ಕಲಬುರ್ಗಿ: ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಕರ್ನಾಟಕ ರಾಜ್ಯದ ಬಡ ರೈತರ ಮಕ್ಕಳಿಗೆ ಶಿಷ್ಯವೇತನ, ವಿಧವಾ ಮಹಿಳೆಯರಿಗೆ, ವಿಕಲಚೇತನರಿಗೆ ಹೆಚ್ಚಿಗೆ ಮಾಶಾಸನ, ಸಮಾಜದ ಕಟ್ಟಕಡೆಯ ಮನುಷ್ಯನಿಗೆ ಮುಖ್ಯವಾಹಿನಿಗೆ ತರುವ ಭರವಸೆ, ರಾಜ್ಯದ ಇಲಾಖಾವಾರು ಕಡತಗಳು ಹದಿನೈದು ದಿನಗಳೊಳಗೆ ವಿಲೇವಾರಿ ಆಗಬೇಕು ಎಂದು ವಿಧಾನಸೌಧದಲ್ಲಿ ಪ್ರಥಮ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದ್ದು ಶ್ಲಾಘನೀಯ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ಯಾಮರಾವ್ ಪ್ಯಾಟಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯದ ಜನ ಕಲ್ಯಾಣ ಕಾರ್ಯಕ್ರಮದ ಏಳಿಗೆಗಾಗಿ ಒಳ್ಳೆಯ ಸ್ಟಾಂಪ್ ಆಗುತ್ತೇನೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದು ಅವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಎಲ್ಲ ಸಚಿವ ಸಂಪುಟ ಸಹುದ್ಯೋಗಿಗಳು ಮತ್ತು ಉನ್ನತಾಧಿಕಾರಿಗಳು ಸೇರಿದಂತೆ ಎಲ್ಲರೂ ಒಂದು ತಂಡವಾಗಿ ಸರ್ಕಾರದ ಕೆಲಸ ನಿರ್ವಹಿಸಲು ಕಾಳಜಿ ವಹಿಸಬೇಕು ಎಂದು ಸೂಚಿಸಿರುವುದು ಉತ್ತಮ ಆಡಳಿತದ ಮುನ್ಸೂಚನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರ ನಿರ್ಮೂಲನೆಗೆ ನೂತನ ಮುಖ್ಯಮಂತ್ರಿಗಳು ಒತ್ತು ಕೊಟ್ಟಿದ್ದಾರೆ. ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರುವುದರ ಜೊತೆಗೆ ಮತ್ತೊಬ್ಬರ ಹಸ್ತಕ್ಷೇಪವನ್ನು ತಡೆಯುವ ದಿಸೆಯಲ್ಲಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ.
ಪ್ರಾಮಾಣಿಕತೆಗೆ ಹೆಸರಾದ ಹಿಂದಿನ ಮುಖ್ಯಮಂತ್ರಿ ದಿ. ಎಸ್.ಆರ್. ಬೊಮ್ಮಾಯಿ ಅವರು ೧೯೮೯ರಲ್ಲಿ ರಾಷ್ಟ್ರಪತಿ ಆಡಳಿತ ಹೇರಿದಾಗ ಬೊಮ್ಮಾಯಿ ಅವರ ಪ್ರಶ್ನೆಗೆ ಸುಪ್ರಿಂಕೋರ್ಟ್ ಎಸ್.ಆರ್. ಬೊಮ್ಮಾಯಿ ಅವರ ಪರವಾಗಿ ಐತಿಹಾಸಿಕ ತೀರ್ಪು ನೀಡಿತು. ಅದನ್ನು ಬೊಮ್ಮಾಯಿ ಅವರು ಗಣನೆಗೆ ತೆಗೆದುಕೊಳ್ಳಲಿಲ್ಲ.
ಈಗ ಅವರ ಸುಪುತ್ರ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಮೊದಲ ಸುದ್ದಿಗೋಷ್ಠಿಯಲ್ಲಿ ಪ್ರಾಮಾಣಿಕತೆಗೆ ಒತ್ತು ಕೊಟ್ಟಿದ್ದು ಸರ್ಕಾರದ ಕೆಲಸ ದೇವರ ಕೆಲಸ ಎಂದ ಹಾಗೆ ದೇಶದ ಅಜಾತಶತೃ ಅಟಲ್ ಬಿಹಾರಿ ವಾಜಪೇಯಿ ಅವರಂತೆ, ಪ್ರಧಾನಿ ನರೇಂದ್ರ ಮೋದಿ ಅವರಂತೆ ಅವರ ಮಾರ್ಗದಲ್ಲಿ ನಡೆಯುವ ಎಲ್ಲ ಸೂಚನೆಗಳು ಕಂಡುಬರುತ್ತಿವೆ ಎಂದು ಪ್ಯಾಟಿ ಅವರು ಹೇಳಿದ್ದಾರೆ.