿ , ಈ ಕೊರೊನ ಸೋಂಕನ್ನು ತಡೆಗಟ್ಟಲು ಸಹಕರಿಸಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಚ್ ಎಂ ರವಿ, ಉಪಾಧ್ಯಕ್ಷರಾದ ಸುಮಾನ್ ಚಂದ್ರು, ಕರೋನಾ ವಾರಿಯರ್ಸಾಗಿ ಕಾರ್ಯ ನಿರ್ವಹಿಸುತ್ತಿರುವ ಕೆ ಇ ಬಿ ಚಂದ್ರು, ಕುಮಾರ್, ರಾಜೇಂದ್ರ, ಎಸ್ ಮುನಿರಾಜು, ಸುಬ್ರಮಣಿ, ಪಾನಿಪುರಿ ವೆಂಕಟೇಶ್, ಅವಿನಾಶ್ ವಿನೋದ್ ದೇವರಾಜ್ ಹಾಗೂ ಇನ್ನಿತರರು ಇದ್ದರು.