ವಿಧಾನಸಭೆ ಅಧಿವೇಶನ ಯಶಸ್ವಿ: ಸಭಾಧ್ಯಕ್ಷ ಕಾಗೇರಿ ಹರ್ಷ

0
10

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ಕಳೆದ ಡಿಸೆಂಬರ್ 13 ರಿಂದ ಇಂದಿಯವರೆಗೆ 10 ದಿನಗಳ ಕಾಲ ನಡೆದ 15ನೇ ವಿಧಾನಸಭೆಯ 11ನೇ ಅಧಿವೇಶನವು ಯಶಸ್ವಿಯಾಗಿದೆ. ಕಾರ್ಯಕಲಾಪಗಳು ತೃಪ್ತಿಕರವಾಗಿ ನಡೆದಿವೆ. ಅಧಿವೇಶನಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಕೈಗೊಂಡ ವ್ಯವಸ್ಥೆ ಅಚ್ಟುಕಟ್ಟಾಗಿ ನಿರ್ವಹಣೆಯಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅಧಿವೇಶನದ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನ ಸಭಾಧ್ಯಕ್ಷರು, 10 ದಿನಗಳ ಕಾಲ ಸುಮಾರು 52 ಗಂಟೆಗಳ ಕಾರ್ಯಕಲಾಪಗಳು ಜರುಗಿದೆ. ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿದಂತೆ ಸದನದ ಎಲ್ಲಾ ಸದಸ್ಯರು ಯಶಸ್ವಿಗೆ ಕಾರಣರಾಗಿದ್ದಾರೆ. 150 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ 149 ಉತ್ತರವನ್ನು ಸರ್ಕಾರವು ಒದಗಿಸಿದೆ. 2032 ಚುಕ್ಕೆ ಗುರುತಿಲ್ಲದ  ಪ್ರಶ್ನೆಗಳಿಗೆ 1921 ಲಿಖಿತ ಉತ್ತರಗಳನ್ನು ನೀಡಲಾಗಿದೆ. ಅತಿವೃಷ್ಟಿ ಕುರಿತ ಚರ್ಚೆಯಲ್ಲಿ 37 ಸದಸ್ಯರು ಭಾಗವಹಿಸಿ ಸುಮಾರು 9 ಗಂಟೆಗಳ ಕಾಲ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಯಲ್ಲಿ 13 ಸದಸ್ಯರು ಭಾಗವಹಿಸಿ ಸುಮಾರು 6 ಗಂಟೆಗಳ ಕಾಲ ಚರ್ಚಿಸಿದ್ದಾರೆ.

Contact Your\'s Advertisement; 9902492681

ಶೂನ್ಯ ವೇಳೆಯಲ್ಲಿ 24 ಸೂಚನೆಗಳನ್ನು ಚರ್ಚಿಸಲಾಗಿದೆ. 350 ಗಮನ ಸೆಳೆಯುವ ಸೂಚನೆಗಳ ಪೈಕಿ 213 ಉತ್ತರಗಳನ್ನು ಸ್ವೀಕರಿಸಲಾಗಿದೆ. ಧನವಿನಿಯೋಗ ವಿಧೇಯಕ ಸೇರಿದಂತೆ 10 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಒಂದು ಹಕ್ಕು ಚ್ಯುತಿ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ, ಚರ್ಚಿಸಿ ತೀರ್ಮಾನಿಸಲಾಗಿದೆ. ಪೂರಕ ಅಂದಾಜುಗಳ ಎರಡನೇ ಕಂತು ಹಾಗೂ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಗೆ ಅಂಗೀಕಾರ ದೊರೆತಿದೆ. 2018ನೇ ಸಾಲಿನ ಕರ್ನಾಟಕ ಎಸ್.ಸಿ., ಎಸ್.ಟಿ. ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ, ಮೀಸಲಾತಿ ತಿದ್ದುಪಡೆ ವಿಧೇಯಕ ಹಿಂಪಡೆಯಲಾಗಿದೆ. ಕನ್ನಡ ಬಾವುಟ, ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಕಿಡಿಗೇಡಿಗಳು ಅಪಮಾನ ಮಾಡಿದ ಕೃತ್ಯವನ್ನು ಖಂಡಿಸಿ ಸದನವು ನಿರ್ಣಯ ಕೈಗೊಂಡಿದೆ ಎಂದರು.

ಈ ವರ್ಷ ಒಟ್ಟು 40 ದಿನಗಳ ಕಾಲ ಅಧಿವೇಶನ ನಡೆದಿದೆ. ಆಡಳಿತ ಹಾಗೂ ಪ್ರತಿ ಪಕ್ಷಗಳ ನಡುವೆ ಅಭಿಪ್ರಾಯ ಬೇಧಗಳು ಬಂದಾಗ ಅವರ ನಡುವೆ ಸಹಮತ ಮೂಡಿಸಿ ಸದನ ನಿರ್ವಹಿಸಲಾಗಿದೆ. ಅಧಿವೇಶನದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಯಬೇಕು ಎಂಬುವುದು ಸದಸ್ಯರ ಹಾಗೂ ಸರ್ಕಾರದ ಅಪೇಕ್ಷೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆ ಸದಸ್ಯರ ಸರಾಸರಿ ಹಾಜರಾತಿ ಶೇ. 75 ರಷ್ಟು ಇತ್ತು. ಸುಮಾರು 5000 ಜನರು ಗ್ಯಾಲರಿ ಮೂಲಕ ಕಲಾಪಗಳನ್ನು ಆಸಕ್ತಿಯಿಂದ ವೀಕ್ಷಣೆ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here