ಶಹಾಬಾದ:ಮನೆಯಿಲ್ಲದವರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಪ್ರಧಾನ ಮಂತ್ರಿ ಆವಾಸ ಯೋಜನೆ ಸಾರ್ವಜನಿಕರಿಗೆ ಬಹಳಷ್ಟು ಸಹಕಾರಿಯಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.
ಅವರು ಶನಿವಾರ ನಗರಸಭೆ ವತಿಯಿಂದ ನಗರದ ಎಸ್.ಎಸ್.ಮರಗೋಳ ಕಾಲೇಜಿನಲ್ಲಿ ಆಯೋಜಿಸಲಾದ ಪ್ರಧಾನ ಮಂತ್ರಿ ಆವಾಸ ಯೋಜನೆ-ನಗರ ಹೌಸಿಂಗ್ ಫಾರ್ ಆಲ್ ಯೋಜನೆಯಡಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಕ್ರೀಡಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ನಗರದ ಶಾಲಾ-ಕಾಲೇಜುಗಳಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆಯ ಮೂಲ ಉದ್ದೇಶವನ್ನು ಎಲ್ಲರಿಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತೆ, ಕಾಲೇಜು ಮಟ್ಟದಲ್ಲಿ ಕ್ರೀಡಾ ಸ್ಪರ್ಧೆ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಯೋಜನೆ ಬಗ್ಗೆ ತಿಳಿಸಲಾಗುತ್ತಿದೆ. ಅಲ್ಲದೇ ಈ ಯೋಜನೆಯಿಂದ ಮನೆ ಕಟ್ಟಿಕೊಳ್ಳಲು ಸಬ್ಸಿಡಿ ಇದೆ ಎಂದು ಪಾಲಕರಿಗೆ ತಿಳಿಸಿ ಎಂದು ಹೇಳಿದರು.
ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಪ್ರಧಾನ ಮಂತ್ರಿ ಆವಾಸ ಯೋಜನೆ ಮುಖಾಂತರ ಪ್ರತಿ ಕುಟುಂಬಕ್ಕೂ ಮನೆ ಸಿಗುವಂತಾಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದ್ದು, ಅದನ್ನು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲವು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದೆವೆ.ಕೇಂದ್ರದ ಸಹಾಯದೊಂದಿಗೆ ನಗರ ಸ್ಥಳೀಯ ಸಂಸ್ಥೆಗಳು, ಬ್ಯಾಂಕಗಳ ಸಹಯೋಗದಲ್ಲಿ ನಿರ್ಮಿಸಲಾಗುತ್ತಿದೆ.ಅಲ್ಲದೇ ಸಬ್ಸಿಡಿ ಕೂಡ ಇದ್ದು, ಸಾರ್ವಜನಿಕರು ಈ ಯೋಜನೆಯ ಲಾಭ ಪಡೆಯಬೇಕೆಂದು ಹೇಳಿದರು.
ನಗರಸಭೆಯ ಉಪಾಧ್ಯಕ್ಷೆ ಸಲೀಮಾ ಬೇಗಂ,ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಪಾರ್ವತಿ ಪವಾರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುಜಾಮಿಲ್ ಅಲಂ,ಕಲಬುರಗಿಯ ಡಿಯುಡಿಸಿ ಸಾಮಾಜಿಕ ಅಭಿವೃದ್ಧಿ ಅಧಿಕಾರಿ ಗೀತಾ ಹುಡುಗಿ,ಡಿಯುಡಿಸಿ ಅಧಿಕಾರಿ ರೋಹಿಣಿ, ಎಸ್.ಎಸ್.ಮರಗೋಳ ಕಾಲೇಜಿನ ಪ್ರಾಂಶುಪಾಲ ಅನೀಲಕುಮಾರ ಕೊಪ್ಪಳಕರ್,ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಸಮುದಾಯ ಸಂಘಟಕ ಅಧಿಕಾರಿ ರಘುನಾಥ ನರಸಾಳೆ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ,ಉಪನ್ಯಾಸಕ ಗುರಲಿಂಗಪ್ಪ ತುಂಗಳ,ಮಹ್ಮದ್ ಇರ್ಫಾನ್ ಸೇರಿದಂತೆ ಅನೇಕರು ಇದ್ದರು.