ಕಲಬುರಗಿ: ಸಮಾಜ ಸುಧಾರಕರು ಜಗಜ್ಯೋತಿ ಬಸವಣ್ಣನವರನ್ನು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಪಮಾನ ಮಾಡಿದ ಆರೋಪಿಗಳನ್ನೂ ಶೀಘ್ರ ಬಂಧಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರೂಗಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಅಯ್ಯಪ್ಪ ರಾಮತೀರ್ಥ ಅವರು ಆಗ್ರಹಿಸಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂಗ್ಲೆಂಡ್ ದೇಶದಲ್ಲಿ ನೆಲೆಸಿದ ಭಾರತೀಯ ಮೂಲದ ಕುಮಾರ ಕುಂಟಿನಮಠ ಹಾಗೂ ಡಾ. ವಿಜಯೇಂದ್ರರಾವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಸವೇಶ್ವರರ ಹಾಗೂ ಡಾ. ಬಿ. ಆರ್ ಅಂಬೇಡ್ಕರ್ ಅವರ ಕುರಿತು ಕೀಳು ಮನೋಭಾವನೆಯ ಪದಗಳನ್ನು ಬಿತ್ತರಿಸಿ, ಅವರಿಗೆ ಅಪಮಾನ ಮಾಡಿದ್ದಾರೆ.
ಈ ಕುರಿತಾಗಿ ಕಲಬುರಗಿಯ ಸೈಬರ್ ಕ್ರೈಂ ಪೆÇಲೀಸ್ ಠಾಣೆಗೆ ದೂರು ನೀಡಿದರೂ ಅವರ ವಿರುದ್ಧ ಇನ್ನೂವರೆಗೂ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ದೇಶದ ಮಹಾನ್ ಪರುಷರ ಕುರಿತಾಗಿ ಅವಹೇಳನಕಾರಿ ಸಂದೇಶ ಬಿತ್ತರಿಸುತ್ತಿರುವ ಮಾಹಿತಿಯನ್ನು ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ಕನ್ನಡಿಗ ಡಾ. ನೀರಜ್ ಪಾಟೀಲ್ ಅವರು ನಮ್ಮನ್ನು ಮಾಹಿತಿ ನೀಡಿದ್ದಾರೆ, ಈ ಕುರಿತಾಗಿ ಅಲ್ಲಿಯೂ ಸಹ ಡಾ. ನೀರಜ್ ಪಾಟೀಲ್ರು ದೂರು ದಾಖಲಿಸಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಅಯ್ಯಪ್ಪ ರಾಮತೀರ್ಥ ರವರು ತಿಳಿಸಿದರು.
ಲಂಡನ್ನಿನ ಥೇಮ್ಸ್ ನದಿ ದಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ ಮಹಾತ್ಮ ಬಸವೇಶ್ವರರ ಪುತ್ಥಳಿಯ ಬಗ್ಗೆ ಅಲ್ಲಿನ ಬಸವಣ್ಣನ ಫೌಂಡೇಷನ್ ಹಾಗೂ ಸದಸ್ಯರ ಬಗ್ಗೆ ವ್ಯಂಗ್ಯವಾಗಿ ಸಂದೇಶಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಕುಮಾರ ಕುಂಟಿನಮಠದ ಹಾಗೂ ಡಾ. ವಿಜಯೇಂದ್ರರಾವ್ ಅವರು ಮಾಡುತ್ತಿದ್ದಾರೆಂದು ಹೇಳಿದರು.
ಈ ಘಟನೆಗಳಿಂದ ಬಸವಾನುಯಾಯಿಗಳಿಗೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ರವರ ಅನುಯಾಯಿಗಳ ಭಾವನೆಗೆ ಧಕ್ಕೆಯಾಗಿದ್ದು, ಕೂಡಲೇ ಆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ನೇಲೋಗಿ, ಹುಚ್ಚೇಶ್ವರ ವಠಾರ ಇದ್ದರು.