ಸುರಪುರ: ನಗರದ ಪೊಲೀಸ್ ಠಾಣೆ ಹಿಂಬಾಗದಲ್ಲಿ ನೂತನವಾಗಿ ಆರಂಭಿಸಲಾಗಿರುವ ಡಿ.ಸಿ.ಸಿ ಬ್ಯಾಂಕ್ ಶಾಖೆಯ ಬಳಿಯಲ್ಲಿ ಸೋಮವಾರ ಬೆಳಿಗ್ಗೆ ಅನೇಕ ಜನ ಗ್ರಾಹಕರು ತಮ್ಮ ಬ್ಯಾಂಕ್ ವ್ಯವಹಾರಕ್ಕಾಗಿ ನಾಮುಂದು ತಾಮುಂದು ಎಂದು ಮುಗಿಬೀಳುವ ಮೂಲಕ ನೂಕು ನುಗ್ಗಲು ಉಂಟಾಗಿತ್ತು.
ಕಳೆದ ಅನೇಕ ದಿನಗಳಿಂದಲೂ ಈ ರೀತಿಯ ಜನಸಂದಣಿ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿದೆ.ಆದರೆ ಈ ವರೆಗೆ ಗ್ರಾಹಕರ ನಿಯಂತ್ರಣಕ್ಕಾಗಿ ಮತ್ತು ಕೊರೊನಾ ನಿಯಮಗಳ ಪಾಲನೆಗಾಗಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬೇಸರದ ಮಾತುಗಳು ಕೂಡ ಕೇಳಿ ಬರುತ್ತಿವೆ.
ಬ್ಯಾಂಕ್ನ ಸಿಬ್ಬಂದಿಗಳು ಹೊರಗಡೆ ಇದ್ದು ಗ್ರಾಹಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಅನೇಕ ಜನ ಗ್ರಾಹಕರು ಮಾಸ್ಕ್ ಧರಿಸಿರುವುದಿಲ್ಲ,ಅಲ್ಲದೆ ಸಾಮಾಜಿಕ ಅಂತರವೂ ಇರುವುದಿಲ್ಲ ಹೀಗಾದಲ್ಲಿ ಕೊರೊನಾ ನಿರ್ಮೂಲನೆ ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.ಇನ್ನಾದರು ಪೊಲೀಸ್ ಇಲಾಖೆ ನಗರಸಭೆ ಕಂದಾಯ ಇಲಾಖೆ ಎಚ್ಚೆತ್ತುಕೊಂಡು ಒಬ್ಬರು ಪೊಲೀಸರನ್ನಾದರು ನೇಮಿಸುವ ಮೂಲಕ ನೂಕುನುಗ್ಗಲು ನಿಯಂತ್ರಣಗೊಳಿಸಬೇಕಿದೆ ಎಂದು ಜನರು ಒತ್ತಾಯಿಸುತ್ತಿದ್ದಾರೆ.