ಸುರಪುರ: ನಗರದ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿ ಒದಗಿಸಿಕೊಡುವಂತೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಆಗ್ರಹಿಸಿದ್ದಾರೆ.
ಈ ಕುರಿತು ನಗರ ಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಶನಿವಾರ ಮನವಿ ಸಲ್ಲಿಸಿರುವ ಜಾಲವಾದಿಯವರು,ನಿವೇಶನ ಮಂಜೂರು ಮಾಡುವಂತೆ ಕಳೆದ ಮಾರ್ಚ್ 02 ರಂದು ನಗರಸಭೆ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಮನವಿ ಮಾಡಲಾಗಿತ್ತು.ಅಲ್ಲದೆ ಅದೇ ಮಾರ್ಚ್ 04 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆಯನ್ನೂ ಪಡೆದಿರುವುದಾಗಿ ತಿಳಿಸಿದ್ದೀರಿ.ಆದರೆ ನಂತರದಲ್ಲಿ ಏನಾಯಿತು ಎನ್ನುವುದರ ಬಗ್ಗೆ ಮಾಹಿತಿ ತಿಳಿಯುತ್ತಿಲ್ಲ.ಆದ್ದರಿಂದ ಆದಷ್ಟು ಬೇಗನೆ ನಿವೇಶನ ಮಂಜೂರು ಮಾಡಬೇಕು.
ಈಗಾಗಲೇ ಯಾದಗಿರಿ ನಗರ,ಶಹಾಪುರ,ಗುರುಮಿಠಕಲ್,ಹುಣಸಗಿ ಹಾಗು ವಡಗೇರಾದಲ್ಲಿ ಕಸಾಪ ಭವನಗಳಿದ್ದು ಐತಿಹಾಸಿಕ ಹಿನ್ನೆಲೆಯುಳ್ಳ ಸುರಪುರ ನಗರದಲ್ಲಿ ಇಲ್ಲದಿರುವುದು ಶೋಭೆ ತರುವ ವಿಷಯವಲ್ಲ.ಆದ್ದರಿಂದ ಆದಷ್ಟು ಬೇಗನೆ ನಿವೇಶನ ಮಂಜೂರು ಮಾಡಿ ಭವನ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡುವ ಮೂಲಕ ಕನ್ನಡ ಸಾಹಿತ್ಯಾಸಕ್ತರ ಮತ್ತು ಕನ್ನಡಭಿಮಾನಿಗಳ ಮನವಿಗೆ ಸ್ಪಂದಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.