ಶಹಾಬಾದ:ಎರಡು ತಿಂಗಳಿನಿಂದ ಕಟ್ಟಡದ ಸುತ್ತಲೂ ಸುತ್ತುವರೆದ ನೀರು, ಬಿದ್ದ ಕಂಪೌಂಡ ಗೋಡೆ, ಆವರಣದೊಳಗೆ ದಟ್ಟವಾಗಿ ಬೆಳೆದ ಜಾಲಿ ಹಾಗೂ ಕಂಟಿ ಮರಗಳು, ಬಾಗಿಲು ಯಾವಾಗ ತೆರೆಯುತ್ತಾರೆ ಎಂದು ಕಾದು ಕುಳಿತ ದುರಾವಸ್ಥೆಯ ಆಗರವಾದ ಪಶು ಆಸ್ಪತ್ರೆಯ ಕಟ್ಟಡದ ದುಸ್ಥಿತಿ ಹೇಳುತ್ತಿದೆ. ಹೌದು. ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದ ಪಶು ಆಸ್ಪತ್ರೆಯ ನೋಟ.
ಸತತವಾಗಿ ಎರಡು ಮೂರು ತಿಂಗಳಿನಿಂದ ಸುರಿದ ಮಳೆಯಿಂದ ಪಶು ಆಸ್ಪತ್ರೆಯ ಸುತ್ತಲೂ ನೀರು ಆವರಿಸಿಕೊಂಡಿದೆ. ಮೊಳಕಾಲುದ್ದ ನೀರು ಸಂಗ್ರಹಣೆಯಾಗಿರುವುದರಿಂದ ಹೋಗಲು ಆಗದಂತ ಸ್ಥಿತಿಯಾಗಿದೆ.ಅಲ್ಲದೇ ಮುಳ್ಳು ಕಂಟಿಗಳು, ಹುಲ್ಲು, ಜಾಲಿ ಗಿಡಗಳು ಬೆಳೆದು ಕಾಡಿನಂತಾಗಿದೆ.ಅಲ್ಲದೇ ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ.ಎರಡು ತಿಂಗಳಿನಿಂದ ಇಲ್ಲಿನ ಪಶು ಆಸ್ಪತ್ರೆಯ ಪಶು ವೈದ್ಯ ಪರೀಕ್ಷಕರು ವರ್ಗಾವಣೆಯಾಗಿ ಹೋಗಿದ್ದಾರೆ.ಸದ್ಯ ಅಲ್ಲಿ ಯಾರು ಇಲ್ಲದ ಕಾರಣ ಭಂಕೂರ ಗ್ರಾಮದ ಸಿಬ್ಬಂದಿಯೊಬ್ಬರನ್ನು ತಾತ್ಕಾಲಿವಾಗಿ ನಿಯೋಜಿಸಲಾಗಿದೆ. ಅವರು ಕಾಟಮ್ಮದೇವರ ಹಳ್ಳಿ ಹಾಗೂ ಇತರ ಗ್ರಾಮಕ್ಕೆ ಬೇಟಿ ನೀಡಲು ಹೋದಾಗ ಇಲ್ಲಿನ ರೈತರು ಜಾನುವಾರಿಗಳಿಗೆ ಚಿಕಿತ್ಸೆ ಕೊಡಿಸಲು ಪರದಾಡುವಂತಾಗಿದೆ.
ಮಳೆಗಾಲ ಹಾಗೂ ಚಳಿಗಾಲದಲ್ಲಿ ಜಾನುವಾರುಗಳಿಗೆ ಬಗೆಬಗೆಯ ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತ ಸಮಯದಲ್ಲಿ ವೈದ್ಯರ ಅವಶ್ಯಕತೆ ಹೆಚ್ಚಿರುತ್ತದೆ. ಆದ್ದರಿಂದ ಕೂಡಲೇ ವೈದ್ಯರನ್ನು ನೇಮಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರಿಯಾಗಿ ಸಿಬ್ಬಂದಿಗಳು ಬರದಿದ್ದರೇ, ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಕೊಡುವ ಪರಿಸ್ಥಿತಿ ಎದುರಾದರೆ ಏನು ಮಾಡಬೇಕು? ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡು, ಕಟ್ಟಡವನ್ನು ಬೇರೆ ಕಡೆ ಸ್ಥಳಾಂತರಿಸಬೇಕು. – ಕೆಂಚಪ್ಪ ಪೂಜಾರಿ ಗ್ರಾಮಸ್ಥ.
ಮುತ್ತಗಾದಲ್ಲಿರುವ ಸಿಬ್ಬಂದಿಯೊಬ್ಬರೂ ಎರಡು ತಿಂಗಳ ಹಿಂದೆ ವರ್ಗಾವಣೆಯಾಗಿ ಹೋಗಿದ್ದಾರೆ.ಅಲ್ಲಿ ಭಂಕೂರ ಗ್ರಾಮದ ಪಶು ಆಸ್ಪತ್ರೆಯ ಒಬ್ಬ ಸಿಬ್ಬಂದಿಯೊಬ್ಬರನ್ನು ನಿಯೋಜಿಸಲಾಗಿದೆ.ಅಲ್ಲದೇ ಹೊಸ ಕಟ್ಟಡ ನಿರ್ಮಾಣಕ್ಕೆ ಪತ್ರ ಬರೆಯಲಾಗಿದೆ.ರೈತರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು.- ಡಾ. ನೀಲಪ್ಪ ಪಾಟೀಲ ಪಶು ವೈದ್ಯರು ಶಹಾಬಾದ.
ಆದಷ್ಟು ಬೇಗನೆ ಸಿಬ್ಬಂದಿಯೊಬ್ಬರನ್ನು ನೇಮಿಸಿ.ಕಟ್ಟಡದ ಸುತ್ತಲೂ ಬೆಳೆದ ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸಿ.ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿ. -ಡಾ.ಮಹೇಂದ್ರ ಕೋರಿ ಬಿಜೆಪಿ ಮುಖಂಡ ಮುತ್ತಗಾ.