ಆಳಂದ: ಡಿಸಿಸಿ ಬ್ಯಾಂಕ್ಗಳ ವ್ಯಾಪ್ತಿಯಲ್ಲಿ ಕಾರ್ಯರ್ನಿಹಿಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘದ ಗ್ರಾಹಕ ಸದಸ್ಯರು ಪಡೆದ ಸಾಲವನ್ನು ಸಕಾಲಕ್ಕೆ ಪಾವತಿಸುವ ಮೂಲಕ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಲು ಮುಂದಾಗಬೇಕಾಗಿದೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಹೇಳಿದರು.
ತಾಲೂಕಿನ ನಿರಗುಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬೆಳೆ ಸಾಲ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಕಷ್ಟದಲ್ಲಿರುವ ಎಲ್ಲಾ ರೈತರಿಗೆ ಸರ್ಕಾರ ಪತ್ತಿನ ಸಂಘಗಳ ಮೂಲಕ ಬೆಳೆ ಸಾಲವನ್ನು ಒದಗಿಸಬೇಕು. ರೈತರು ಸಹ ತಮ್ಮ ಆರ್ಥಿಕ ಸಂಕಷ್ಟವನ್ನು ನಿವಾರಿಸಿದಲು ಮೊದಲು ಆರ್ಥಿಕ ಶಿಸ್ತನ್ನು ರೂಡಿಸಿಕೊಳ್ಳಬೇಕು. ಯಾವ ಉದ್ದೇಶಕ್ಕಾಗಿ ಸಾಲವನ್ನು ಪಡೆಯಲಾಗಿದೆ. ಆ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿ ಸಕಾಲಕ್ಕೆ ಪಾವತಿಸಿದರೆ ಮುಂದೆ ಹೆಚ್ಚಿನ ಸಾಲವನ್ನು ಪಡೆಲು ಅನುಕೂಲವಾಗುತ್ತದೆ ಎಂದರು.
ಕಲಬುರಗಿ ಹಾಗೂ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಅವರು ಮಾತನಾಡಿ, ನಿರಗುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ೩೧ ರೈತರಿಗೆ ತಲಾ ೨೫ ಸಾವಿರ ರೂಪಾಯಿಗಳಂತೆ ಒಟ್ಟು ೫೦ ಲಕ್ಷ ರೂ. ಬೆಳೆ ಸಾಲ ವಿತರಣೆಗೆ ಸೂಚಿಸಲಾಗಿದದೆ. ಇದಕ್ಕೆ ಡಿಸಿಸಿ ನಿರ್ದೇಶಕ ಅಶೋಕ ಸಾವಳೇಶ್ವರ ಮತ್ತು ಸಿದ್ಧಣ್ಣ ಎಂ. ದೇಶಮುಖ ಅವರ ಪರಿಶ್ರಮ ಅಡಗಿದೆ ಎಂದರು.
ಈ ಸಂಘದ ವ್ಯಾಪ್ತಿಯ ನಿರಗಡಿ, ಮಟಕಿ ಮತ್ತು ತೀರ್ಥ ಗ್ರಾಮದ ೫೦೦ ಮಂದಿ ಸದಸ್ಯರಿಗೆ ಬೆಳೆ ಸಾಲ ಹಂಚಿಕೆಯ ಗುರಿಯನ್ನು ಹೊಂದಲಾಗಿದೆ. ರೈತರು ಸಾಲವನ್ನು ಪಡೆದು ಸದ್ಭಳಕೆ ಮಾಡಿಕೊಂಡು ಸಕಾಲಕ್ಕೆ ಪಾವತಿಸಿದರೆ ಮುಂದೆ ಶೂನ್ಯ ಬಡ್ಡಿದರದಲ್ಲಿ ೩ ಲಕ್ಷ ರೂ.ಗಳ ಸಾಲವನ್ನು ವಿತರಣೆಗೆ ಕ್ರಮಕೈಗೊಳ್ಳಲಾಗುವುದು. ಡಿಸಿಸಿ ಬ್ಯಾಂಕ್ನಿಂದ್ ಕೇವಲ ರೈತರಿಗೆ ಅಷ್ಟೇ ಅಲ್ಲದೆ ಸಣ್ಣ-ಪುಟ್ಟ ವ್ಯಾಪಾರಿಗಳಿಗೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆಗೂ ಸಾಲವನ್ನು ನೀಡುವ ಮೂಲಕ ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಉತ್ತೇಜನಕ್ಕೆ ಮುಂದಾಗಿದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಮಾತನಾಡಿ, ಡಿಸಿಸಿ ಬ್ಯಾಂಕ್ ಆರ್ಥಿಕ ಸಂಕಷ್ಟದಲ್ಲಿದ್ದರು ಸಹ ನಬಾರ್ಡ್ ಸೇರಿ ಅನ್ಯ ಮೂಲಗಳಿಂದ ಹಣವನ್ನು ಪಡೆದು ರೈತರಿಗೆ ನೀಡುವ ಪ್ರಯತ್ನ ಮಾಡುತ್ತಿದೆ. ಈ ಬ್ಯಾಂಕ್ ಜೀವಂತ ಉಳಿಸಿ ಬೆಳೆಸಲು ಪಡೆದ ಸಾಲವನ್ನು ಸಕಾಲಕ್ಕೆ ಪಾವತಿಸಿದರೆ ಮಾತ್ರ ಬ್ಯಾಂಕ್ನೊಂದಿಗೆ ರೈತರ ಆರ್ಥಿಕ ಸ್ಥಿತಿಗೆ ಸಹಕಾರಿಯಾಗುತ್ತದೆ. ಆದರೆ ಸಾಲ ಪಡೆದ ರೈತರು ಸಹ ಸಕಾಲಕ್ಕೆ ಮರುಪಾವತಿ ಕೈಗೊಂಡರೆ ಬ್ಯಾಂಕ್ಗಳಿಂದ ಮುಂದಿನ ದಿನಗಳಲ್ಲಿ ಆರ್ಥಿಕ ವ್ಯವಹಾರಕ್ಕೆ ಅನುಕೂಲವಾಗುತ್ತದೆ. ಬ್ಯಾಂಕ್ ಹಾಗೂ ಗ್ರಾಹಕರ ನಡುವೆ ಪರಸ್ಪರ ಉತ್ತಮ ಸಂಬಂಧವನ್ನು ಸುಸುತ್ರವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿದ್ಧರಾಮ ಎಂ. ದೇಶಮುಖ, ಸಾನ್ನಿಧ್ಯ ವಹಿಸಿದ್ದ ಬಮ್ಮಲ್ಲಿಂಗ ಪಟ್ಟದೇವರು ಮಾತನಾಡಿದರು. ಡಿಸಿಸಿ ಮಾಜಿ ಉಪಾಧ್ಯಕ್ಷ ಹಿರೋಳಿಯ ಶಂಕರರಾವ್ ವಿ. ದೇಶಮುಖ, ಜಿಪಂ ಮಾಜಿ ಸದಸ್ಯ ಮಲ್ಲಿನಾಥ ಪಾಟೀಲ ಮದಗುಣಕಿ, ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಧರ್ಮರಾಜ ಸಾಹು, ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಮಲ್ಲಪ್ಪ ಹತ್ತರಕಿ, ರಾಜಶೇಖರ ಪಾಟೀಲ ಚಿತಲಿ, ಅನಿಲ ರಾಜೋಳೆ ಹೊದಲೂರ, ಸರಸಂಬಾದ ಪಂಡಿತ ಜಿಡಗೆ, ಮಲ್ಲಿನಾಥ ಪಾಟೀಲ ಹಿತ್ತಲಶಿರೂರ, ಡಿಸಿಸಿ ಶಾಖಾ ವ್ಯವಸ್ಥಾಪಕ ರಾಜು ಕೋರೆ ಮತ್ತಿತರು ಉಪಸ್ಥಿತರಿದ್ದರು.
ಆರ್ಥಿಕ ಕ್ರಾಂತಿಗೆ ಕೃಷಿ ಪತ್ತಿನ ಸಂಘವು ನಾಂದಿ ಹಾಡಲಿ: ಬಿ.ಆರ್
ಈ ವೇಳೆ ೩೧ರೈತರಿಗೆ ೫೦ ಲಕ್ಷ ರೂ.ಗಳ ಸಾಲದ ಚೆಕ್ಅನ್ನು ನೀಡಲಾಯಿತು. ಇದೇ ವೇಳೆ ಪ್ರಗತಿಪರ ರೈತ ಸಂಜು ಕೋರೆ ಮತ್ತು ರಾಮ ಪಾರಾಣೆ ತೀರ್ಥ ಅವರಿಗೆ ಸನ್ಮಾನಿಸಲಾಯಿತು.
ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳು, ಸದಸ್ಯರು ಸೇರಿ ನೆರೆ ಹೊರೆಯ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.
ಶಂಕರರಾವ್ ದೇಶಮುಖ ಸ್ವಾಗತಿಸಿದರು. ಮೃತ್ಯುಂಜಯ ಪಾಟೀಲ ನಿರೂಪಿಸಿದರು. ಯುವ ಮುಖಂಡ ಆನಂದ ದೇಶಮುಖ ವಂದಿಸಿದರು.