ಶಹಾಬಾದ: ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೀಡಾಗುವ ಅರ್ಚಕರು ಮತ್ತು ಪುರೋಹಿತರಿಗೆ ಪ್ಯಾಕೇಜ್ ಘೋಷಿಸುವಂತೆ ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಧರ ಜೋಷಿ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಲಾಕ್ಡೌನ್ ನೆಪದಲ್ಲಿ ಸರ್ಕಾರ ಹಾಗೂ ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟ ದೇವಾಲಯಗಳಲ್ಲಿ ಭಕ್ತರ ಪ್ರವೇಶ ಮತ್ತು ಅವರು ನಡೆಸುವ ಸೇವಾ ಕೈಂಕರ್ಯಗಳನ್ನು ಕೂಡ ಸ್ಥಗಿತಗೊಳಿಸಿದೆ.
ಹೀಗಾಗಿ ದೇವಾಲಯಗಳಲ್ಲಿನ ಅರ್ಚಕರ ಮತ್ತು ಪುರೋಹಿತರ ಬದುಕು ಬಹಳ ಶೋಚನೀಯ ವಾಗಿದೆ. ಅರ್ಚಕ ಮತ್ತು ಪುರೋಹಿತ ವೃತ್ತಿ ಮಾಡುವವರು ತಮ್ಮ ಪರಿಸ್ಥಿತಿಯನ್ನು ಹೇಳುವಂತಿಲ್ಲ. ಅನುಭವಿಸುವಂತಿಲ್ಲ ಎನ್ನುವಂತಾಗುತ್ತಿದೆ. ಸರ್ಕಾರ ಇವರ ನೆರವಿಗೆ ಬರುವ ಅಗತ್ಯತೆ ಇದೆ ಎಂದಿದ್ದಾರೆ. ಕಳೆದ ವರ್ಷ ಕೊರೊನಾದಿಂದಾಗಿ ಏಳೆಂಟು ತಿಂಗಳು ಆದಾಯವಿಲ್ಲದೆ ಅರ್ಚಕ ಮತ್ತು ಪುರೋಹಿತ ವೃತ್ತಿ ಮಾಡುವವರು ಬಹಳ ತೊಂದರೆ ಅನುಭವಿಸಿದ್ದರು.
ಈಗ ಮತ್ತೆ ಲಾಕ್ಡೌನ್ ಜಾರಿಯಲ್ಲಿದ್ದು ಮಾಸ್ಕ್, ವ್ಯಕ್ತಿ ಅಂತರ, ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಿ ವೃತ್ತಿ ಮುಂದುವರಿಸುವ ಅನಿವಾರ್ಯತೆ ಸೃಷ್ಠಿಯಾಗಿದೆ. ಹಾಗಾಗಿ ಈ ವರ್ಷವೂ ಸಹ ಕಳೆದ ವರ್ಷದಂತೆ ಆದಾಯ ನಷ್ಟವಾಗಿದೆ. ಅರ್ಚಕ ಮತ್ತು ಪುರೋಹಿತರ ವಲಯ ಮತ್ತಷ್ಟು ಸಂಕಷ್ಟಕ್ಕೆ ಈಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ನೆರವಿಗೆ ಬರುವಂತೆ ಶ್ರೀಧರ ಜೋಷಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.