ಸುರಪುರ: ನಗರದಲ್ಲಿ ಕಳೆದ ಅನೇಕ ತಿಂಗಳುಗಳಿಂದ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಮಲಗಿ ವಾಹನ ಸವಾರರಿಗೆ ತೊಂದರೆಯುಂಟು ಮಾಡುತ್ತಿದ್ದ ಬೀಡಾಡಿ ದನಗಳ ಹಾವಳಿಗೆ ಬ್ರೇಕ್ ಹಾಕಲು ಶುಕ್ರವಾರ ರಾತ್ರಿ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿ ಅವರ ನೇತೃತ್ವದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆಸಿ ಎಲ್ಲಾ ಜಾನುವಾರುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ಮಾಡಿದ್ದಾರೆ.
ಶುಕ್ರವಾರ ಸಂಜೆ ಡಿವೈಎಸ್ಪಿ ವೆಂಕಟೇಶ ಹುಗಿಬಂಡಿಯವರು ಪಿಎಸ್ಐ ಚಂದ್ರಶೇಖರ ನಾರಾಯಣಪುರ ಹಾಗು ಸಿಬ್ಬಂದಿಗಳೊಂದಿಗೆ ಆಗಮಿಸಿ ಮೊದಲು ಮಹಾತ್ಮ ಗಾಂಧಿ ವೃತ್ತದಲ್ಲಿರುವ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ಗರುಡದ್ರಿ ಕಲಾಮಂದಿರ ಆವರಣಕ್ಕೆ ಓಡಿಸಿಕೊಂಡು ಹೋಗಿ ನಿಲ್ಲಿಸಲಾಯಿತು.ನಂತರ ಬಸ್ ನಿಲ್ದಾಣದಲ್ಲಿ ಮಲಗಿದ್ದ ಹದಿನೈದಕ್ಕೂ ಹೆಚ್ಚು ಜಾನುವಾರುಗಳನ್ನು ಓಡಿಸಿಕೊಂಡು ಬರಲಾಯಿತು.ನಂತರ ಎಲ್ಲವುಗಳನ್ನು ಗರುಡಾದ್ರಿ ಕಲಾ ಮಂದಿರದ ಆವರಣದಲ್ಲಿ ಸೇರಿಸಿ ನಂತರ ಮಾತನಾಡಿದ ವೆಂಕಟೇಶ ಹುಗಿಬಂಡಿಯವರು,ಜಾನುವಾರುಗಳ ಮಾಲೀಕರು ತಮ್ಮ ತಮ್ಮ ದನಗಳನ್ನು ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳದೆ ಹೀಗೆ ಬೇಕಾಬಿಟ್ಟಿಯಾಗಿ ಬಿಡುವುದರಿಂದ ವಾಹನ ಸವಾರರಿಗೆ ತೀವ್ರ ತೊಂದೆರೆಯುಂಟಾಗುತ್ತಿದೆ.ಅಲ್ಲದೆ ಅಪಘಾತಗಳು ಸಂಭವಿಸುತ್ತವೆ.ಆದರೆ ಇವುಗಳ ಮಾಲೀಕರು ಇಂತಹ ಯಾವ ಸಂಗತಿಯ ಬಗ್ಗೆ ಯೋಚನೆ ಮಾಡದೆ ಬಿಡುತ್ತಾರೆ.ಇವುಗಳ ಮಾಲೀಕರ ಮೇಲೆ ಕೆಪಿ ಯಾಕ್ಟ್ ಪ್ರಕಾರ ದಂಡ ಹಾಕಲು ಅವಕಾಶವಿದೆ ಎಂದು ತಿಳಿಸಿದರು.
ನಂತರ ರಾಯಚೂರಿನ ಗೋಶಾಲೆಯನ್ನು ಸಂಪರ್ಕಿಸಿ ಜಾನುವಾರುಗಳನ್ನು ತೆಗೆದುಕೊಂಡು ಹೋಗಲು ತಿಳಿಸಲಾಯಿತು. ರಾತ್ರಿಯಿಡೀ ಅಲ್ಲೆ ಉಳಿದುಕೊಂಡ ಪೊಲೀಸ್ ಸಿಬ್ಬಂದಿಗಳು,ನಂತರ ರಾತ್ರಿ ಜ್ಯೋತಿರ್ಲಿಂಗೇಶ್ವರ ಗೋಶಾಲೆ ಆಲ್ಕೂರು ರಾಯಚೂರು ತಾಲೂಕು ಇಲ್ಲಿಯ ವಾಹನಗಳು ಜಾನುವಾರಗಳನ್ನು ತೆಗೆದುಕೊಂಡು ಹೋಗಲು ಬಂದ ನಂತರ ಬೆಳಗಿನ ಜಾವ ಎಲ್ಲಾ ಜಾನುವಾರುಗಳನ್ನು ಸಾಗಿಸಿದ್ದಾರೆ.ಒಟ್ಟು ೪೧ ಜಾನುವಾರುಗಳನ್ನು ಕಳುಹಿಸಲಾಗಿದ್ದು ಇನ್ನೂ ಎಲ್ಲಿಯಾದರು ಕಂಡುಬಂದರೆ ಅವುಗಳನ್ನು ಬೇರೆಡೆ ಕಳುಹಿಸುವುದಾಗಿ ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಪಿಎಸ್ಐ ಚಂದ್ರಶೇಖರ ನಾರಾಯಣಪುರ ಸೇರಿದಂತೆ ಅನೇಕ ಜನ ಪೊಲೀಸ್ ಸಿಬ್ಬಂದಿಗಳಿದ್ದರು.