ಶಹಾಬಾದ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಲಿಕಾ ಮನೋಭಾವವನ್ನಿಟ್ಟುಕೊಂಡು ಹೆಚ್ಚು ಹೆಚ್ಚು ವಿಷಯಗಳನ್ನು ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದರೆ ಮಾತ್ರ ನಿರ್ದಿಷ್ಟ ಗುರಿ ಮುಟ್ಟಲು ಸಾಧ್ಯ ಎಂದು ಭಂಕೂರ ಗ್ರಾಪಂ ಸದಸ್ಯ ಈರಣ್ಣ ಕಾರ್ಗಿಲ್ ಹೇಳಿದರು.
ಅವರು ಸೋಮವಾರ ಭಂಕೂರ ಗ್ರಾಮದ ಪ್ರಕಾಶ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಉಚಿತ ಪಠ್ಯ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬದುಕಿನ ಕೊನೆ ಉಸಿರಿರುವವರೆಗೂ ವಿದ್ಯೆಯನ್ನು ಸಂಪಾದಿಸುತ್ತಲೇ ಇರಬೇಕು.ಕಲಿತ ವಿದ್ಯೆಯನ್ನು ಸಮಾಜದ ಹಿತಕ್ಕೆ ಬಳಸಬೇಕು. ಆಗ ಮಾತ್ರ ಬದುಕಿನ ಸಾರ್ಥಕತೆ ದೊರೆಯುತ್ತದೆ ಎಂದು ಹೇಳಿದರಲ್ಲದೇ ವಿದ್ಯಾರ್ಥಿಗಳು ಎಷ್ಟೇ ಎತ್ತರಕ್ಕೆ ಬೆಳೆದರೂ ಜೀವನದಲ್ಲಿ ಶಿಸ್ತು, ಸಂಯಮದಿಂದ ಕಲಿತು ಹೆತ್ತವರಿಗೆ , ಕಲಿಸಿದವರ ಹೆಸರನ್ನು ತರುವಲ್ಲಿ ಎಂದಿಗೂ ಮರೆಯಬಾರದು ಎಂದು ಹೇಳಿದರು.
ಸರ್ಕಾರ ತಮಗೆ ನೀಡಿರುವ ಯೋಜನೆಗಳ ಸದ್ಭಳಕೆ ಮಾಡಿಕೊಳ್ಳಬೇಕು. ಅಲ್ಲದೇ ಗ್ರಾಮೀಣ ಭಾಗದಲ್ಲಿ ಲಸಿಕೆ ಬಗ್ಗೆ ತಪ್ಪುಗ್ರಹಿಕೆಗೆ ವ್ಯಾಪಕಪಡಿಸಲಾಗಿದೆ.ಅದನ್ನು ತಾವುಗಳು ಮನೆಯ ಕುಟುಭದವರಿಗೆ ತಿಳಿ ಹೇಳಿ ಪಾಲಕರಿಗೆ ಕಡ್ಡಾಯವಾಗಿ ಲಸಿಕೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿ. ಕರೋನಾವನ್ನು ದೂರವಿರಿಸಲು ಪ್ರತಿಯೊಬ್ಬ ವಿದ್ಯಾರ್ಥಿನಿ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಪ್ರಕಾಶ ಅಂಬೇಡ್ಕರ್ ಶಾಲೆಯ ಮುಖ್ಯಗುರು ಚಂದ್ರಶೇಖರ ಗಾರಂಪಳ್ಳಿ, ಶಿಕ್ಷಕರಾದ ಶರಣಮ್ಮ ಪುರಾಣಿಕ್, ಗುರುಶಾಂತಪ್ಪ ನಾಟೇಕಾರ, ಸುರೇಶ ಕಾಂಬಳೆ, ಪಿ.ಡಿ.ಜೈನ್,ಪ್ರವೀಣಕುಮಾರ ಹೇರೂರ ಹಾಗೂ ಗುಮಾಸ್ತೆ ಸುನಂದಾ ಇತರರು ಇದ್ದರು.