ಮನದ ಮೈಲಿಗೆ ತೊಳೆದ ಮಡಿವಾಳ ಮಾಚಿದೇವ: ಡಾ. ದಯಾನಂದ ಅಗಸರ

0
70

ಶಹಾಪುರ: ಸಮಾಜದಲ್ಲಿ ಶಾಂತಿ, ಭರವಸೆ, ತಂಗಾಳಿ ತರಬೇಕಾಗಿದ್ದ ಮಾತುಗಳು ಇಂದು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದ್ದು, ಮಾತಿನಿಂದಲೇ ಪ್ರಸಕ್ತ ವಿದ್ಯಮಾನಗಳು ಜರುಗುತ್ತಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ, ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ನುಡಿದರು.

ನಗರದ ಲಿಂ. ಸಿದ್ದಪ್ಪ ಆರಬೋಳ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೇಂದ್ರ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ದೇಸಾಯಿಗೌಡ ಮತ್ತು ಮಡಿವಾಳಪ್ಪಗೌಡ ಪೊಲೀಸ್ ಪಾಟೀಲ ದರ್ಶನಾಪುರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಗೊಂದಲದ ಗೂಡಾದ ಸನ್ನಿವೇಶದಿಂದಾಗಿ ಸಂಕೀರ್ಣವಾಗುತ್ತಿರುವ ಬದುಕಿನ ಸವಾಲುಗಳಿಗೆ ಶರಣರ ವಚನಗಳು ಆತ್ಮಸ್ಥೈರ್ಯ ತುಂಬುವಂತಿವೆ. ಬದುಕುವುದಕ್ಕೆ ಬೇಕು ಬದುಕುವ ಈ ಮಾತು ಎನ್ನುವಂತಿವೆ ಎಂದು ಹೇಳಿದರು.

Contact Your\'s Advertisement; 9902492681

ಹೋಮ-ಹವನದ ಹಂಗಿಲ್ಲದ ಪೂಜಾರಿ-ಪುರೋಹಿತರ ಕಾಟವಿಲ್ಲದ ಶರಣ ಚಳವಳಿ ಮಾನವ ಘನತೆಯನ್ನು ಎತ್ತರಿಸಿದ ಚಳವಳಿಯಾಗಿದೆ. ವ್ಯಕ್ತಿ ಮೂಲಕ ಸಮಷ್ಠಿಯಲ್ಲಿ ಸಾರ್ವಜನಿಕ,ಸಾಮೂಹಿಕ ಪ್ರಜ್ಞೆ ಉಂಟು ಮಾಡಿರುವುದು ಲೋಕ ಸೋಜಿಗ ಚಳವಳಿ ಎಂದು ಅವರು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ. ದಯನಾಂದ ಅಗಸರ ಅವರು ಮಡಿವಾಳ ಮಾಚಿದೇವರ ಕುರಿತು ಉಪನ್ಯಾಸ ನೀಡಿ, ಶರಣರ ಬಟ್ಟೆಗಳನ್ನು ಮಡಿ ಮಾಡುತ್ತಿದ್ದ ಮಾಚಿದೇವರು, ಮನದ ಮೈಲಿಗೆ ಕಳೆದರು. ಕಲ್ಯಾಣ ಕ್ರಾಂತಿಯ ನಂತರ ಉಳಿದ ಶರಣರು ಮತ್ತು ಅವರ ರಚನೆಯ ವಚನಗಳನ್ನು ಸಂರಕ್ಷಿಸಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ ಎಂದರು.

ಮುಗ್ಧ ಮನಸ್ಸಿನ, ಬಿಚ್ಚು ಹೃದಯದ ಮಡಿವಾಳ ಮಾಚಿದೇವರು ಸಮಕಾಲೀನ ವಿಚಾರಗಳ ಕಟು ವಿಮರ್ಶಕರಾಗಿದ್ದರು. ಮಾಚಿದೇವರ ಮನೆ (ಬದುಕು) ವಿಚಾರಕ್ಕಿಂತ ಅವರ ಮನದ (ಬೋಧನೆ) ವಿಚಾರ ತಿಳಿದುಕೊಳ್ಳುವ ಉದ್ದೇಶದಿಂದ ವಿಜಯಪುರದ ಅಕ್ಕಮಾಹದೇವಿ ಇಲ್ಲವೇ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಕಾರ್ಯ ಸರ್ಕಾರದ ಮಟ್ಟದಲ್ಲಿ ನಡೆದಿದೆ ಎಂದು ತಿಳಿಸಿದರು.

ಸಿದ್ಧಲಿಂಗೇಶ್ವರ ಬೆಟ್ಟದ ರುದ್ರಪಶುಪತಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಗರ ನಾಡು ವಿದ್ಯಾ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಆರಬೋಳ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಂಗಡಿ, ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಕದಳಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ರುದ್ರಪ್ಪ ಚಟ್ರಕಿ, ದತ್ತಿ ದಾನಿಗಳಾದ ಬಾಪುಗೌಡ ಪಾಟೀಲ, ಬಸನಗೌಡ ಪೊಲೀಸ್ ಪಾಟೀಲ ವೇದಿಕೆಯಲ್ಲಿದ್ದರು. ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಣ್ಣ ಪಡಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಸಿದ್ಧಲಿಂಗಪ್ಪ ಆನೇಗುಂದಿ, ಚಂದಪ್ಪ ತಾಯಮ್ಮಗೋಳ್, ಪರ್ವತರೆಡ್ಡಿ, ಸಿದ್ಧರಾಮ ಹೊನ್ಕಲ್, ಡಾ. ಶಿವರಂಜನ್ ಸತ್ಯಂಪೇಟೆ, ಬಸನಗೌಡ ಸುಬೇದಾರ, ಮಲ್ಲಣ್ಣ ಸಿರವಾಳ ಹೊಸಮನಿ, ಡಾ. ಎಸ್. ಎಸ್. ನಾಯಕ, ಡಾ. ಭೀಮರಾಯ ಲಿಂಗೇರಿ, ಅಡಿವೆಪ್ಪ ಜಾಕಾ, ಬಸವರಾಜ ಹಿರೇಮಠ, ಬಸನಗೌಡ ಮರ್ಕಲ್, ಬಸವರಾಜ ಹೇರುಂಡಿ, ಮಾಣಿಕರೆಡ್ಡಿ ಗೋಗಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here