ಕರಾಳ ದಿನಗಳ ಮಧ್ಯೆ ಕಾಣದಾದರು ಹೃದಯವಂತರು: ಈ ವರ್ಷ ಎಲ್ಲಿ ಹೋದರು ದಿನಸಿ ದಾನಸೂರರು

0
56
-ಮಡಿವಾಳಪ್ಪ ಹೇರೂರ

ವಾಡಿ: ಕಳೆದ ವರ್ಷ ಇದೇ ಏಪ್ರಿಲ್ ತಿಂಗಳಲ್ಲಿ ಜನರ ಬದುಕು ಒಕ್ಕಲೆಬ್ಬಿಸಿದ್ದ ಕೊರೊನಾ ಮೊದಲ ಅಲೆ ಇಷ್ಟೊಂದು ಭೀಕರವಾಗಿರಲಿಲ್ಲ. ಆದರೂ ಬಡವರಿಗೆ ದಿನಸಿ ಹಂಚುವ ದಾನಸೂರರ ಕೊರತೆಯಿರಲಿಲ್ಲ. ಈ ವರ್ಷ ಸೋಂಕಿನ ಎರಡನೇ ಅಲೆ ಮರಣಮೃದಂಗವನ್ನೇ ಭಾರಿಸಿದ್ದು, ಕಠಿಣ ಲಾಕ್ಡೌನ್ ಘೋಷಣೆಯಿಂದ ಬಡ ಕುಟುಂಬಗಳು ಗೂಡು ಸೇರಿಕೊಂಡಿವೆ. ಸ್ಲಂ ಬಡಾವಣೆಗಳಲ್ಲಿ ಹಸಿವಿನ ಹಾಹಾಕಾರವಿದೆ.

ಭಿಕ್ಷುಕರು, ನಿರ್ಗತಿಕ ವಯೋವೃದ್ಧರು, ರೈಲು ನಿಲ್ದಾಣ-ಬಸ್ ನಿಲ್ದಾಣದ ಪ್ರಯಾಣಿಕರ ಭಿಕ್ಷೆಯನ್ನೇ ಅವಲಂಬಿಸಿದ್ದ ಅಂಗವಿಕಲರು, ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಯಾರಾದರೂ ಆಹಾರದ ಪೊಟ್ಟಣ ತಂದು ಕೊಡ್ತಾರಾ ಎಂದು ಕಾಯುತ್ತಿದ್ದಾರೆ. ವಿಪರ್ಯಸವೆಂದರೆ ಕೊರೊನಾದ ಈ ಕರಾಳ ದಿನಗಳ ಮಧ್ಯೆ ಹೃದಯವಂತರು ಕಳೆದುಹೋಗಿದ್ದಾರೆ. ದಾನಸೂರರು ಪುಣ್ಯದ ಕಾರ್ಯದಿಂದ ದೂರ ಉಳಿದಿದ್ದಾರೆ.

Contact Your\'s Advertisement; 9902492681

೨೦೨೦ರ ಏಪ್ರಿಲ್ ತಿಂಗಳಲ್ಲಿ ದಾಸೋಹಿಗಳ ದರ್ಭಾರ್ ಕಂಡುಬಂದಿತ್ತು. ಬಡವರಿಗಾಗಿ ಮಿಡಿಯುವ ಹೃದಯಗಳು ಬಿರುಬಿಸಿಲು ಲೆಕ್ಕಿಸದೆ ಅನ್ನದ ಬುತ್ತಿ ತಂದು ಹಸಿದವರ ಉದರ ತುಂಬುತ್ತಿದ್ದರು. ಕುಡಿಯಲು ನೀರು, ಹೊದಿಕೆ ಕೊಡುತ್ತಿದ್ದರು. ಭಿಕ್ಷುಕರ ಮಕ್ಕಳಿಗೆ ಬಿಸ್ಕತ್ ಹಾಲು ಹಣ್ಣು ಕೊಟ್ಟು ಮಾನವೀಯತೆ ಮರೆಯುತ್ತಿದ್ದರು. ಶಾಸಕರು, ಮಂತ್ರಿಗಳು, ಪುರಸಭೆ ಸದಸ್ಯರು, ಜಿಪಂ, ತಾಪಂ, ಗ್ರಾಪಂ ಮಟ್ಟದ ಜನಪ್ರತಿನಿಧಿಗಳು ತಾವಿದ್ದಲ್ಲಿನ ಬಡ ಕುಟುಂಬಗಳಿಗೆ ದಿನಸಿ ಕಿಟ್ ಕೊಟ್ಟು ಪತ್ರಿಕೆಗಳಿಗೆ ಫೋಜು ಕೊಡುತ್ತಿದ್ದರು.

ತಹಶೀಲ್ದಾರರು, ಪುರಸಭೆ, ಗ್ರಾಪಂ ಅಧಿಕಾರಿಗಳು ಗುಡಿಸಲು ಮನೆಗಳನ್ನು ಪಟ್ಟಿ ಮಾಡಿ ಕಿರಾಣಿ ಕಿಟ್ ಹಂಚುತ್ತಿದ್ದರು. ಮಠ, ಮಂದಿರ, ಮಸೀದಿ, ಚರ್ಚ್‌ಗಳ ಧಾರ್ಮಿಕ ಗುರುಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಲ್ಲಿ ಹುಡುಗರ ಗುಂಪು ಹೀಗೆ ಹಲವರು ಬಡವರನ್ನು ಸಾಲಾಗಿ ನಿಲ್ಲಿಸಿ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ಉಪ್ಪು, ಸಕ್ಕರೆ, ಸಾಬೂನು, ಹಲ್ಲುಪುಡಿ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ನೀಡಿ ಸೇವಾ ಮನೋಭಾವ ಮೆರೆಯುತ್ತಿದ್ದರು. ಆದರೆ ಈ ವರ್ಷ ಬಡವರ ಮನೆ ಬಾಗಿಲಿಗೆ ಒಂದೇವೊಂದು ಅಕ್ಕಿ ಕಾಳು ತಂದು ಕೊಡುವವರು ಗತಿಯಿಲ್ಲ ಎಂಬುದೇ ವಿಷಾಧನೀಯ.

ಮಹಾಮಾರಿ ಕೊರೊನಾ ಏರಡನೇ ಅಲೆಯ ಹೊಡೆತಕ್ಕೆ ಸಿಕ್ಕು ನಗರ ಪ್ರದೇಶಗಳ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಹೋಟೆಲ್‌ಗಳಲ್ಲಿ ಮುಸುರೆ ತೊಳೆಯುವವರು, ಬೀದಿ ವ್ಯಾಪಾರಿಗಳು, ಚಮ್ಮಾರರು, ಕುಂಬಾರರು, ದರ್ಜಿಗಳು, ಕನ್ನಡಿ, ಬಿದಿರು ಬುಟ್ಟಿ, ಬಾರಿಗೆ, ತೆಂಗು, ಹೂ ಮಾರುವ ಅಲೆಮಾರಿ ವ್ಯಾಪಾರಿಗಳ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಕಿಲ್ಲರ್ ಕೊರೊನಾ ವೈರಸ್‌ನಿಂದ ಜನರನ್ನು ರಕ್ಷಿಸಬೇಕೆಂಬ ಕಾರಣಕ್ಕೆ ಕರ್ಫ್ಯೂ, ಕಠಿಣ ಕರ್ಫ್ಯೂ, ಲಾಕ್ಡೌನ್ ಹೀಗೆ ಹಂತ ಹಂತವಾಗಿ ಜನರನ್ನು ಕಟ್ಟಿಹಾಕುವ ಆದೇಶಗಳನ್ನು ಹೊರಡಿಸುತ್ತಿರುವ ಸರಕಾರ, ಅಂದಿನ ಗಂಜಿ ಅಂದೇ ಹುಡುಕಿ ಬದುಕಿನ ಬಂಡಿ ನೂಕುತ್ತಿರುವ ಬಡ ಕುಟುಂಬಗಳ ಅರ್ಥಿಕ ಸ್ಥಿತಿಗತಿಗೆ ಪರಿಹಾರ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬುದು ಸಾರ್ವಜನಕರ ಆರೋಪವಾಗಿದೆಡಿಂಥಹ ಸಂಕಷ್ಟದಲ್ಲಿ ನೆರವಿಗೆ ಧಾವಿಸಬೇಕಿದ್ದ ಸಾಮಾಜಿಕ ಚಟುವಟಿಕೆಗಳಿಗೆಂದೇ ಉದಯಿಸಿರುವ ವಿವಿಧ ಸಂಘ ಸಂಸ್ಥೆಗಳೂ ಕೂಡ ಮಾನವೀಯತೆ ಮರೆತಿರುವುದು ದುರಂತ ಸಂಗತಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here