ಸ್ತ್ರೀವಾದಿ, ದಿಟ್ಟ ಬರಹಗಾರ್ತಿ ಡಾ. ವೀಣಾ ಶಾಂತೇಶ್ವರರು..!

0
20

ಸ್ತ್ರೀ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದ, ಸುಶಿಕ್ಷಿತ ಮನೆತನದಲ್ಲಿ ಹುಟ್ಟಿದ ವೀಣಾ ಶಾಂತೇಶ್ವರರಿಗೆ ಮೂರನೆಯ ವರ್ಷದಲ್ಲೇ ಅಕ್ಷರಾಭ್ಯಾಸ ಮಾಡಿಸಿದ ತಂದೆ ಪ್ರೊ. ಬಲರಾಮಾಚಾರ್ಯರು ಎಲಬುರ್ಗಿಯವರು.

ಬಾಗಲಕೋಟೆಯ ಬಸವೇಶ್ವರ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರೆ, ತಾಯಿ ಇಂದಿರಾ ಮಹಾರಾಷ್ಟ್ರದ ರಾಗಿದ್ದು ಪ್ರಗತಿಪರ ಮನೋಭಾವದವರು.

Contact Your\'s Advertisement; 9902492681

ವೀಣಾ ಶಾಂತೇಶ್ವರರು ಹುಟ್ಟಿದ್ದು ಧಾರವಾಡದಲ್ಲಿ. ಪ್ರಾರಂಭಿಕ ಶಿಕ್ಷಣ ಬಾಗಲಕೋಟೆಯಲ್ಲಿ ಮುಗಿಸಿದರು. ಸ್ಕೂಲು ವಿದ್ಯಾರ್ಥಿನಿಯಾಗಿದ್ದಾಗಿನಿಂದಲೂ ಎಂ.ಎ. ಪದವಿ ಪಡೆಯುವವರೆಗೂ ರ್ಯಾಂಕ್‌ ವಿದ್ಯಾರ್ಥಿನಿ ಈ ವೀಣಾ ಶಾಂತೇಶ್ವರರು.

ಶಾಲೆಯಲ್ಲಿದ್ದಾಗಲೇ ಕಾಲ್ಪನಿಕ ಕಥೆಗಳನ್ನು ಬರೆಯುತ್ತಿದ್ದರು. ಕಥೆಗಳು ‘ಕತೆಗಾರ’ ಪತ್ರಿಕೆಯಲ್ಲಿ ಪ್ರಕಟಗೊಳ್ಳತೊಡಗಿದವು.

ಮರಾಠಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ತಾಯಿ ಇಂದಿರಾರವರು ತಿಲಕ್‌, ಕರ್ವೆ, ಕಾನಡೆ, ಗೋಖಲೆ ಮುಂತಾದವರ ಬರಹಗಳಿಂದ ಪ್ರಭಾವಿತರಾದವರು. ಮಹಿಳಾ ಶಿಕ್ಷಣ, ಮಹಿಳಾ ಸ್ವಾತಂತ್ರ್ಯ, ಮರಾಠಿ ಪ್ರಗತಿಪರ ಸಾಹಿತ್ಯ ಇವರ ಆಸಕ್ತ ವಿಷಯಗಳಾಗಿದ್ದು, ಮಗಳ ಮೇಲೂ ಇದು ಪರಿಣಾಮ ಬೀರಿತು.

ಕಾಲೇಜು ದಿನಗಳಿಂದಲೇ ಒಂದು ರೀತಿಯ ಸ್ತ್ರೀ ಪರ, ಪ್ರತಿಭಟನಾತ್ಮಕ ಧೋರಣೆಯನ್ನು ರೂಢಿಸಿಕೊಂಡಿದ್ದು ತಮ್ಮೆಲ್ಲ ಬರಹಗಳಲ್ಲಿಯೂ ವ್ಯಕ್ತಪಡಿಸುತ್ತಾ ಬಂದಿದ್ದಾರೆ ಅವರು.

ಸಾಮಾಜಿಕ ಜಾತೀಯ ಸಮಸ್ಯೆ, ವರದಕ್ಷಿಣೆ ಪಿಡುಗು, ಅಂತರ್ ಜಾತಿಯ ವಿವಾಹ-ಹೀಗೆ ಬರೆದ ಲೇಖನಗಳು ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪ್ರಕಟಗೊಂಡವು.

ಇವರ ಮೊದಲ ಕಥಾ ಸಂಕಲನ ‘ಮುಳ್ಳುಗಳು’ ೧೯೬೭ರಲ್ಲಿ ಪ್ರಕಟಗೊಂಡಾಗ ಸಾಹಿತ್ಯ ಲೋಕದ ಗಮನ ಸೆಳೆದರು.

ಬಿ.ಎ. ಹಾಗೂ ಎಂ.ಎ (ಇಂಗ್ಲಿಷ್‌) ಮೊದಲ ರ್ಯಾಂಕ್‌ನಿಂದ ಪದವಿ ಪಡೆದದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ. ಹೈದರಾಬಾದಿನ ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಂಗ್ಲಿಷ್‌ನಿಂದ ಇಂಗ್ಲಿಷ್‌ ಲ್ಯಾಂಗ್ವೇಜ್‌ ಟೀಚಿಂಗ್‌ನಲ್ಲಿ ELT ಸ್ನಾತಕೋತ್ತರ ಡಿಪ್ಲೊಮ, ಎಂ.ಲಿಟ್‌ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ. ಪದವಿ ಗಳಿಸಿದರು.

ಹೈಸ್ಕೂಲು ವಿದ್ಯಾರ್ಥಿನಿಯಾಗಿದ್ದ ಸಂದರ್ಭದಲ್ಲಿ ಬರೆದ ಕಥೆಗಳಲ್ಲಿ ವಸ್ತು ಸ್ವಂತದಿಂದ ಕೂಡಿದ್ದರೂ ನಿರೂಪಣೆ ಮತ್ತು ತಂತ್ರದಲ್ಲಿ ಅನುಕರಣೆ ಇರುತ್ತಿತ್ತು. ಆದರೆ ವಸ್ತು ಕ್ರಾಂತಿಕಾರಕ ವಿಚಾರ ಸರಣಿಯಿಂದ ಕೂಡಿ, ಕಥೆಗಳಲ್ಲಿನ ನಾಯಕಿಯರು ಅನ್ಯಾಯ, ಅತ್ಯಾಚಾರದ ವಿರುದ್ಧ ನಡೆಸಿದ ಹೋರಾಟದಲ್ಲಿ ಯಶಸ್ವಿಯಾಗುತ್ತಿದ್ದರು.

ಮುಂದೆ ಕಾಲೇಜು ಸೇರಿದಾಗ ಓದಿನ ಹರಿವು ದೊಡ್ಡದಾಗಿ, ವಿಚಾರ ಸರಣಿಯುಳ್ಳ ಲೇಖಕರಿಂದ ಪ್ರಭಾವಿತರಾದರು. ಶಾಂತಿನಾಥ ದೇಸಾಯಿಯವರ ‘ಮುಕ್ತಿ’ ಕಾದಂಬರಿ ಇವರ ಮೇಲೆ ಹೆಚ್ಚು ಪ್ರಭಾವ ಬೀರಿತು. ಇದರ ಅಂದಿನ ಕಥೆಗಳಲ್ಲಿ ಸಾಮಾಜಿಕ ಅನಿಷ್ಟಗಳ ಬಗ್ಗೆ ಪ್ರತಿಭಟಿಸುವ, ಅನ್ಯಾಯವನ್ನು ವಿರೋಧಿಸುವ ಗುಣಗಳಿದ್ದರೂ ಕಥಾನಾಯಕಿಗೆ ಸೋಲು, ಅಪನಿಂದೆಗಳಿಗೆ ಎದುರಾದರೂ ಆಕೆ ಧೈರ್ಯಗುಂದುತ್ತಿರಲಿಲ್ಲ.

ಹೀಗೆ ಬರೆದ ಕಥೆಗಳ ಸಂಕಲನ ‘ಮುಳ್ಳುಗಳು’ ಪ್ರಥಮ ಕಥಾ ಸಂಕಲನ ೧೯೬೭ರಲ್ಲಿ ಪ್ರಕಟಗೊಂಡಿತು. ನಂತರ ಬಂದ ಕಥಾ ಸಂಕಲನಗಳು ‘ಕೊನೆಯ ದಾರಿ’ (೧೯೭೨), ‘ಕವಲು’ (೧೯೭೬), ‘ಹಸಿವು’ (೧೯೮೪), ‘ಬಿಡುಗಡೆ’ (೧೯೯೪) ಕೃತಿಗಳು ಮುಂತಾದವುಗಳು ಬಂದವು.

‘ನಡೆದದ್ದೇ ದಾರಿ’ ಇವರ ಸಮಗ್ರ ಕಥನ ಸಾಹಿತ್ಯ ೨೦೦೬ರಲ್ಲಿ ಪ್ರಕಟವಾಯಿತು. ೧೯೭೫ರಲ್ಲಿ ಪ್ರಜಾವಾಣಿ ಕಾದಂಬರಿ ಸ್ಪರ್ಧೆಯಲ್ಲಿ ‘ಗಂಡಸರು’ ಕಿರು ಕಾದಂಬರಿಗೆ ಪ್ರಥಮ ಬಹುಮಾನ ಪಡೆದರು. ಇವರ ಮತ್ತೊಂದು ಕಾದಂಬರಿ ‘ಶೋಷಣೆ, ‘ಬಂಡಾಯ’ ಇತ್ಯಾದಿ ಇವರು ಹಲವಾರು ವಿಮರ್ಶಾ ಕೃತಿಗಳನ್ನು ರಚಿಸಿದ್ದರು, ಮಹಿಳಾ ಸಾಹಿತ್ಯದಲ್ಲಿ ವೈಚಾರಿಕತೆ, ಕನ್ನಡ ಸಣ್ಣ ಕಥೆಗಳಿಗೆ ಮಹಿಳೆಯರ ಕೊಡುಗೆ, ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ, ಲೇಖಕಿಯರ ಸಮಸ್ಯೆಗಳು, ಕನ್ನಡ ಲೇಖಕಿಯರ ‘ಸಾಧನೆ-ಸಾಧ್ಯತೆಗಳು’.

ಮಹಿಳಾ ಜಾಗೃತಿ, ಮಹಿಳೆಯರು ಮತ್ತು ಪೊಲೀಸರು, ಮಹಿಳಾ ಸಾಮಾಜಿಕ ಕಾರ್ಯಕರ್ತೆಯರು, ಪ್ರಮುಖವಾದವಾದ ಕೃತಿಗಳು.

ಇವಲ್ಲದೇ ‘ಹೊಸಹೆಜ್ಜೆ’ (ಕಾವ್ಯ) ಮಹಿಳೆಯರ ಸಣ್ಣ ಕಥೆಗಳು, ಅಭಿವ್ಯಕ್ತಿ, ಮಹಿಳಾ ಅಧ್ಯಯನ, ಸ್ವಾತಂತ್ಯ್ರೋವದ ಕಾಲದಲ್ಲಿ ಮಹಿಳೆಯರ ಸಣ್ಣ ಕಥೆಗಳು ಮುಂತಾದವುಗಳನ್ನು ಸಂಪಾದಿಸಿದರು. ‘ಅದೃಷ್ಟ’ ಇವರು ಅನುವಾದಿಸಿರುವ ಅಮೆರಿಕನ್‌ಇಂಗ್ಲಿಷ್‌ ಕಥೆಗಳು. ನದೀ ದ್ವೀಪಗಳು (ಆಜ್ಞೇಯರ ಹಿಂದಿ ಕಾದಂಬರಿ). ಇಂಗ್ಲಿಷ್‌ ಹಾಗೂ ಫ್ರೆಂಚ್‌ ಭಾಷೆಗೂ ಅನುವಾದಗೊಂಡಿರುವ ಇವರ ಕಥೆಗಳ ಪೈಕಿ ‘ಅವಳ ಸ್ವಾತಂತ್ರ್ಯ’ ನ್ಯೂಯಾರ್ಕಿನ ಫೆಮಿನಸ್ಟ್‌ ಪ್ರೆಸ್’ ವಿಶ್ವದ ಅತ್ಯುತ್ತಮ ಮಹಿಳಾ ಬರಹಗಾರ್ತಿಯರು’ ಶ್ರೇಣಿಯಲ್ಲಿ ಪ್ರಕಟಿಸಿ ಗೌರವಿಸಿದೆ. ಇಂಗ್ಲಿಷ್‌ ಫ್ರೆಂಚ್‌ ಅಲ್ಲದೇ ಕೊಂಕಣಿ, ಉರ್ದು, ತಮಿಳು, ತೆಲುಗು, ಮಲಯಾಳಂ, ಗುಜರಾತಿ ಮತ್ತು ಸಿಂಧಿ ಭಾಷೆಗೂ ಅನುವಾದಗೊಂಡಿದೆ.

ಸ್ತ್ರೀವಾದಿ, ದಿಟ್ಟ ಬರಹಗಾರ್ತಿಯನ್ನರಸಿಕೊಂಡು ಬಂದಿರುವ ಪ್ರಶಸ್ತಿಗಳು ಹಲವಾರು. ‘ಕವಲು’ ಕಥಾ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೭೬), ‘ಹಸಿವು’ ಕಥಾಸಂಕಲನಕ್ಕೆ ಮಾತೋ ಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ (೧೯೮೪), ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೮೮), ಅನುಪಮಾ ಪ್ರಶಸ್ತಿ (೧೯೯೬), ನದೀ ದ್ವೀಪಗಳು ಅನುವಾದ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೨೦೦೨), ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (೨೦೦೫) ಮತ್ತು ೨೦೧೧ರಲ್ಲಿ ಮಾಸ್ತಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಗೌರವಗಳು ದೊರೆತಿವೆ.

ಇದಿಷ್ಟು ವೀಣಾ ಶಾಂತೇಶ್ವರ ಅವರ ಬದುಕು ಮತ್ತು ಬರಹ..!

# ಕೆ.ಶಿವು.ಲಕ್ಕಣ್ಣವರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here