ಕಲಬುರಗಿ: ಆಳಂದ ತಾಲೂಕಿನ ಧಂಗಾಪುರದಲ್ಲಿ ದನಕರುಗಳಿಗೆ ಮೇವು ಹಾಕಲು ಹೋಗಿ ಕಬ್ಬಿನ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ಜೆಸ್ಕಾಂ ಮೇನ್ ಲೈನ್ ತುಂಡಾಗಿ ಬಿದ್ದಿದ್ದನ್ನು ತುಳಿದು ಶ್ರೀಖಂಡೆ ರೈತ ಕುಟುಂಬದ ಅಜ್ಜ ಹಾಗೂ ಮೊಮ್ಮಗನ ದಾರುಣ ಸಾವಿನ ಘಟನೆಗೆ ಗುಲ್ಬರ್ಗ ವಿದ್ಯುಚ್ಚಕ್ತಿ ಸರಬರಾಜು ಕಂಪನಿಯ ಇಂಜಿನಿಯರ್ಗಳ ಅಲಕ್ಷತನವೇ ಕಾರಣ ಎಂದು ಆಕ್ರೋಶ ಹೊರಹಾಕಿರುವ ಕೆಪಿಸಿಸಿ ಸದಸ್ಯ ಹಣಮಂತ ಭೂಸನೂರ್ ಸದರಿ ಘಟನೆಯ ಹೊಣೆ ಹೊರುವ ಮೂಲಕ ಜೆಸ್ಕಾಂ ನೊಂದ ಕುಟುಂಬದ ವಾರಸುದಾರರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಆಳಂದದಲ್ಲಿ ಜೆಸ್ಕಾಂ ಅಲಕ್ಷತನ ಅದೆಷ್ಟಿದೆ ಎಂದರೆ ಹೊಲಗದ್ದೆಗಳಲ್ಲಷ್ಟೇ ಅಲ್ಲ, ಜನ ವಾಸವಾಗಿರುವ ಊರುಗಳಲ್ಲೂ ವಿದ್ಯುತ್ ಕಂಬಗಲ ತಂತಿಗಳು ಜೋತು ಬಿದ್ದರೂ ಕೇಲೋರಿಲ್ಲದಂತಾಗಿದೆ. ಹೊಲಗದ್ದೆಗಳಲ್ಲಿ ಕಂಬ, ವೈರ್ಗಳ ನಿರ್ವಹಣೆಯೇ ಜೆಸ್ಕಾಂ ಮಾಡುತ್ತಿಲ್ಲ. ಕೇವಲ ಕಾಗದದಲ್ಲೇ ನಿರ್ವಹಣೆ, ಜಂಗಲ್ ಕಟ್ಟಿಂಗ್ನಂತಹ ಕೆಲಸಗಳನ್ನು ಮಾಡಿ ಮುಗಿಸಿ ಹಣ ಗುಳುಂ ಮಾಡಲಾಗುತ್ತಿದೆ. ಇದಕ್ಕೆ ಅಲ್ಲಿ ಕೆಲಸ ಮಾಡುವ ತಾಲೂಕಿನ ಉಪ ವಿಭಾಗಗಳ, ವಿದ್ಯುತ್ ಸ್ಟೇಷನ್ಗಳ ನಿರ್ವಹಣಾ ಸಿಬ್ಬಂದಿ, ಇಂಜಿನಿಯರ್ಗಳೇ ಕಾರಣ. ಇಂತಹ ಸಾವು- ನೋವಿನ ಘಟನೆಗಳಿಗೆ ಸಂಬಂಧಪಟ್ಟಂತಹ ಪ್ರದೇಶದ ಇಂಜಿನಯರ್, ಲೈನ್ಮನ್ರನ್ನೇ ಹೊಣೆಗಾರರನ್ನಾಗಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದೂ ಹಣಮಂತ ಭೂಸನೂರ್ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಆಗ್ರಹಿಸಿದ್ದಾರೆ.
ಮುಂಗಾರು ಹಂಗಾಮು ಶುರುವಾಗಿದೆ, ಜೊತೆಗೇ ಹೊಲಗದ್ದೆಗಳಲ್ಲಿ ರೈತರು ತೋಟಗಾರಿಕೆ ಮಾಡಿರುತ್ತಾರೆ. ಇಂತಹ ಸಮಯದಲ್ಲಿ ಕಂಬುಗಳು, ವೈರಿಂಗ್ ಸರಿಯಾಗಿ ಇರುವ ಬಗ್ಗೆ ಜೆಸ್ಕಾಂ ಎಲ್ಲೆಡೆ ಸಂಚರಿಸಿ ಪರಿಶೀಲನೆ ನಡೆಸಬೇಕು. ಮಳೆ, ಗಾಳಿ ಜೋರಾಗಿ ಬೀಸುವ ಈ ದಿನಗಳಲ್ಲಿ ತಂತಿ ಕಡಿದು ಬೀಳುವ ಸಾಧ್ಯತೆಗಳು ಹೆಚ್ಚು. ಇವನ್ನೆಲ್ಲ ಪರಿಹರಿಸಲು ಜೆಸ್ಕಾಂ ಸಿಬ್ಬಂದಿ ಆಳಂದ ತಾಲೂಕಿನಾದ್ಯಂತ ತಮ್ಮ ಹೊಣೆಗಾರಿಕೆ ನಿಭಾಯಿಸಿದರೆ ಮಾತ್ರ ಸಾಧ್ಯ ಎಂದು ಭೂಸನೂರ್ ಅಭಿಪ್ರಾಯಪಟ್ಟಿದ್ದಾರೆ.
ನೀರಾವರಿ ಪಂಪ್ಸೆಟ್ಗಳಿರುವ ಭಾಗದಲ್ಲಿ ಟಿಸಿ ಸುಟ್ಟರೆ ತಕ್ಷಣ ಬದಲಾವಣೆ ಆಗೋದಿಲ್ಲ, ರೈತರು ಹಣ ಕೊಟ್ಟರೆ ಮಾತ್ರ ಕೆಲ್ಸ, ಇಲ್ಲದೆ ಹೋದಲ್ಲಿ ತಿಂಗಳು, 2 ತಿಂಗಳಾದರೂ ಟಿಸಿ ದುರಸ್ಥಿ ಆಗೋದಿಲ್ಲ, ಈ ರೂಪದಲ್ಲಿ ಜೆಸ್ಕಾಂ ಆಳಂದ ರೈತರಿಗೆ ಕಿಕುಳ ನೀಡುತ್ತಿದೆ. ಹೀಗಿದ್ದರೂ ರೈತರು ಸಹಿಸಿಕೊಂಡಿದ್ದಾರೆ. ಇನ್ನಾದರೂ ಜೆಸ್ಕಾಂ ಹಿರಿಯ ಅದಿಕಾರಿಗಳು ಆಳಂದನತ್ತ ಮುಖ ಮಾಡಿ ಅಲ್ಲಿನ ಅಧಿಕಾರಿಗಳ ಅಲಕ್ಷನದಿಂದ ಸಂಭವಿಸಿರುತ್ತಿರುವ ರೈತರ ಸಾವು- ನೋವು, ರೈತ ಕುಟುಂಬಕ್ಕೆ ಆಗುತ್ತಿರುವ ಕಿರುಕುಳ ತಪ್ಪಿಸಲಿ ಎಂದು ಹಣಮಂತ ಭೂಸನೂರ್ ಒತ್ತಾಯಿಸಿದ್ದಾರೆ.