ಆಳಂದ: ತಾಲೂಕಿನ ಯಳಸಂಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಹಾಗೂ ಭಾಷಾ ಪ್ರಯೋಗಾಲಯಗಳ ಕೋಣೆ ಹಾಗೂ ಕೊಠಡಿಗಳ ನಯ ಬಾಗಿಲುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸಂತಬಾಯಿ ಅಕ್ಕಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇಸಿಓ ಪ್ರಕಾಶ ಕೊಟ್ರೆ ಅವರು, ಆಳಂದ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಪ್ರಯೋಗಾಲಯ ಗಳು ಬೆರಳಣಿಕೆಯಲ್ಲಿ ಇವೆ, ಗ್ರಾಮೀಣ ಮಟ್ಟದಲ್ಲೂ ವಿದ್ಯಾರ್ಥಿಗಳ ಕೌಶಲ್ಯತೆ ಹೆಚ್ಚಳಕ್ಕೆ ಪ್ರಯೋಗಾಲಯ ಅಗತ್ಯತೆ ಹೆಚ್ಚು, ಈ ಕಾರ್ಯ ಯಳಸಂಗಿ ಶಾಲೆಯಲ್ಲಿ ಆಗಿರುವುದು ಹೆಮ್ಮೆಯ ವಿಷಯ ಎಂದರು.
ಶಾಲೆಯಲ್ಲಿ ಪ್ರಾರಂಭಿಸಿದ ವಿಜ್ಞಾನ ಹಾಗೂ ಭಾಷಾ ಪ್ರಯೋಗಾಲಯಗಳನ್ನು ಸದೂಪಯೋಗ ಪಡಿಸಿಕೊಂಡು ತಾಲೂಕು, ಜಿಲ್ಲೆ ಹಾಗೂ ರಾಜ್ಯದಲ್ಲಿ ಹೊಸ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಪಾಟೀಲ್ ಮಾತನಾಡಿ, ಹೊಸದಾಗಿ ನಿರ್ಮಿಸಿರುವ ವಿಜ್ಞಾನ, ಭಾಷಾ ಪ್ರಯೋಗಾಲಯ ಸೇರಿದಂತೆ ಶಾಲೆಗೆ ಹೊಸ ಬಾಗಿಲುಗಳ ಅಳವಡಿಕೆಯು ಹಳೆ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳ ಕಾಣಿಕೆಗಳಿಂದ ಹಾಗೂ ಅವರುಗಳ ಸಹಕಾರದಿಂದ ಮಾಡಿರುವುದನ್ನು ನೆನೆದರು.
ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಅಭಿವೃದ್ಧಿಯಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದೂ ಈ ವೇಳೆ ಹೇಳಿದರು. ಎಸ್ ಡಿಎಂಸಿ ಅಧ್ಯಕ್ಷರಾದ ಮೋತಿರಾಮ ಚವ್ಹಾಣ್, ಹಳೆ ವಿದ್ಯಾರ್ಥಿ ಪಿಎಸ್ಐ ಬಸವರಾಜ ಜಂದೆ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದ ನಂತರ ಒಂಬತ್ತನೇ ಹಾಗೂ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ವಿಜ್ಞಾನದ ಕುರಿತಾದ ರಾಸಾಯನಿಕ ಕ್ರಿಯೆ, ಆಮ್ಲ, ಪ್ರತ್ಯಾಮ್ಲಿಯ ಕ್ರಿಯೆಗಳ ಪ್ರಾತ್ಯಕ್ಷಿಕೆ ಮಾಡಿದರು.
ಭಾಷಾ ಪ್ರಯೋಗಾಲಯ ದಲ್ಲಿ ಜ್ಞಾನಪೀಠ ಪುರಸ್ಕೃತರ , ವಿವಿಧ ಸಾಧಕರ ಭಾವಚಿತ್ರಗಳು ಸಹ ಕಂಡುಬಂದವು. ಅಲ್ಲದೇ, ವಿದ್ಯಾರ್ಥಿಗಳೇ ತಯಾರಿಸಿದ ಅಂಚೆ ಪೆಟ್ಟಿಗೆ ಮತ್ತಿತರ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು.
ಈ ಸಂದರ್ಭದಲ್ಲಿ ಸಿದ್ದಾರೂಢ ಐರೋಡಗಿ, ಜಗನ್ನಾಥ್ ಬಿರಾದಾರ್, ಸಿದ್ದಲಿಂಗ ಅತನೂರೆ, ಅಶೋಕ್ ಚವ್ಹಾಣ್, ಶೈಲಜಾ, ಶ್ವೇತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಭಾರತಿ ಧೋತ್ರೆ ನಿರೂಪಿಸಿದರು, ಸಾಗರ ಯಲ್ದೆ ಸ್ವಾಗತಿಸಿದರೆ, ಶಿಕ್ಷಕ ರಾದ ದಾಮೋದರ ಅವರು ವಂದಿಸಿದರು.