ಶಹಾಬಾದ:ನಗರದಲ್ಲಿ ಗುರುವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಸುಮಾರು 2 ಗಂಟೆಗಳ ಕಾಲ ಏಕಾಏಕಿ ಸುರಿದ ಭಾರಿ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಭಾರಿ ಅವಾಂತರ ಸೃಷ್ಠಿಸಿತು.
ಜಿಟಿ ಜಿಟಿಯಾಗಿ ಆರಂಭವಾದ ಮಳೆ ಏಕಾಏಕಿ ತನ್ನ ರುದ್ರ ನರ್ತನ ತೋರಿಸಿದ ಪರಿಣಾಮ ಮುಖ್ಯ ರಸ್ತೆ ಸೇರಿದಂತೆ ಪಟ್ಟಣದಲ್ಲಿ ಹಲವೆಡೆ ಚರಂಡಿಗಳು ತುಂಬಿ ರಸ್ತೆಗೆ ಹರಿದ ದೃಶ್ಯಗಳು ಕಂಡು ಬಂದವು.
ಕೆರೆಯಂತಾದ ಮುಖ್ಯರಸ್ತೆ: ನಗರದಲ್ಲಿ ಸಾಯಂಕಾಲ ಸುರಿದ ಭಾರಿ ಮಳೆಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ತಗ್ಗುಗಳು ಬಿದ್ದಿದ್ದು ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿಗಳನ್ನು ಕೆಲ ದಿನಗಳ ಹಿಂದೆ ತಾತ್ಕಾಲಿಕವಾಗಿ ಮುಚ್ಚಲಾಗಿತ್ತಾದರೂ ಶುಕ್ರವಾರÀ ಸುರಿದ ಮಳೆಗೆ ಮತ್ತಷ್ಟು ಗುಂಡಿಗಳಾಗಿದ್ದು ರಸ್ತೆಯಲ್ಲಿ ಸಂಚರಿಸುವುದು ಕಷ್ಟ ಸಾಧ್ಯವಾಗಿತ್ತು.
ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ರಸ್ತೆ ಅಕ್ಕ ಪಕ್ಕದಲ್ಲಿ ಪಕ್ಕಾ ಚರಂಡಿಗಳು ಇಲ್ಲದ ಕಾರಣ ಹಾಗೂ ಚರಂಡಿ ಇದ್ದರೂ ಅವು ರಸ್ತೆಯಿಂದ ಮೂರು ಅಡಿಗಳಷ್ಟು ಎತ್ತರ ಇರುವುದರಿಂದ ನೀರೆಲ್ಲಾ ರಸ್ತೆಗೆ ಹರಿದು ರಸ್ತೆಯೆಲ್ಲಾ ಕೆರೆಯಂತೆ ಭಾಸವಾಗುತ್ತಿತ್ತು. ಮುಖ್ಯ ರಸ್ತೆಯಲ್ಲಿ ಮಳೆ ನೀರು ಚರಂಡಿ ಹೋಗಲು ಯಾವುದೇ ಹಾದಿ ಇಲ್ಲದ ಕಾರಣ ಪ್ರತಿ ಬಾರಿ ಮಳೆ ಬಂದಾಗ ರಸ್ತೆಯ ಮೇಲೆ ನೀರು ನಿಲ್ಲುತ್ತದೆ.ಇದರಿಂದ ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ.ಅಲ್ಲದೇ ಕೋಟಿಗಟ್ಟಲೇ ಹಣ ಖರ್ಚು ಮಾಡಿದ ಡಾಂಬರೀಕರಣ ರಸ್ತೆಯ ಮೇಲೆ ನೀರು ನೀಮತು ರಸ್ತೆಯೂ ಹಾಳಾಗುತ್ತಿದೆ. ಈಗಾಗಲೇ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗಿದ್ದು, ಮತ್ತೆ ಮಳೆಯಿಂದ ಹಾಳಾಗುತ್ತಿದ್ದರೂ ಗುತ್ತಿಗೆದಾರ ಮಾತ್ರ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾನೆ.
ಟೀಚರ್ ಕಾಲೋನಿ ನೀರಿನಿಂದ ಜಲಾವೃತ : ನಗರದ ಹೊನಗುಂಟಾ ರಸ್ತೆಗೆ ಹೊಂದಿಕೊಂಡಿರುವ ಟಿಚರ್ ಕಾಲೋನಿಯಲ್ಲಿ ಚರಂಡಿ ನಿರ್ಮಾಣ ಮಾಡದಿರುವುದರಿಂದ ಮಳೆ ನೀರೆಲ್ಲಾ ಪಕ್ಕದಲ್ಲೆ ಇರುವ ಖಾಲಿ ಜಾಗಗಳಲ್ಲಿ ನಿಲ್ಲುವುದರಿಂದ ಕಾಲೋನಿ ಸಂಪೂರ್ಣ ಜಲಾವೃತವಾಗಿದೆ. ಇದರಿಂದ ಕಾಲೋನಿಯ ಜನರು ಚರಂಡಿ ನಿರ್ಮಾಣ ಮಾಡಿ ನಗರಸಭೆಯವರು ನಮ್ಮ ನಮ್ಮ ಸಮಸ್ಯೆಯನ್ನು ದೂರ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕಳಪೆ ರಸ್ತೆ ಹಾಳು: ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಕಳಪೆ ಕಾಮಗಾರಿಯಿಂದಲೇ ಹಾಳಾಗಿ ಹೋಗಿರುವ ಬೆನ್ನಲ್ಲೇ, ಶುಕ್ರವಾರ ಸುರಿದ ಮಳೆಯಿಂದ ಮತ್ತೆ ತೆಗ್ಗುಗಳು ಉಂಟಾಗಿ ಕಳಪೆ ಮಟ್ಟದ ಕಾಮಗಾರಿಗೆ ನಿದರ್ಶನ ನೀಡಿದಂತಾಗಿದೆ. ಕೇವಲ 1 ಕಿಮೀ ರಸ್ತೆ ಕಾಮಗಾರಿಯೇ ಮುಗಿದಿಲ್ಲ. ಈಗಾಗಲೇ ಎಲ್ಲಿ ನೋಡಿದರಲ್ಲಿ ಗುಂಡಿಗಳು ಕಾಣಸಿಗುತ್ತಿವೆ. ಸುಮಾರು ನಾಲ್ಕು ಕೋಟಿ ಹದಿನೇಳು ಲಕ್ಷ ರೂ. ಕಾಮಗಾರಿಯೂ ಕಳಪೆಯಿಂದ ಕೂಡಿರುವುದರಿಂದ ಹಳ್ಳ ಹಿಡಿದಿರುವ ದೃಶ್ಯಗಳು ಮಾತ್ರ ಎಲ್ಲರಿಗೂ ಕಂಡು ಬರುತ್ತಿವೆ.