ಕಲಬುರಗಿ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ ೩೩ ರಲ್ಲಿ ಹಿಂದುಳಿದ ವರ್ಗ (ಅ) ಮೀಸಲಾತಿಯನ್ನು ಘೋಷಿಸಲಾಗಿದ್ದು, ಮೀಸಲಾತಿಯನ್ನು ಪರಿಶಿಷ್ಠ ಜಾತಿ ಸಾಮಾನ್ಯ ಮೀಸಲಾತಿಯನ್ನಾಗಿ ಘೋಷಿಸದಿದ್ದರೆ ಮುಂಬರುವ ಮಹಾನಗರ ಪಾಲಿಕೆ ಚುನಾವಣೆ, ವಿಧಾನ ಸಭೆ ಹಾಗೂ ಲೋಕಸಭೆ ಚುನಾವಣೆಗಳನ್ನು ವಾರ್ಡ್ ನಂ ೩೩ ರಲ್ಲಿ ಬಹಿಷ್ಕಾರಿಸಲಾಗುವುದು ಎಂದು ಸುಂದರ ನಗರ ಬಡಾವಣೆಯ ಹಿರಿಯ ಮುಖಂಡ ಸಚೀನ್ ಫರತಾಬಾದ ಅವರು ತಿಳಿಸಿದ್ದಾರೆ.
ನಗರದ ಸುಂದರ ನಗರದಲ್ಲಿ ಶ್ರೀ. ಬಿ.ಶ್ಯಾಮಸುಂದರ ಸ್ಮಾರಕ ನಾಗರೀಕತ ಸೇವಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಅವರು, ಈಗಾಗಲೇ ಪ್ರಕಟಿಸಿರುವ ಮೀಸಲಾತಿಯು ಅವೈಜ್ಞಾನಿಕರಾಗಿರುವು ಮೇಲ್ನೋಟಕ್ಕೆ ಕಂಡು ಬಂದಿದ್ದು, ಸದರಿ ವಾರ್ಡ್ನಲ್ಲಿ ಅತೀ ಹೆಚ್ಚು ಪ್ರಾಬಲ್ಯ ಹೊಂದಿರುವ ಪರಿಶಿಷ್ಠ ಜಾತಿ ಮತದಾರರಿಗೆ ಅನ್ಯಾಯವಾಗಿದ್ದು, ಕೂಡಲೇ ಈ ಮೀಸಲಾತಿಯನ್ನು ಪುನರ್ ಪರಿಶೀಲಿಸಿ, ವಾರ್ಡ್ ನಂ. ೩೩ ರ ಪರಿಶಿಷ್ಠ ಜಾತಿ ಸಾಮಾನ್ಯ ಮೀಸಲು ಕ್ಷೇತ್ರವನ್ನಾಗಿ ಪ್ರಕಟಿಸಿ ಪರಿಶಿಷ್ಠ ಜಾತಿ ಸಮುದಾಯದ ಮತದಾರರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು.
ವಾರ್ಡ್ ನಂ.೩೩ ರಲ್ಲಿ ಸುಂದರ ನಗರ, ಬಾಪು ನಗರ, ಭರತ ನಗರ ತಾಂಡಾ, ಮಾಂಗವಾಡಿ, ಉಮರ ಕಾಲೋನಿಗಳು ಒಳಗೊಂಡಿದ್ದು, ಒಟ್ಟು ಮತದಾರರ ಸಂಖ್ಯೆಯು ೯೯೪೩ ಇದ್ದು, ಇದರಲ್ಲಿ ಪರಿಶಿಷ್ಠ ಜಾತಿ ಮತದಾರ ಸಂಖ್ಯೆಯು ೬೪೭೮ ಇದ್ದು. ಶೇ. ೭೦ ರಷ್ಟು ಇದ್ದು, ಹೆಚ್ಚಿನ ಸಂಖ್ಯೆಯಲ್ಲಿರುವ ಮತದಾರರು ಪರಿಶಿಷ್ಠ ಜಾತಿಯವರೆ ಆಗಿದ್ದಾರೆ ಆದ್ದರಿಂದ ಪ್ರಸ್ತುತ ನಿಗದಿ ಪಡಿಸಿರುವ ಮೀಸಲಾತಿಯಲ್ಲಿ ತಿದ್ದುಪಡಿಯನ್ನು ಮಾಡಬೇಕು ಎಂದರು.
ವಾರ್ಡ್ ನಂ. ೩೩ ರಲ್ಲಿ ಹಿಂದುಳಿದ ವರ್ಗ (ಅ) ಜನಸಂಖ್ಯೆಯ ಮತದಾರರು ಶೇ. ೧ ಪ್ರತಿಶತವು ಇರುವುದಿಲ್ಲ. ಆದ್ದರಿಂದ ಹಿಂದುಳಿದ ವರ್ಗ (ಅ) ಮೀಸಲಾತಿಯನ್ನು ರದ್ದು ಪಡಿಸಿ ಪರಿಶಿಷ್ಠ ಜಾತಿ ಸಾಮಾನ್ಯ ವರ್ಗ ಮೀಸಲಾತಿಯನ್ನು ತರಬೇಕು ಎಂದರು.
೨೦೧೧ ರಲ್ಲಿ ಜನಗಣತಿ ಪ್ರಕಾರ ೨೦೧೮ ರ ಹಾಗೂ ೨೦೨೧ ರ ಮರು ವಿಂಗಡಣೆಯಲ್ಲಿ ಯಾವುದೇ ಮೀಸಲಾತಿ ವ್ಯತ್ಯಾಸವಿರುವುದಿಲ್ಲ. ೨೦೧೮ ರಲ್ಲಿ ಮೀಸಲಾತಿ ಪ್ರಕಟವಾದ ವಾರ್ಡ್ ನಂ. ೪೦ ನ್ನು ಸಾಮಾನ್ಯ ಕ್ಷೇತ್ರವನ್ನಾಗಿ ಮಾಡಲಾಗಿತ್ತು. ನಂತರ ೨೦೨೧ ರಲ್ಲಿ ಮರು ವಿಂಗಡಣೆಯಲ್ಲಿ ವಾರ್ಡ್ ನಂ. ೩೩ ರಂದು ವಿಂಗಡಣೆ ಮಾಡಿ, ಈಗ ಮೀಸಲಾತಿ ಹಿಂದುಳಿದ ವರ್ಗ (ಅ) ಎಂದು ಪ್ರಕಟಿಸಲಾಗಿದೆ ಎಂದರು.
ಭೌಗೋಳಿಕವಾಗಿ ಯಾವುದೇ ವ್ಯತ್ಯಾಸವಿಲ್ಲದಿದ್ದರು ಸದರಿ ವಾರ್ಡ್ನ್ನು ಸಾಮಾನ್ಯ ಮೀಸಲು ಕ್ಷೇತ್ರದಿಂದ ಹಿಂದುಳಿದ ವರ್ಗ (ಅ) ಮಾಡಿರುವುದಕ್ಕೆ ಯಾವ ಮಾನದಂಡವನ್ನು ಹಾಗೂ ಮಾರ್ಗ ಸೂಚಿ ಅನುಸರಿಸಲಾಗಿದೆ ಗೋತ್ತಾಗುತ್ತಿಲ್ಲ ಎಂದರು. ಮುಂಬರುವ ಮೂರು ನಾಲ್ಕು ದಿನಗಳಲ್ಲಿ ಶಾಸಕರಿಗೆ, ಲೋಕಸಭಾ ಸದಸ್ಯರಿಗೆ, ಜಿಲ್ಲಾಧಿಕಾರಿಗಳಿಗೆ, ಚುನಾವಣಾಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಫರತಾಬಾದ ಹೇಳಿದರು.
ಒಂದು ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ಆಗಮಿಸಿದರೆ ಅವರಿಗೂ ಕೂಡ ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ಸಂದೀಪ ಜಿ. ದೊಡ್ಡಮನಿ, ಕಾರ್ಯದರ್ಶಿ ಶಿವಶರಣ ಎಸ್.ಹುಬಳಿ, ಮುಖಂಡರಾದ ರಾಕೇಶ ಶಿಂಧೆ, ಅನೀಲ್ ಚವ್ಹಾಣ, ಪ್ರದೀಪ್ ಬಾಜನಳ್ಳಿಕರ್ ಸೇರಿದಂತೆ ಇನ್ನಿತರರು ಇದ್ದರು.